ಶುಚಿತ್ವದ ಪಾಠ ಹೇಳಿದ 'ವಿರುಷ್ಕಾ'ಗೆ ಅಮ್ಮ-ಮಗನಿಂದ ತರಾಟೆ
Recommended Video
ಮುಂಬೈ, ಜೂನ್ 18: ಕಾರ್ನಿಂದ ಕಸ ಹೊರಹಾಕಿದ್ದಕ್ಕೆ ಯುವಕನನ್ನು ಬೈದು, ಅದರ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಾಕಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ವಿರುದ್ಧ ಆ ಯುವಕ ಮತ್ತು ಆತನ ತಾಯಿ ಹರಿಹಾಯ್ದಿದ್ದಾರೆ.
ಕಾರ್ನಲ್ಲಿ ಹೋಗುತ್ತಿದ್ದ ವಿರುಷ್ಕಾ ದಂಪತಿಗೆ ತಮ್ಮ ಮುಂದೆ ಹೋಗುತ್ತಿದ್ದ ಕಾರ್ನಿಂದ ಪ್ಲಾಸ್ಟಿಕ್ ವಸ್ತುವೊಂದು ಹೊರ ಬಿದ್ದಿದ್ದು ಕಾಣಿಸಿತ್ತು. ಕೂಡಲೇ ಆ ಕಾರಿನ ಬಳಿ ತೆರಳಿ ಅದರಲ್ಲಿದ್ದ ಯುವಕನನ್ನು ಅನುಷ್ಕಾ ತರಾಟೆಗೆ ತೆಗೆದುಕೊಂಡಿದ್ದರು.
ಸ್ವಚ್ಛತೆ ಬಗ್ಗೆ ಪಾಠ ಮಾಡಿದ ವಿರುಷ್ಕಾಗೆ ತಿರುಗೇಟು
ಅದನ್ನು ತಮ್ಮ ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿದ್ದ ವಿರಾಟ್, ಬಳಿಕ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು.
ಯುವಕನ ನಡೆಯನ್ನು ಖಂಡಿಸಿ ಅನೇಕರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇನ್ನು ಕೆಲವರು ಅವಾಚ್ಯ ಶಬ್ಧಗಳಿಂದ ಆತನನ್ನು ನಿಂದಿಸುವ ಹಂತಕ್ಕೂ ತಲುಪಿದ್ದರು. ಆದರೆ, ಇನ್ನು ಕೆಲವರು ಆ ಯುವಕನ ಪರ ಧ್ವನಿ ಎತ್ತಿದ್ದರು.
Saw these people throwing garbage on the road & pulled them up rightfully. Travelling in a luxury car and brains gone for a toss. These people will keep our country clean? Yeah right! If you see something wrong happening like this, do the same & spread awareness. @AnushkaSharma pic.twitter.com/p8flrmcnba
— Virat Kohli (@imVkohli) 16 June 2018
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾಕಾರಿ ಹೇಳಿಕೆಗಳನ್ನು ಕಂಡು ನೊಂದಿರುವ ಯುವಕ ಅರ್ಹಾನ್ ಸಿಂಗ್ ಮತ್ತು ಆತನ ತಾಯಿ ಗೀತಾಂಜಲಿ ಎಲಿಜಬೆತ್, ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ವಿರುಷ್ಕಾ ವಿರುದ್ಧ ಸಿಡಿದೆದ್ದಿದ್ದಾರೆ.
ಕಾರು ಚಲಿಸುವಾಗ ಆಕಸ್ಮಿಕವಾಗಿ ಪ್ಲಾಸ್ಟಿಕ್ ತುಂಡೊಂಡು ಕಿಟಕಿಯಿಂದ ಹೊರಕ್ಕೆ ಹಾರಿದೆ. ನನ್ನ ನಿರ್ಲಕ್ಷ್ಯಕ್ಕೆ ಕ್ಷಮೆ ಕೋರುತ್ತೇನೆ. ಆದರೆ, ನನ್ನ ಕಾರಿನ ಸಮೀಪ ಬಂದು ಕಿಟಕಿ ಇಳಿಸಿ ಮಾತನಾಡಿದ ಅನುಷ್ಕಾ ಶರ್ಮಾ ಕೊಹ್ಲಿ ಅವರೇ ನಿಮ್ಮ ಮಾತುಗಳಲ್ಲಿ ಸ್ವಲ್ಪ ನಯ ವಿನಯ ರೂಢಿಸಿಕೊಂಡರೆ ನಿಮ್ಮ ಸ್ಟಾರ್ಗಿರಿ ಏನೂ ತಗ್ಗುವುದಿಲ್ಲ.
ನಡತೆ ಮತ್ತು ನೈರ್ಮಲ್ಯದ ವಿಚಾರದಲ್ಲಿ ಅನೇಕ ಸಂಗತಿಗಳಿವೆ. ಅವುಗಳಲ್ಲಿ ಮಾತಿನ ಶಿಷ್ಟಾಚಾರವೂ ಒಂದು.
