ಮುಕೇಶ್ ಅಂಬಾನಿಗೆ ಬಾಂಬ್ ಬೆದರಿಕೆ: ಟೆಲಿಗ್ರಾಂ ಚಾನೆಲ್ ಸೃಷ್ಟಿಯಾಗಿದ್ದು ತಿಹಾರ್ ಜೈಲಿನಲ್ಲಿ
ಮುಂಬೈ, ಮಾರ್ಚ್ 11: ಮುಕೇಶ್ ಅಂಬಾನಿ ಅವರ ನಿವಾಸದ ಮುಂದೆ ಫೆ. 25ರಂದು ಸ್ಫೋಟಕ ಪತ್ತೆಯಾದ ಪ್ರಕರಣ ಮತ್ತಷ್ಟು ನಿಗೂಢವಾಗಿದ್ದು, ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದು ಸಾಮಾನ್ಯ ಬೆದರಿಕೆ ತಂತ್ರವಲ್ಲ, ಬದಲಾಗಿ ದೊಡ್ಡ ಮಟ್ಟದ ಸಂಚು ಇದರ ಹಿಂದೆ ಇದೆ ಎಂಬ ಗುಮಾನಿ ಹೆಚ್ಚಾಗಿದೆ.
ಮುಕೇಶ್ ಅಂಬಾನಿ ಮುಂದೆ ಸ್ಕಾರ್ಪಿಯೋ ಕಾರ್ನಲ್ಲಿ ಜಿಲೆಟಿನ್ ಕಡ್ಡಿಗಳು ಹಾಗೂ ಬೆದರಿಕೆ ಪತ್ರ ಪತ್ತೆಯಾಗಿರುವುದಕ್ಕೆ ತಾನೇ ಹೊಣೆ ಎಂದು ಹೇಳಿಕೊಂಡಿದ್ದ ಜೈಶ್ ಉಲ್ ಹಿಂದ್ ಉಗ್ರ ಸಂಘಟನೆಯ 'ಟೆಲಿಗ್ರಾಮ್ ಚಾನೆಲ್' ದೆಹಲಿಯ ತಿಹಾರ್ ಜೈಲಿನಲ್ಲಿ ಸೃಷ್ಟಿಯಾಗಿತ್ತು ಎಂದು ಖಾಸಗಿ ಸೈಬರ್ ಸಂಸ್ಥೆಯೊಂದು ತಿಳಿಸಿದೆ.
ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ನಿಗೂಢ ಸಾವಿನ ಹಿಂದೆ ಪೊಲೀಸ್ ಅಧಿಕಾರಿ ಕೈವಾಡ?
ಟೆಲಿಗ್ರಾಮ್ ಚಾನೆಲ್ ಅನ್ನು ಸೃಷ್ಟಿಸಿದ ಮೊಬೈಲ್ ಫೋನ್ನ ಸ್ಥಳವನ್ನು ಪತ್ತೆಹಚ್ಚುವಂತೆ ತನಿಖಾ ಸಂಸ್ಥೆಯು ಈ ಖಾಸಗಿ ಸಂಸ್ಥೆಗೆ ಸೂಚನೆ ನೀಡಿದೆ ಎಂದು ಇಂಡಿಯನ್ಸ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಬಾಂಬ್ ಬೆದರಿಕೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸುತ್ತಿದೆ. ಈ ಬೆದರಿಕೆ ಇರಿಸಿದ್ದು ತಾನೇ ಎಂದು ಜೈಶ್ ಉಲ್ ಹಿಂದ್ ಸಂಘಟನೆಯ ಟೆಲಿಗ್ರಾಂ ಚಾನೆಲ್ ಹೇಳಿಕೊಂಡಿತ್ತು. ಆದರೆ ಸಂಘಟನೆ ತನ್ನ ಸಾಮಾಜಿಕ ಜಾಲತಾಣದಲ್ಲಿ, ಈ ಘಟನೆಗೂ ತನಗೂ ಸಂಬಂಧವಿಲ್ಲ. ಇದೆಲ್ಲ ಪೊಲೀಸರ ಕಟ್ಟು ಕಥೆ ಎಂದು ಆರೋಪಿಸಿತ್ತು.
ಖಾಸಗಿ ಸೈಬರ್ ಸಂಸ್ಥೆ ಸಿದ್ಧಪಡಿಸಿರುವ ವಿಶ್ಲೇಷಣಾ ವರದಿಯು, ಈ ಟೆಲಿಗ್ರಾಮ್ ಚಾನೆಲ್ ಅನ್ನು ಟಿಒಆರ್ ನೆಟ್ವರ್ಕ್ ಮೂಲಕ ಸೃಷ್ಟಿಸಲಾಗಿದೆ ಎಂದು ತಿಳಿಸಿದೆ. ಟಿಒಆರ್ ನೆಟ್ವರ್ಕ್ ಅನ್ನು ಡಾರ್ಕ್ ವೆಬ್ಗಳ ಸಂಪರ್ಕಕ್ಕೆ ಬಳಸಲಾಗುತ್ತದೆ. ತಿಹಾರ್ ಜೈಲ್ನಿಂದ ಅಥವಾ ಜೈಲಿನ ಸಮೀಪದಿಂದ ಮೊಬೈಲ್ ಉಪಕರಣದಲ್ಲಿ ಸಿಮ್ ಕಾರ್ಡ್ ಬಳಸಿ ಅದನ್ನು ಸೃಷ್ಟಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಂಬಾನಿ ನಿವಾಸದೆದುರು ಸ್ಪೋಟಕ ವಾಹನ ಪತ್ತೆ ಪ್ರಕರಣ: ರಹಸ್ಯವನ್ನು ಬಯಲಿಗೆಳೆಯುತ್ತೇವೆ ಎಂದ ಉದ್ಧವ್ ಠಾಕ್ರೆ
ಫೆಬ್ರವರಿ 26ರಂದು ಮಧ್ಯಾಹ್ನ 3.20ರ ಸುಮಾರಿಗೆ ಚಾನೆಲ್ ಸೃಷ್ಟಿಸಲಾಗಿದೆ. ಆಂಟಿಲಿಯಾ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ತಾನೇ ಹೊಣೆ ಎಂದು ಹೇಳುವ ಸಂದೇಶವನ್ನು ಫೆ. 27ರ ರಾತ್ರಿ ಟೆಲಿಗ್ರಾಮ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಫೆ. 28ರಂದು ಜೈಶ್ ಉಲ್ ಹಿಂದ್ನದ್ದು ಎಂದು ಹೇಳಿಕೊಳ್ಳಲಾದ ಮತ್ತೊಂದು ಗುಂಪು ಬೇರೆ ಟೆಲಿಗ್ರಾಮ್ ಚಾನೆಲ್ನಲ್ಲಿ, ಈ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ. ಈ ಸಂದೇಶ ಹಾಕಿರುವುದು ತಾವಲ್ಲ ಎಂದು ಹೇಳಿತ್ತು. ಇದರ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗದೆ ಇದ್ದರೂ, ಇದು ವಿದೇಶದಿಂದ ಕಳುಹಿಸಿರುವ ಸಂದೇಶ ಎಂದು ಪೊಲೀಸರು ಅನುಮಾನಿಸಿದ್ದರು.