'ಆ ರೆಡ್ ಸಿಗ್ನಲ್ ಬಿದ್ದಿರದಿದ್ದರೆ ಇನ್ನೂ ದೊಡ್ಡ ಅನಾಹುತವೇ ಆಗ್ತಿತ್ತು'
ಮುಂಬೈ (ಮಹಾರಾಷ್ಟ್ರ), ಮಾರ್ಚ್ 14: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಗುರುವಾರ ಪಾದಚಾರಿ ಮೇಲ್ಸೇತುವೆ ಕುಸಿದು, ಐವರು ಮೃತಪಟ್ಟು, ಮೂವತ್ತಾರು ಮಂದಿ ಗಾಯಗೊಂಡಿದ್ದಾರೆ. ಆ ಮೇಲ್ಸೇತುವೆ ಸಮೀಪದ ಟ್ರಾಫಿಕ್ ಸಿಗ್ನಲ್ ಅಪಾರ ಸಂಖ್ಯೆಯ ವಾಹನ ಚಾಲಕರ ಪಾಲಿಗೆ ಜೀವ್ ಉಳಿಸಿದ ದೈವವಾಗಿದೆ.
ಮುಂಬೈ : ರೈಲ್ವೆ ಪಾದಚಾರಿ ಸೇತುವೆ ಕುಸಿತ, 4 ಸಾವು
ಒಂದು ವೇಳೆ ಸೇತುವೆ ಕುಸಿದ ಸಮಯದಲ್ಲಿ ಕೆಂಪು ಸಿಗ್ನಲ್ ಬೀಳದೆ ಇದ್ದಿದ್ದರೆ ಅದರ ಕೆಳಗೆ ಅದೆಷ್ಟು ಮಂದಿ ಹಾದು ಹೋಗಿರುತ್ತಿದ್ದರೋ? ಆಜಾದ್ ಮೈದಾನ್ ಪೊಲೀಸ್ ಠಾಣೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣದ ಮಧ್ಯೆ ಸಂಪರ್ಕದಂತೆ ಆ ಸೇತುವೆ ಇತ್ತು.
ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮದವರ ಜತೆ ಈ ಬಗ್ಗೆ ಮಾತನಾಡಿ, ಆ ಸಿಗ್ನಲ್ ಕೆಂಪಿತ್ತು. ಆದ್ದರಿಂದ ತಾಳ್ಮೆಗೆಟ್ಟು ಕಾಯುತ್ತಾ ಇದ್ದೆವು. ಆ ಸಿಗ್ನಲ್ ಹಸಿರಿಗೆ ತಿರುಗುವ ಮುನ್ನ ಮೇಲ್ಸೆತುವೆ ಕುಸಿಯಿತು. ಜತೆಗೆ ಅಲ್ಲಿದ್ದ ಜನರು ಕೆಳಗೆ ಬಿದ್ದರು. ಒಂದು ವೇಳೆ ಹಸಿರು ಸಿಗ್ನಲ್ ಇದ್ದಿದ್ದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಿರುತ್ತಿತ್ತು ಎಂದಿದ್ದಾರೆ.
ಇದೇ ಸಮಯಕ್ಕೆ ಇಡೀ ಮುಂಬೈನ ಜನರು ತಮ್ಮ ಮನೆಗಳಿಗೆ ಹಿಂತಿರುಗಲು ರೈಲು ನಿಲ್ದಾಣಕ್ಕೆ ಬರುತ್ತಾರೆ. ನಾವು ಕೂಡ ಬೇಗ ಮನೆಗೆ ಹೋಗಬೇಕೆಂದು ಇದ್ದೆವು. ಆದರೆ ಆ ಸಿಗ್ನಲ್ ಕೆಂಪು ಇದ್ದಿದ್ದಕ್ಕೆ ಈಗ ಸಮಾಧಾನ ಅನ್ನಿಸುತ್ತಿದೆ. ಇಲ್ಲದಿದ್ದರೆ ನನಗೆ ಕೂಡ ಗಾಯವಾಗುತ್ತಿತ್ತು ಎಂದು ಹೇಳಿದ್ದಾರೆ.
ಮತ್ತೊಬ್ಬರು ಟ್ಯಾಕ್ಸಿ ಚಾಲಕ ಅಪಾಯದಿಂದ ಪಾರಾಗಿದ್ದು, ಅವರ ವಾಹನಕ್ಕೆ ಸಣ್ಣ ಪ್ರಮಾಣದ ಹಾನಿ ಆಗಿದೆ. ಆ ಟ್ಯಾಕ್ಸಿ ಹಿಂದೆ ಇದ್ದವರು ಸರಿಯಾದ ಸಮಯಕ್ಕೆ ಆತನನ್ನು ತಡೆದಿದ್ದಾರೆ. ಆ ಮೂಲಕ ದೊಡ್ಡ ಅನಾಹುತ ತಪ್ಪಿದೆ.