ನನ್ನ 'ಲಕ್ಷುರಿ ಕಾರ್'ನಿಂದ ಕಸ ಆಕಸ್ಮಿಕವಾಗಿ ಹೊರಗೆ ಹಾರಿದೆ. ಆದರೆ, ಅದು ನಿಮ್ಮ ಬಾಯಿಯಿಂದ... ನಿಮ್ಮ ಲಕ್ಷುರಿ ಕಾರ್ನ ಕಿಟಕಿಯಿಂದ ಹೊರಬಂದ ಕಸಕ್ಕಿಂತ ಅಥವಾ ಇದನ್ನು ಚಿತ್ರೀಕರಿಸಿ ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿಯ ಕೊಳಕು ಮನಸ್ಸಿಗಿಂತ ಕಡಿಮೆ ಎಂದು ಅರ್ಹಾನ್ ಸಿಂಗ್ ಟೀಕಾಪ್ರಹಾರ ನಡೆಸಿದ್ದಾರೆ.
ಇನ್ನು ಆತನ ತಾಯಿ ಗೀತಾಂಜಲಿ ಟ್ವಿಟ್ಟರ್ನಲ್ಲಿನ ಸುದೀರ್ಘ ಪೋಸ್ಟ್ನಲ್ಲಿ ಅನುಷ್ಕಾ ಮತ್ತು ವಿರಾಟ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತೆಯ ಹೆಸರಿನಲ್ಲಿ ನೀವು ನಡೆಸುವ ಕೀಳು ಸ್ಟಂಟ್ನಿಂದ ನಮಗೆ ಅಂತಿಮವಾಗಿ ಸಿಕ್ಕಿರುವುದು ಪ್ರಚಾರ. ನೀವಿಬ್ಬರೂ ನಿಮ್ಮ ಅಭಿಮಾನಿಗಳು ಮತ್ತು ಹಿಂಬಾಲಕರಿಗಾಗಿ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದ್ದಲ್ಲದೆ ನನ್ನ ಮಗನನ್ನು ಅವಮಾನಿಸುವ ವಿಡಿಯೋ ಹಾಗೂ ಬರಹವನ್ನು ಪೋಸ್ಟ್ ಮಾಡಿದಿರಿ.
ನಿಮಗೆ ಲಕ್ಷಾಂತರ ಜನ ಹಿಂಬಾಲಕರು ಮತ್ತು ಪಿಆರ್ಗಳು ಇರಬಹುದು. ನಿಮಗೆ ನಿಮ್ಮ ಪ್ರಚಾರಕ್ಕೆ ಹಣ ಸಿಗಬಹುದು.
ಒಬ್ಬ ಅಮ್ಮನಾಗಿ ನಾನು ಹೇಳುವುದೇನೆಂದರೆ, ನೀವು ಆತನ ಮುಖವನ್ನು ಬ್ಲರ್ ಮಾಡದೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿ ನನ್ನ ಮಗನಿಗೆ ಅವಮಾನ ಮಾಡಿದ್ದೀರಿ. ಮಾತ್ರವಲ್ಲ, ಅನಗತ್ಯ ಹಗೆತನಕ್ಕೆ ಆತನನ್ನು ನೂಕಿದ್ದೀರಿ. ಆತ ಮಾಡಿದ್ದಾನೆ ಎನ್ನಲಾದ ಸಣ್ಣ ತಪ್ಪಿಗೆ ನಿಮ್ಮ ಬಳಿ ಯಾವ ಸಾಕ್ಷ್ಯವಿದೆ? ನನಗೆ ನನ್ನ ಮಗನ ಸುರಕ್ಷತೆ ಬಗ್ಗೆ ಕಳವಳ ಉಂಟಾಗುತ್ತಿದೆ.
ತನ್ನ ಬದುಕಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಯುವಕನ ಚಾರಿತ್ರ್ಯವಧೆ ಮಾಡುವ ಕೆಲಸಕ್ಕೆ ಕೈಹಾಕುವ ಮೂಲಕ ಆತನನ್ನು ಸಾರ್ವಜನಿಕವಾಗಿ ದ್ವೇಷಕ್ಕೆ ಎಳೆದು ತರಲು ನಿಮಗೆಷ್ಟು ಧೈರ್ಯ? ನಿಮ್ಮ ಅಭಿಮಾನಿ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೀವಿಬ್ಬರೂ ಉತ್ತಮ ನಾಗರಿಕರೆಂದು ತೋರಿಸಿಕೊಳ್ಳುವುದೇಕೆ? ಎಂದು ಅವರು ತಾರಾ ದಂಪತಿ ವಿರುದ್ಧ ಕೆಂಡಾಮಂಡಲರಾಗಿ ಪೋಸ್ಟ್ ಮಾಡಿದ್ದಾರೆ.