ಪ್ರಧಾನಿ ಮೋದಿ ನೀಡಿದ್ದ ಬಿಗ್ ಆಫರ್ ಸತ್ಯ ಬಿಚ್ಚಿಟ್ಟ ಶರದ್ ಪವಾರ್
ಮುಂಬೈ, ಡಿಸೆಂಬರ್ 02: ಪ್ರಧಾನಿ ಮೋದಿ ಅವರು ನೀಡಿದ್ದ ದೊಡ್ಡ ಆಫರ್ ಬಗ್ಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರದಂದು ಮಾತನಾಡಿದ್ದಾರೆ.
ಬಿಜೆಪಿ-ಎನ್ಸಿಪಿ ಹೊಂದಾಣಿಕೆ ಬಗ್ಗೆ ಶರದ್ ಪವಾರ್ ಹಾಗೂ ಮೋದಿ ಮಾತುಕತೆ ನಡೆಸಿದ್ದಾರೆ ಇನ್ನೇನು ಮಹಾರಾಷ್ಟ್ರದಲ್ಲಿ ಎನ್ಸಿಪಿ ಬೆಂಬಲದಿಂದ ಬಿಜೆಪಿ ಸರ್ಕಾರ ರಚನೆಯಾಗೇ ಬಿಟ್ಟಿತು ಎನ್ನುವಷ್ಟರಲ್ಲಿ ಅನಿರೀಕ್ಷಿತ ತಿರುವು ಪಡೆದು ಅಜಿತ್ ಪವಾರ್ ಬೆಂಬಲದಿಂದ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದರು.
ಆದರೆ, ಬಿಜೆಪಿ ಸರ್ಕಾರ ರಚನೆಗೂ ಮುನ್ನವೇ ಶಿವಸೇನಾ- ಎನ್ಸಿಪಿ- ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾಯಿತು. ಉದ್ಧವ್ ಠಾಕ್ರೆ ಸಿಎಂ ಆದರು. ಈಗ ಎಲ್ಲಾ ಮುಗಿದ ಮೇಲೆ ಮೋದಿ ಅವರು ಭೇಟಿ ಯಾದಾಗ ಜೊತೆಯಲ್ಲಿ ಕಾರ್ಯ ನಿರ್ವಹಿಸೋಣ ಮೈತ್ರಿ ಇರಲಿ ಎಂದಿದ್ದರು, ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.
ಶಾಸಕರಾಗದೇ ಸಿಎಂ ಪಟ್ಟಕ್ಕೇರಿದವರ ಪೈಕಿ ಉದ್ಧವ್ ಮೊದಲಿಗರಲ್ಲ!
"ವೈಯಕ್ತಿಕವಾಗಿ ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ ಆದರೆ, ಸಿದ್ಧಾಂತಗಳಲ್ಲಿ ಒಪ್ಪಿಗೆ ಕಷ್ಟವಾಗಿದ್ದು, ಜೊತೆಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ'' ಎಂದು ಮರಾಠಿ ಟಿವಿ ವಾಹಿನಿಯೊಂದಕ್ಕೆ ಸೋಮವಾರದಂದು ನೀಡಿದ ಸಂದರ್ಶನದಲ್ಲಿ ಹೇಳಿದರು.
ರಾಷ್ಟ್ರಪತಿ ಸ್ಥಾನದ ಆಫರ್ ಬಂದಿತ್ತು?
