ಮುಕೇಶ್ ಅಂಬಾನಿಗೆ ಬೆದರಿಕೆ ಪ್ರಕರಣ: ಸ್ಫೋಟಕ ಪತ್ತೆಗೂ ಕೆಲವು ದಿನ ಮುಂಚೆ ವಾಜೆ-ಹಿರೇನ್ ಭೇಟಿ
ಮುಂಬೈ, ಮಾರ್ಚ್ 19: ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಹಾಗೂ ಬೆದರಿಕೆ ಪತ್ರವಿದ್ದ ವಾಹನ ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸುತ್ತಿದ್ದ ಇನ್ನೂ ಎರಡು ಐಷಾರಾಮಿ ಕಾರುಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಪಡಿಸಿಕೊಂಡಿದೆ.
ಅವುಗಳಲ್ಲಿ ಒಂದು ವಾಹನ ಟೊಯೊಟೊ ಪ್ರಾಡೊ, ರತ್ನಗಿರಿಯ ಶಿವಸೇನಾ ಪದಾಧಿಕಾರಿ ವಿಜಯಕುಮಾರ್ ಗಣಪತ್ ಭೋಸ್ಲೆ ಹೆಸರಲ್ಲಿ ನೋಂದಣಿಯಾಗಿದೆ. ಮತ್ತೊಂದು ವಾಹನ ಮರ್ಸಿಡಿಸ್ ಬೆಂಜ್.
ಮೂರು ದಿನಗಳ ಹಿಂದೆ ವಾಜೆ ಬಳಸುತ್ತಿದ್ದ ಕಪ್ಪು ಮರ್ಸಿಡಿಸ್ ಒಂದನ್ನು ಎನ್ಐಎ ವಶಪಡಿಸಿಕೊಂಡಿತ್ತು. ಥಾಣೆ ಆಟೊಮೊಬೈಲ್ ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣವನ್ನು ತನಿಖೆ ನಡೆಸುತ್ತಿರುವ ರಾಜ್ಯ ಭಯೋತ್ಪಾದನಾ ನಿಗ್ರಹ ದಳವು ವಾಜೆಯನ್ನು ತನ್ನ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿದೆ. ಸ್ಫೋಟಕ ಪತ್ತೆಯಾದ ಸ್ಕಾರ್ಪಿಯೋ ವಾಹನ ಮನ್ಸುಖ್ ಹಿರೇನ್ ಅವರಿಗೆ ಸೇರಿದ್ದು, ಅದನ್ನು ಸಚಿನ್ ವಾಜೆ ಕೆಲವು ದಿನ ಬಳಸಿದ್ದರು. ಮುಂದೆ ಓದಿ.
ಸ್ಫೋಟಕ ತುಂಬಿದ್ದ ವಾಹನಕ್ಕೆ ಸ್ವತಃ ಬೆಂಗಾವಲಾಗಿ ತೆರಳಿದ್ದ ಪೊಲೀಸ್ ಅಧಿಕಾರಿ
ಓಲಾದಲ್ಲಿ ತೆರಳಿದ್ದ ಹಿರೇನ್
ಈ ನಡುವೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿರುವ ಎನ್ಐಎ ಮತ್ತು ಎಟಿಎಸ್, ಫೆಬ್ರವರಿ 17ರಂದು ಫೋರ್ಟ್ನ ಜಿಪಿಒ ಬಳಿ ಮರ್ಸಿಡಿಸ್ನಲ್ಲಿ ಹಿರೇನ್ ಮತ್ತು ವಾಜೆ ಸುಮಾರು ಹತ್ತು ನಿಮಿಷ ಮಾತುಕತೆ ನಡೆಸಿರುವುದನ್ನು ಬಹಿರಂಗಪಡಿಸಿವೆ. ತಮ್ಮ ಸ್ಕಾರ್ಪಿಯೋ ಕಾರು ಮುಕುಂಡ್-ಐರೋಲಿ ರಸ್ತೆಯಲ್ಲಿ ಹಾಳಾಗಿದ್ದರಿಂದ ಓಲಾ ಕ್ಯಾಬ್ನಲ್ಲಿ ದಕ್ಷಿಣ ಮುಂಬೈಗೆ ಪ್ರಯಾಣಿಸಿದ್ದಾಗಿ ತಿಳಿಸಿದ್ದರು.
16 ವರ್ಷದ ಬಳಿಕ ಸೇವೆಗೆ, 9 ತಿಂಗಳ ಬಳಿಕ ಮತ್ತೆ ಅಮಾನತು!: ಸಚಿನ್ ವಾಜೆಯ ಕುತೂಹಲಕಾರಿ ಕಥೆ!
ವಾಜೆ-ಹಿರೇನ್ ಭೇಟಿ
ತಮ್ಮ ಕಚೇರಿ ಇರುವ ಮುಂಬೈ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಮರ್ಸಿಡಿಸ್ನಲ್ಲಿ ವಾಜೆ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಅವರ ಕಾರು ಸಿಎಸ್ಎಂಟಿ ಮುಖ್ಯ ಸಂಚಾರ ಸಿಗ್ನಲ್ ಬಳಿ ಮತ್ತೆ ಪತ್ತೆಯಾಗಿದೆ. ಹಸಿರು ಸಿಗ್ನಲ್ ಬಿದ್ದಿದ್ದರೂ ಮರ್ಸಿಡಿಸ್ ಅಲ್ಲಿಂದ ಮುಂದೆ ಸಾಗಿರಲಿಲ್ಲ. ಈ ವೇಳೆ ವಾಜೆ ತಮ್ಮ ಕಾರಿನ ಪಾರ್ಕಿಂಗ್ ಲೈಟ್ಗಳನ್ನು ಹೊತ್ತಿಸಿದ್ದರು.
ಕೆಲವು ಸೆಕೆಂಡುಗಳ ಬಳಿಕ ಹಿರೇನ್ ಮನ್ಸುಖ್, ರಸ್ತೆ ದಾಟಿ ಬಂದು ಮರ್ಸಿಡಿಸ್ ಒಳಗೆ ಕೂತಿದ್ದಾರೆ. ಬಳಿಕ ಈ ಕಾರನ್ನು ಜಿಪಿಒ ಬಳಿಯ ರಸ್ತೆಯ ಬದಿ ನಿಲ್ಲಿಸಲಾಗಿತ್ತು. ಅಲ್ಲಿ ಸುಮಾರು 10 ನಿಮಿಷಗಳ ಬಳಿಕ ಹಿರೇನ್ ಕಾರ್ನಿಂದ ಇಳಿದಿದ್ದಾರೆ. ನಂತರ ಮರ್ಸಿಡಿಸ್ ಪೊಲೀಸ್ ಕೇಂದ್ರ ಕಚೇರಿಗೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ವಾಜೆಯಿಂದ ಫೋನ್ ಕರೆ
ತಮ್ಮ ಕಾರು ಹಾಳಾಗಿದ್ದ ದಿನ ಹಿರೇನ್ ಅವರು ಓಲಾದಲ್ಲಿ ಪ್ರಯಾಣಿಸುವಾಗಿ ಸುಮಾರು ಐದು ಕರೆಗಳನ್ನು ಸ್ವೀಕರಿಸಿದ್ದರು ಎಂದು ಓಲಾ ಕ್ಯಾಬ್ ಚಾಲಕ ತಿಳಿಸಿದ್ದಾನೆ. ಈ ಕರೆಗಳನ್ನು ವಾಜೆ ಅವರೇ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೊದಲು ಪೊಲೀಸ್ ಕೇಂದ್ರ ಕಚೇರಿ ಎದುರಿನ ರೂಪಂ ಶೋರೂಂ ಎದುರು ಭೇಟಿಯಾಗುವಂತೆ ಹೇಳಿದ್ದರು. ಆದರೆ ಕೊನೆಯ ಕರೆಯಲ್ಲಿ ಸಿಎಸ್ಎಂಟಿ ಎದುರು ಬರುವಂತೆ ಹೇಳಿದ್ದರು ಎನ್ನಲಾಗಿದೆ.
ಅಂಬಾನಿಗೆ ಬೆದರಿಕೆ: ಪೊಲೀಸ್ ಕೇಂದ್ರ ಕಚೇರಿಯಲ್ಲೇ ಇತ್ತು ಸ್ಫೋಟಕ ಪ್ರಕರಣದಲ್ಲಿ ಬಳಸಿದ ಕಾರು!
ಕಾರ್ ಮಾರಾಟ ಮಾಡಿದ್ದರು
ಮಾರ್ಚ್ 16ರಂದು ಎನ್ಐಎ ವಶಪಡಿಸಿಕೊಂಡ ಮರ್ಸಿಡಿಸ್ ಕಾರ್ ಮಾಲೀಕ ಸುರೇಶ್ ಭವ್ಸಾರ್, ತಾವು ಫೆಬ್ರವರಿಯಲ್ಲಿಯೇ ಕಾರ್ ವ್ಯಾಪಾರ ಕಂಪೆನಿಯೊಂದಕ್ಕೆ ಮಾರಾಟ ಮಾಡಿದ್ದು, ತಮಗೂ ವಾಜೆ ಅವರಿಗೂ ಯಾವುದೇ ಸಂಪರ್ಕ ಇರಲಿಲ್ಲ ಎಂದಿದ್ದಾರೆ.
ಸಚಿನ್ ವಾಜೆ ಮುಖ್ಯಸ್ಥರಾಗಿದ್ದ ಸಿಐಯುದ ಇಬ್ಬರು ಸಿಬ್ಬಂದಿ ಮತ್ತು ಕ್ರೈಂ ಬ್ರ್ಯಾಂಚ್ನ ಒಂಬತ್ತು ಸಿಬ್ಬಂದಿಯನ್ನು ಎನ್ಐಎ ಇದುವರೆಗೂ ವಿಚಾರಣೆಗೆ ಒಳಪಡಿಸಿದೆ.