ಪಾಕೆಟ್ ಮನಿ ನೀಡಿಲ್ಲವೆಂದು ಅಮ್ಮನನ್ನೇ ಕೊಲೆಮಾಡಿದನಾ ಮಗ?
ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012 ರ ಶೀನಾ ಬೋರಾ ಹತ್ಯೆ ಪ್ರಕರಣವನ್ನು ಭೇದಿಸುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಧ್ಯಾನೇಶ್ವರ್ ಗ್ಯಾನೋರ್ ಪತ್ನಿ ದೀಪಾಲಿ ಗ್ಯಾನೋರ್ ಮೇ 24 ಮಂಗಳವಾರದಂದು ತಮ್ಮ ಮುಂಬೈ ನಿವಾಸದಲ್ಲಿ ನಿಗೂಢವಾಗಿ ಕೊಲೆಯಾದ ಘಟನ
ಮುಂಬೈ, ಮೇ 25: ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012 ರ ಶೀನಾ ಬೋರಾ ಹತ್ಯೆ ಪ್ರಕರಣವನ್ನು ಭೇದಿಸುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಧ್ಯಾನೇಶ್ವರ್ ಗ್ಯಾನೋರ್ ಪತ್ನಿ ದೀಪಾಲಿ ಗ್ಯಾನೋರ್ ಮೇ 24 ಮಂಗಳವಾರದಂದು ತಮ್ಮ ಮುಂಬೈ ನಿವಾಸದಲ್ಲಿ ನಿಗೂಢವಾಗಿ ಕೊಲೆಯಾದ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರ ದೇಹದ ಪಕ್ಕ ಸಿಕ್ಕ ಚಾಕು ಮತ್ತು ರಕ್ತದಿಂದಲೇ ಬರೆದ ಒಂದು ವಾಕ್ಯ ಕೊಲೆಗಾರನ ಪತ್ತೆಗೆ ಮಹತ್ವದ ಸುಳಿವು ಎನ್ನಿಸಿಸದೆ.
ಆಕೆಯ ರಕ್ತದಲ್ಲೇ ಬರೆದ, 'ನಂಗೆ ಇವರ ಸಹವಾಸ ಸಾಕಾಗಿದೆ, ನನ್ನನ್ನು ಹಿಡಿಯಿರಿ, ನೇಣಿಗೆ ಹಾಕಿ...' ಎಂಬ ವಾಕ್ಯ ಮತ್ತು ಕೊಲೆಯಾದ ದಿನದಿಂದ ಕಾಣೆಯಾದ ಇವರ ಮಗನಿಂದಾಗಿ ಆತನೇ ಕೊಲೆಮಾಡಿರಬಹುದೆಂಬ ದಟ್ಟ ಅನುಮಾನ ಹಬ್ಬಿದೆ. ತಾಯಿ ಪಾಕೆಟ್ ಮನಿ ನೀಡಿಲ್ಲ ಎಂಬ ಕಾರಣಕ್ಕೇ ಆಕೆಯನ್ನು ಕೊಲೆಮಾಡಲಾಗಿದೆ ಎಂದು ಪೊಲೀಸರು ಮೊದಲ ಹಂತದ ತನಿಖೆಯಲ್ಲಿ ಊಹಿಸಿದ್ದಾರೆ.
ಬೆಳಿಗ್ಗಿನ ಜಾವ 3:30ರ ಸುಮಾರಿಗೆ ಡ್ಯೂಟಿ ಮುಗಿಸಿ ಮನೆಗೆ ಬಂದ ಧ್ಯಾನೇಶ್ವರ್ ಗ್ಯಾರೋನ್, ಪತ್ನಿಯ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಹೌಹಾರಿ, ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ನಾಪತ್ತೆಯಾದ ಪುತ್ರನ ಶೋಧಕ್ಕೆ ಪೊಲೀಸರು ಬಲೆಬೀಸಿದ್ದು, ಕೊಲೆ ಮಾಡಿದ್ದು ಈತನೇ ಎಂದು ದೃಢವಾದಲ್ಲಿ, ಪಾಕೆಟ್ ಮನಿ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿಯನ್ನೇ ಸಾಯಿಸುವಷ್ಟು ವಿಪರೀತಕ್ಕೆ ಮಕ್ಕಳು ಹೋಗುತ್ತಾರೆಂಬುದು ನಿಜಕ್ಕೂ ಶೋಚನೀಯ, ಆಘಾತಕಾರಿ!