ಮಹಾರಾಷ್ಟ್ರದಲ್ಲಿ ಕೊರೊನಾ ಕೇಂದ್ರವಾದ ಹಾಸ್ಟೆಲ್: 200 ವಿದ್ಯಾರ್ಥಿಗಳಿಗೆ ಸೋಂಕು!
ಮುಂಬೈ, ಫೆಬ್ರವರಿ.25: ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಒಂದೇ ಒಂದು ವಸತಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಶಾಲಾ ವಸತಿ ಗೃಹದಲ್ಲಿ ಇರುವ 229 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿಗೆ ಕೊವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಾಸ್ಟೆಲ್ ನಲ್ಲಿ ಅಮರಾವತಿ, ಹಿಂಗೋಲಿ, ನಾಂದೇಡ್, ವಾಶಿಮ್, ಬುಲ್ಧಾನಾ, ಅಕೋಲಾ ಮೂಲದ ಒಟ್ಟು 327 ವಿದ್ಯಾರ್ಥಿಗಳಿದ್ದಾರೆ.
ಭಾರತದಲ್ಲಿ ಒಂದೇ ದಿನ 2 ಲಕ್ಷ ಜನರಿಗೆ ಕೊರೊನಾ ಲಸಿಕೆ
ವಾಶಿಮ್ ಜಿಲ್ಲೆಯ ವಸತಿ ಗೃಹವೊಂದರಲ್ಲೇ 200ಕ್ಕೂ ಹೆಚ್ಚು ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಸ್ಪಷ್ಟವಾದ ಹಿನ್ನೆಲೆ ಹಾಸ್ಟೆಲ್ ಅನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕೊವಿಡ್-19 ದಾಖಲೆ ಏರಿಕೆ
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 8000ಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ನಾಲ್ಕು ತಿಂಗಳ ನಂತರದಲ್ಲಿ ಮೊದಲ ಬಾರಿಗೆ 8000ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದು ಹೊಸ ದಾಖಲೆಯಾಗಿದೆ. ರಾಜ್ಯದಲ್ಲಿ 21,21,119 ಕೊವಿಡ್-19 ಸೋಂಕಿತ ಪ್ರಕರಣಗಳಿದ್ದು, ಈವರೆಗೂ 51,937 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೊರೊನಾವೈರಸ್ ಶಿಷ್ಟಾಚಾರ ಉಲ್ಲಂಘನೆ ಆರೋಪ
ವಾಶಿಮ್ ಜಿಲ್ಲೆಯ ದೇವಸ್ಥಾನದ ಬಳಿಯಲ್ಲಿ ಬೃಹತ್ ಸಮಾರಂಭ ನಡೆಸಿರುವುದು ಇತ್ತೀಚಿಗೆ ಸಾಕಷ್ಟು ಸುದ್ದಿಯಾಗಿತ್ತು. ಈ ವೇಳೆ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊವಿಡ್-19 ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರಿಸಿತ್ತು. ವಾಶಿಮ್ ಪ್ರದೇಶದ ದೇವಸ್ಥಾನದ ಬಳಿ ಭಾರಿ ಸಮಾವೇಶ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಬಿಡುವುದಿಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ಮಾಸ್ಕ್ ಫ್ರೀ!
ಮಹಾರಾಷ್ಟ್ರದಲ್ಲಿ ಕೊವಿಡ್-19 ಅಪಾಯ ಹೆಚ್ಚುತ್ತಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಕೊರೊನಾವೈರಸ್ ಮಾರ್ಗಸೂಚಿ ಮತ್ತು ಶಿಷ್ಟಾಚಾರ ಪಾಲನೆ ಮಾಡದೇ ಸಾಮಾಜಿಕ ಅಂತರ ತೊರೆದು ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ಜನರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ನಗರದ ಮಾರುಕಟ್ಟೆಗಳಲ್ಲಿ ಮಾಸ್ಕ್ ಹಾಕಿಕೊಳ್ಳದೇ ಇರುವ ಸಾರ್ವಜನಿಕರಿಗೆ ಪೊಲೀಸರು 200 ರೂಪಾಯಿ ದಂಡವನ್ನು ವಿಧಿಸುವುದರ ಜೊತೆಗೆ ದಂಡ ಪಾವತಿಸಿದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.
ಲಾಕ್ ಡೌನ್ ಎಚ್ಚರಿಕೆ ನೀಡಿದ ಸಿಎಂ
"ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸುವುದಕ್ಕೆ ನೀವು ಬಯಸುತ್ತೀರಾ. ಮುಂದಿನ ಎಂಟು ದಿನಗಳಲ್ಲಿ ನೀವು ಮಾಸ್ಕ್ ಧರಿಸದೇ ಅಜಾಗ್ರತಿ ವಹಿಸಿದರೆ ಮತ್ತೊಂದು ಬಾರಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ. ಲಾಕ್ ಡೌನ್ ಬೇಡ ಎನ್ನುವುದಾದರೆ ಮಾಸ್ಕ್ ಧರಿಸಿ, ಕೊರೊನಾವೈರಸ್ ನಿಯಮಗಳನ್ನು ಶಿಸ್ತುಬದ್ಧವಾಗಿ ಪಾಲನೆ ಮಾಡಬೇಕು. ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಎರಡನೇ ಅಲೆ ಸೃಷ್ಟಿಯಾಗುತ್ತಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಮುಂದಿನ 8 ರಿಂದ 15 ದಿನಗಳಲ್ಲಿ ಸ್ಪಷ್ಟವಾಗಲಿದೆ. ಎರಡನೇ ಅಲೆ ಬಗ್ಗೆ ಜನರು ಸಹ ಜಾಗೃತಿ ವಹಿಸಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.