20 ದಿನಗಳಲ್ಲಿ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಸಾವಿರಕ್ಕೂ ಹೆಚ್ಚು ಮಂದಿ ಆಗಮನ
ಮುಂಬೈ, ನವೆಂಬರ್ 30: ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಕಳೆದ 20 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಮಿಕ್ರೋನ್ ಭೀತಿ ವಿಶ್ವದ ಎಲ್ಲ ರಾಷ್ಟ್ರಗಳಿಗೂ ತಟ್ಟಿದೆ. ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳು, ವಿದೇಶಿ ಪ್ರಯಾಣಿಕರ ಮೇಲೆ ತೀವ್ರ ಕಟ್ಟೆಚ್ಚರವಹಿಸಿವೆ. ಈ ಮಧ್ಯೆ ಆಫ್ರಿಕನ್ ದೇಶಗಳಿಂದ ಸಾವಿರ ಪ್ರಯಾಣಿಕರು ಮುಂಬೈಗೆ ಬಂದಿಳಿದಿರುವ ವಿಚಾರ ಬೆಳಕಿಗೆ ಬಂದಿದೆ.
ಭಯ ಬಿಡಿ: ಕೊರೊನಾದ "ಓಮಿಕ್ರಾನ್ ರೂಪಾಂತರ" ಅಂಟಿದರೂ ಸಾವಿನ ಅಪಾಯವಿಲ್ಲ
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿ ಹೇಳಿಕೆ ಪ್ರಕಾರ, ಕಳೆದ 15 ದಿನಗಳಲ್ಲಿ ಆಫ್ರಿಕನ್ ದೇಶಗಳಿಂದ 1 ಸಾವಿರ ಪ್ರಯಾಣಿಕರು ಮುಂಬೈ ತಲುಪಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೈಕಿ ಕೇವಲ 466 ಜನರ ಪಟ್ಟಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆಯಲಾಗಿದೆ.
ಇಲ್ಲಿಯವರೆಗೆ 100 ವಿದೇಶಿ ಪ್ರಯಾಣಿಕರ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಅಂತಾ ತಿಳಿಸಿದ್ದಾರೆ. ಅಲ್ಲದೆ, ಎಲ್ಲಾ ಜನರ ಪಟ್ಟಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಇನ್ನೂ ಕೂಡ ಸ್ವೀಕರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಕೋವಿಡ್ ಪರೀಕ್ಷೆ ವಿಳಂಬವಾಗುತ್ತಿದೆ ಎಂದು ಬಿಎಂಸಿ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಸುರೇಶ್ ಕಾಕಾನಿ ಹೇಳಿದ್ದಾರೆ.
466 ಪ್ರಯಾಣಿಕರ ಪೈಕಿ 100 ಮಂದಿ ಮುಂಬೈ ಮೂಲದವರಾಗಿದ್ದಾರೆ. ನಾವು ಈಗಾಗಲೇ ಅವರ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ನಾಳೆ ಅಥವಾ ಮರುದಿನ ಅವರ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಸುರೇಶ್ ಕಾಕಾನಿ ತಿಳಿಸಿದ್ದಾರೆ.
ಹೊಸ ಕೊರೊನಾ ವೈರಸ್ ರೂಪಾಂತರವಾದ ಒಮಿಕ್ರೋನ್ ಜಗತ್ತಿನಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೋವಿಡ್ ನಿಯಮಗಳನ್ನು ಅನುಸರಿಸದಿದ್ದರೆ ದಂಡ ವಿಧಿಸುವುದಾಗಿ ಘೋಷಿಸಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಯಮಗಳ ಪ್ರಕಾರ, ಮುಂಬೈ ಮಹಾನಗರ ಪಾಲಿಕೆ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರು ಪಿಟಿಐಗೆ ತಿಳಿಸಿದ್ದಾರೆ.
ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರು ಕೇಂದ್ರ ಸರ್ಕಾರದ ನಿರ್ದೇಶನಗಳಿಂದ ನಿಯಂತ್ರಿಸಲ್ಪಡುತ್ತಾರೆ. ಆದರೆ ರಾಜ್ಯಕ್ಕೆ ಆಗಮಿಸುವ ದೇಶೀಯ ಪ್ರಯಾಣಿಕರು ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಪಡೆದಿರಬೇಕು ಅಥವಾ 72 ಗಂಟೆಗಳ ಮುನ್ನ ಪಡೆದ ಆರ್ಟಿ-ಪಿಸಿಆರ್ ನೆಗಟಿವ್ ವರದಿ ನೀಡಬೇಕು ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.
ಹೊಸ ರೂಪಾಂತರದ ಪ್ರಕರಣಗಳು ಕಂಡುಬಂದಿರುವ ದಕ್ಷಿಣ ಆಫ್ರಿಕಾದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗುವುದು ಮತ್ತು ಅವರ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುವುದು ಎಂದ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಹೇಳಿದ್ದರು.
ಕೋವಿಡ್ ನಿಯಮಗಳನ್ನು ಅನುಸರಿಸದ ವ್ಯಕ್ತಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
Recommended Video