ರಾಷ್ಟ್ರಪತಿ ಸ್ಥಾನದ ಆಫರ್ ಬಂದಿತ್ತು ಎಂಬುದೆಲ್ಲ ಸುಳ್ಳು ಸುದ್ದಿ. ಆದರೆ, ಸುಪ್ರಿಯಾಗೆ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ನೀಡುವ ಆಫರ್ ಸಿಕ್ಕಿತ್ತು ಎಂದರು. ''ದೇವೇಂದ್ರಗೆ ಅಜಿತ್ ಬೆಂಬಲ ನೀಡಿದ ಸುದ್ದಿ ತಿಳಿದ ತಕ್ಷಣ ಉದ್ಧವ್ ಗೆ ಕರೆ ಮಾಡಿ, ಧೈರ್ಯದಿಂದ ಇರುವಂತೆ ಹೇಳಿದೆ. ಎನ್ಸಿಪಿ ಬೆಂಬಲ ಶಿವಸೇನಾಗೆ ನೀಡುವ ಬಗ್ಗೆ ದೃಢಪಡಿಸಿದೆ. ಅಜಿತ್ ಮಾಡಿದ ಕೃತ್ಯದ ಬಗ್ಗೆ ಕುಟುಂಬದಲ್ಲಿ ಭಾರಿ ಬೇಸರ ವ್ಯಕ್ತವಾಗಿತ್ತು. ಅಜಿತ್ ಮೇಲೂ ಒತ್ತಡ ಇತ್ತು, 8-10 ಶಾಸಕರ ಬೆಂಬಲ ಪಡೆದು ಬಿಜೆಪಿಗೆ ಬೆಂಬಲ ಎಂದು ಹೋಗಿಬಿಟ್ಟಿದ್ದ. ಆದರೆ ಎನ್ಸಿಪಿಗೆ ಮರಳುವ ಬಗ್ಗೆ ಅನೇಕರಲ್ಲಿ ನಂಬಿಕೆ ಇತ್ತು. ಅದೇ ನಂಬಿಕೆ ಇಂದು ಸರ್ಕಾರ ರಚನೆ ಹಾಗೂ ಅಜಿತ್ ವಾಪಸ್ ಬರಲು ಕಾರಣವಾಗಿದೆ ಎಂದು ಹೇಳಿದರು.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ
288 ಮಂದಿ ವಿಧಾನಸಭಾ ಸದಸ್ಯರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಯಾವೊಂದು ಪಕ್ಷವು ಅಧಿಕಾರ ಸ್ಥಾಪಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 145 ದಾಟಲು ಸಾಧ್ಯವಾಗಿಲ್ಲ. 105 ಸದಸ್ಯ ಬಲದ ಬಿಜೆಪಿ ಜೊತೆ 54 ಸದಸ್ಯ ಬಲದ ಎನ್ಸಿಪಿ ಕೈ ಜೋಡಿಸಿದರೆ 159 ಸ್ಥಾನದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರ ಆರಂಭವಾಗಿತ್ತು.
ಎನ್ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ಮೂಲಕ ಶಿವಸೇನಾದ ಬಹುಕಾಲದ ಉಪಟಳಕ್ಕೆ ಹಾಗೂ ಕಾಂಗ್ರೆಸ್ಸಿನ ಅವಕಾಶಗಳಿಗೆ ಒಂದೇ ಬಾರಿಗೆ ಕಡಿವಾಣ ಹಾಕಬಹುದು. ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.
ಕೋವಿಂದ್ ಅವರ ಅಧಿಕಾರ ಅವಧಿ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರ ಅವಧಿ 2022 ತನಕ ಇರಲಿದೆ.ಜೂನ್ 2017ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಥಾನಕ್ಕೆ ಕೋವಿಂದ್ ರನ್ನು ಸೂಚಿಸಲಾಗಿತ್ತು. ಭಾರತದ 14ನೇ ರಾಷ್ಟ್ರಪತಿಯಾಗಿ ಜುಲೈ 2017ರಲ್ಲಿ ಕೋವಿಂದ್ ಅಧಿಕಾರ ವಹಿಸಿಕೊಂಡರು. ಈ ವರ್ಷ ಬಿಜೆಪಿ ಮತ್ತೊಮ್ಮೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ, 2024ರ ತನಕ ಅಧಿಕಾರದಲ್ಲಿ ಇರುವ ಭರವಸೆ ಇದೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ರಾಷ್ಟ್ರಪತಿ ಚುನಾವಣೆ ನಡೆಯಲಿದೆ
ಮೋದಿ ಹಾಗೂ ಶರದ್ ಪವಾರ್ ಭೇಟಿ
ಮೋದಿ ಅವರು ಎನ್ಸಿಪಿ ಹಾಗೂ ಬಿಜೆಡಿ ಸದಸ್ಯರ ನಡವಳಿಕೆಯನ್ನು ಹೊಗಳಿದ ಮೇಲೆ ಗಾಳಿ ಸುದ್ದಿ ಹಬ್ಬಲು ಶುರುವಾಯಿತು. ಮೋದಿ ಹಾಗೂ ಶರದ್ ಪವಾರ್ ಸಂಸತ್ತಿನಲ್ಲಿ ಭೇಟಿ ಮಾಡಿದ್ದು ಇದಕ್ಕೆ ಇಂಬು ನೀಡಿತು.
ಎನ್ಸಿಪಿ ಹಾಗೂ ಬಿಜೆಪಿ ನಡುವೆ ಮೈತ್ರಿ ಮೂಡಲು ಮಹಾರಾಷ್ಟ್ರ, ಗುಜರಾತ್ ಹಾಗೂ ದೆಹಲಿಯ ದೊಡ್ಡ ದೊಡ್ಡ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಸುದ್ದಿಯೂ ಬಂದಿತು. ಅರಾಜಕತೆ, ಸರ್ಕಾರವಿಲ್ಲದ ರಾಜ್ಯದಿಂದ ವ್ಯಾಪಾರ, ವಹಿವಾಟಿಗೆ ಕೋಟ್ಯಂತರ ನಷ್ಟವಾಗುತಿದೆ ಎಂದು ತಮ್ಮ ವಾದ ಮಂಡಿಸಿದ್ದರು.