ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಸುಳಿವು: ಅಂಬಾನಿ ನಿವಾಸಕ್ಕೆ ಹೆಚ್ಚಿದ ಭದ್ರತೆ
ಮುಂಬೈ, ನವೆಂಬರ್ 09: ಉದ್ಯಮಿ ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾ ಕುರಿತಾಗಿ ಇಬ್ಬರು ವ್ತಕ್ತಿಗಳು ವಿಚಾರಣೆ ಮಾಡುತ್ತಿದ್ದ ಹಿನ್ನೆಲೆ ಈ ಅನುಮಾನಾಸ್ಪದ ಪ್ರಯಾಣಿಕರ ಬಗ್ಗೆ ಪೊಲೀಸರಿಗೆ ಟ್ಯಾಕ್ಸಿ ಚಾಲಕರೋರ್ವರು ಸುಳಿವು ನೀಡಿದ್ದಾರೆ. ಈ ಬೆನ್ನಲ್ಲೇ ಉದ್ಯಮಿ ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, "ಇಬ್ಬರು ವ್ಯಕ್ತಿಗಳು ಉದ್ಯಮಿ ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಈ ಬೆನ್ನಲ್ಲೇ ಆಂಟಿಲಿಯಾ ನಿವಾಸದಲ್ಲಿ ಭದ್ರತೆಯನ್ನು ಅಧಿಕ ಮಾಡಲಾಗಿದೆ. ಕಟ್ಟಡದ ಎಲ್ಲಾ ಸಿಸಿಟಿವಿ ದೃಶ್ಯಾವಳಿಯನ್ನು ಸಹ ಪರಿಶೀಲನೆ ಮಾಡಲಾಗುತ್ತಿದೆ," ಎಂದು ತಿಳಿಸಿದ್ದಾರೆ.
ಅಂಬಾನಿ ಮನೆ ಬಾಂಬ್ ಬೆದರಿಕೆ: ಸಚಿನ್ ವಾಜೆ ಸೇವೆಯಿಂದ ವಜಾ
"ನಮಗೆ ಟ್ಯಾಕ್ಸಿ ಚಾಲಕರು ಒಬ್ಬರು ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಇಬ್ಬರು ವ್ಯಕ್ತಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ ಎಂದು ಟ್ಯಾಕ್ಸಿ ಚಾಲಕ ಕರೆ ಮಾಡಿ ತಿಳಿಸಿದ್ದಾರೆ," ಎಂದು ಮಾಧ್ಯಮಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
"ಈ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಅಧಿಕ ಮಾಹಿತಿ ನೀಡಿರುವ ಈ ಟ್ಯಾಕ್ಸಿ ಚಾಲಕ, ಈ ವ್ಯಕ್ತಿಗಳ ಬಳಿ ಬ್ಯಾಗ್ ಇತ್ತು ಎಂದು ತಿಳಿಸಿದ್ದಾರೆ. ತನ್ನ ಬಳಿ ವಿಳಾಸ ಕೇಳಿದ ಇಬ್ಬರ ಕೈಯಲ್ಲಿ ಬ್ಯಾಗ್ ಇತ್ತು. ಈ ಹಿನ್ನೆಲೆ ನಾನು ಕೂಡಲೆ ನಿಮಗೆ ಕರೆ ಮಾಡಿದ್ದೇನೆ ಎಂದು ಚಾಲಕ ಹೇಳಿದ್ದಾನೆ," ಎಂದು ಪೊಲೀಸರು ವಿವರಿಸಿದ್ದಾರೆ.
ಚಾಲಕ ನೀಡಿದ ಹೇಳಿಕೆಯನ್ನು ನಾವು ದಾಖಲು ಮಾಡಿಕೊಳ್ಳುತ್ತಿದ್ದೇವೆ. ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾ ಸುತ್ತಲಿನ ಪರಿಸ್ಥಿತಿಯನ್ನು ಹಿರಿಯ ಅಧಿಕಾರಿಯೊಬ್ಬರು ಅವಲೋಕನ ಮಾಡುತ್ತಿದ್ದಾರೆ ಎಂದು ಕೂಡಾ ಪೊಲೀಸರು ಹೇಳಿದ್ದಾರೆ.
ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಪತ್ತೆಯಾಗಿದ್ದ ಬಾಂಬ್
ಫೆಬ್ರವರಿಯಲ್ಲಿ ಖ್ಯಾತ ಉದ್ಯಮಿ ಅನಿಲ್ ಅಂಬಾನಿಯ ಮುಂಬೈನಲ್ಲಿರುವ ಅಂಟಿಲಿಯಾ ನಿವಾಸದ ಮುಂಭಾಗದಲ್ಲಿ ಸ್ಪೋಟಕಗಳನ್ನು ತುಂಬಿದ್ದ ಎಸ್ಯುವಿಯೊಂದು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಿಂದಾಗಿ ಭಾರೀ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಈ ವಾಹನದಲ್ಲಿ ಯಾರೂ ಇರಲಿಲ್ಲ. ಹಲವು ಸಮಯದಿಂದ ಅಲ್ಲಿಯೇ ವಾಹನ ನಿಂತಿದ್ದನ್ನು ಮತ್ತು ಅದರಲ್ಲಿ ಯಾರೂ ಇಲ್ಲದಿರುವುದನ್ನು ಕಂಡ ಅಂಬಾನಿ ಅವರ ಭದ್ರತಾ ತಂಡವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಪಾಸಣೆ ನಡೆಸಿ ಅನುಮಾನದಿಂದ ಪೊಲೀಸರು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿಕೊಂಡಿದ್ದರು.
ಅಂಬಾನಿಗೆ ಬಾಂಬ್ ಬೆದರಿಕೆ: ಇನ್ನೂ ಇಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಸಚಿನ್ ವಾಜೆ
ಬಾಂಬ್ ನಿಷ್ಕ್ರಿಯ ದಳವು ಕಾರನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಸ್ಪೋಟಕ ಇರುವುದು ಪತ್ತೆಯಾಗಿದೆ. ಇನ್ನು ಕಾರಿನಲ್ಲಿ ಪತ್ರವೊಂದು ಸಹ ದೊರಕಿದ್ದು, 'ಇದು ಟ್ರೇಲರ್ ಅಷ್ಟೇ' ಎಂಬ ಎಚ್ಚರಿಕೆ ನೀಡಲಾಗಿದೆ. ಇನ್ನು ಈ ಕಾರು ಕಳ್ಳತನದ ಕಾರಾಗಿದ್ದು, ಈ ಘಟನೆ ನಡೆದು ಕೆಲವೇ ದಿನದಲ್ಲಿ ಕಾರಿನ ಮಾಲೀಕ ಮನ್ಸುಖ್ ಹಿರೇನ್ ಮೃತ ದೇಹ ಥಾಣೆಯ ಒಂದು ಕೊಳದಲ್ಲಿ ಪತ್ತೆಯಾಗಿದೆ. ಪೊಲೀಸರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ತನ್ನ ಪತಿಯ ಸಾವಿಗೆ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಾಜೆ ಕಾರಣ ಎಂದು ಮನ್ಸುಖ್ ಹಿರೇನ್ ಪತ್ನಿ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸಚಿನ್ ವಾಜೆ ಸೇವೆಯಿಂದ ಅಮಾನತುಗೊಂಡಿದ್ದಾರೆ. ಹಾಗೆಯೇ ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಇನ್ನೂ ಎರಡು ಕೊಲೆಗಳನ್ನು ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪ ಮಾಡಲಾಗಿದೆ. ಎನ್ಕೌಂಟರ್ ತಜ್ಞರಾಗಿದ್ದ ಸಚಿನ್ ವಾಜೆ ಸುಮಾರು 63 ಎನ್ಕೌಂಟರ್ಗಳಲ್ಲಿ ಪಾಲ್ಗೊಂಡಿದ್ದರು ಎಂಬುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.
Recommended Video
(ಒನ್ಇಂಡಿಯಾ ಸುದ್ದಿ)