ಮೋದಿ ಸರ್ಕಾರ್ 2ನಲ್ಲಿ ಶಿವಸೇನೆಯ ಅರವಿಂದ್ ಗೆ ಸ್ಥಾನ
ಮುಂಬೈ, ಮೇ 30: ಬಿಜೆಪಿಯ ಮಿತ್ರಪಕ್ಷ ಶಿವಸೇನೆಯ ಸಂಸದರಿಗೆ ಮೋದಿ 2.0 ಸರ್ಕಾರದಲ್ಲಿ ಸಚಿವ ಸಂಪುಟ ಸೇರುವ ಅವಕಾಶ ಮೊದಲಿಗೆ ಸಿಗಲಿದೆ. ಗುರುವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸ್ಥಾಪನೆಯಾಗಲಿದೆ.
ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದ್ದಲ್ಲದೆ, ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 300 ಗಡಿ ದಾಟಿದ ಭಾರತೀಯ ಜನತಾ ಪಕ್ಷವು 2 ಸ್ಥಾನದಿಂದ ಆರಂಭಿಸಿ 303 ಸ್ಥಾನಕ್ಕೇರಿದೆ. ಆದರೆ, ಮಿತ್ರಪಕ್ಷಗಳಾದ ಶಿವಸೇನಾ, ಜೆಡಿಯು, ಎಐಎಡಿಎಂಕೆ ಹಾಗೂ ಅಪ್ನಾದಳ್ ನ ಸಂಸದರಿಗೂ ಮೋದಿ ಸಚಿವ ಸ್ಥಾನ ಕಲ್ಪಿಸಲು ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಶಿವಸೇನಾದ ಮುಂಬೈ ದಕ್ಷಿಣದ ಸಂಸದ ಅರವಿಂದ್ ಸಾವಂತ್ ಗೆ ಸಚಿವ ಸ್ಥಾನ ಸಿಗಲಿದೆ ಎಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ. 'ಉದ್ಧವ್ ಅವರು ಅರವಿಂದ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ, ಅರವಿಂದ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ' ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಈ ಹಿಂದಿನ ಮೋದಿ ಸರ್ಕಾರದಲ್ಲಿ ಶಿವಸೇನಾದ ಏಕೈಕ ಸಚಿವರಾಗಿ ಅನಂತ್ ಗೀತೆ ಇದ್ದರು. ಆದರೆ, ಈ ಬಾರಿ ರಾಯ್ ಘಡದಿಂದ ಸ್ಪರ್ಧಿಸಿದ್ದ ಅನಂತ್ ಗೀತೆ ಅವರು ಸೋಲು ಕಂಡಿದ್ದಾರೆ. 68 ವರ್ಷ ವಯಸ್ಸಿನ ಅರವಿಂದ್ ಅವರು ಕಾಂಗ್ರೆಸ್ಸಿನ ಮಿಲಿಂದ್ ದಿಯೋರಾ ಅವರನ್ನು 1,00,067 ಮತಗಳ ಅಂತರದಿಂದ ಸೋಲಿಸಿದರು.
ಮಹಾನಗರ್ ಟೆಲಿಫೋನ್ ನೆಟ್ವರ್ಕ್ ಲಿಮಿಟೆಡ್ (ಎಂಟಿಎನ್ ಎಲ್) ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದ ಅರವಿಂದ್, ಎಂಎಲ್ಸಿಯಾದರು. ಶಿವಸೇನಾ-ಬಿಜೆಪಿ ಸರ್ಕಾರದ ಬೆಂಬಲದಿಂದ 2014ರಲ್ಲಿ ಕೂಡಾ ಮಿಲಿಂದ್ ದಿಯೋರಾರನ್ನು 1,28,564 ಮತಗಳ ಅಂತರದಿಂದ ಸೋಲಿಸಿದ್ದರು. ಎಂಟಿಎನ್ ಎಲ್ ಟ್ರೇಡ್ ಯೂನಿಯನ್ ಅಧ್ಯಕ್ಷ, ಶಿವಸೇನಾದಲ್ಲಿ ಪ್ರಮುಖ ಮುಖಂಡರಾಗಿರುವ ಅರವಿಂದ್ ಅವರು ಮೋದಿ ಸಂಪುಟ ಸೇರಲು ಕಾತುರರಾಗಿದ್ದಾರೆ.
ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ 6 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗವಹಿಸಲಿದ್ದಾರೆ.