ಎನ್ಐಎ ತನಿಖೆ ನಡುವೆಯೇ ಮುಂಬೈ ಪೊಲೀಸ್ ಆಯುಕ್ತರ ವರ್ಗಾವಣೆ
ಮುಂಬೈ, ಮಾರ್ಚ್ 17: ಮಹತ್ವದ ಬೆಳವಣಿಗೆಯಲ್ಲಿ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಹೇಮಂತ್ ನಗ್ರಲೆ ಅವರನ್ನು ನೇಮಿಸಲಾಗಿದೆ.
ಮುಕೇಶ್ ಅಂಬಾನಿ ಅವರ ಆಂಟಿಲಿಯಾ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಸಿಐಯು ಪೊಲೀಸ್ ಅಧಿಕಾರಿ, ಎನ್ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಅವರನ್ನು ಎನ್ಐಎ ಬಂಧಿಸಿ, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸ್ಫೋಟಕ ತುಂಬಿದ್ದ ಸ್ವತಃ ವಾಹನಕ್ಕೆ ಬೆಂಗಾವಲಾಗಿ ತೆರಳಿದ್ದ ಪೊಲೀಸ್ ಅಧಿಕಾರಿ
ಸಚಿನ್ ವಾಜೆ ಅವರನ್ನು ಕಳೆದ ಜೂನ್ ತಿಂಗಳಲ್ಲಿ 16 ವರ್ಷಗಳ ಅಮಾನತು ಶಿಕ್ಷೆ ಬಳಿಕ ಪೊಲೀಸ್ ಇಲಾಖೆಗೆ ಮರಳಿ ಸೇರ್ಪಡೆ ಮಾಡಲಾಗಿತ್ತು. ಇದರಲ್ಲಿ ಪರಂಬೀರ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಹೀಗಾಗಿ ಮುಕೇಶ್ ಅಂಬಾನಿ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದ ಪ್ರಕರಣದಲ್ಲಿ ಪರಂಬೀರ್ ಕೈವಾಡದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. ಈ ನಡುವೆ ಪರಂಬೀರ್ ವರ್ಗಾವಣೆ ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪರಂವೀರ್ ಅವರನ್ನು ಡಿಜಿಪಿ ಗೃಹರಕ್ಷಕ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿದ್ದ ರಜನೀತ್ ಸೇಥ್ ಅವರನ್ನು ಮಹಾರಾಷ್ಟ್ರದ ತಾತ್ಕಾಲಿಕ ಡಿಜಿಪಿಯನ್ನಾಗಿ ನೇಮಿಸಲಾಗಿದೆ.
ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮನೆಯಿಂದ ಡಿವಿಆರ್ ವಶ: ಎನ್ಐಎ ತನಿಖೆ
1987ರ ಮಹಾರಾಷ್ಟ್ರ ಕೇಡರ್ ಅಧಿಕಾರಿಯಾಗಿರುವ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಗ್ರಲೆ, 2014ರಲ್ಲಿ ಅಲ್ಪ ಸಮಯದವರೆಗೆ ಮುಂಬೈ ಕಮಿಷನರ್ ಆಗಿದ್ದರು. 2016ರ ಮೇ ತಿಂಗಳಿನಿಂದ 2018ರ ಜುಲೈವರೆಗೂ ಅವರು ನವಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದರು.