ಮೋದಿ ಟೀ ಮಾರುತ್ತಿದ್ದರು, ಆದರೆ ಬಿಜೆಪಿಗರಿಗೆ ಟೀ ಎಂದರೆ ಆಗೊಲ್ಲ: ಉದ್ಧವ್ ಠಾಕ್ರೆ
ನಾಗಪುರ, ಡಿಸೆಂಬರ್ 16: ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಸರ್ಕಾರ ಆಯೋಜಿಸಿದ್ದ ಸಾಂಪ್ರದಾಯಿಕ ಚಹಾಕೂಟವನ್ನು ಬಹಿಷ್ಕರಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಟೀ ಮಾರಾಟದ ಹಿನ್ನೆಲೆಯನ್ನು ಕೆದಕುವ ಮೂಲಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಜತೆ ಸೇರುವ ಮೂಲಕ ಶಿವಸೇನಾ, ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಅವರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದ್ದ ಬಿಜೆಪಿ, ವಿವಿಧ ಕಾರಣಗಳನ್ನು ಒಡ್ಡಿ ಚಹಾ ಕೂಟವನ್ನು ಬಹಿಷ್ಕರಿಸಿತ್ತು.
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸರ ವಿರುದ್ಧವೇ ಅನುಮಾನ
'ನಮ್ಮ ಪ್ರಧಾನಿ ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದರು ಎಂಬ ಹಿನ್ನೆಲೆ ನನಗೆ ತಿಳಿದಿದೆ. ಪ್ರಧಾನಿ ಬಹಳ ನಿಕಟದ ಸಂಬಂಧ ಹೊಂದಿರುವ ಮತ್ತು ಅವರ ನಾಯಕರು ಕುಡಿಯುವ ಹೈ ಟೀಯನ್ನು ಬಿಜೆಪಿ ನಾಯಕರು ಏಕೆ ಬಹಿಷ್ಕರಿಸಿದ್ದಾರೆಯೋ ತಿಳಿಯುತ್ತಿಲ್ಲ. ಅವರ ರಾಜ್ಯ ಮತ್ತು ಕೇಂದ್ರದಲ್ಲಿನ ನಾಯಕರು ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರುವಂತೆ ತೋರುತ್ತದೆ' ಎಂದು ಉದ್ಧವ್ ಲೇವಡಿ ಮಾಡಿದರು.
ವೀರ್ ಸಾವರ್ಕರ್ ಅವರಿಗೆ ಅವಮಾನ ಎಸಗಿದವರೊಂದಿಗೆ 'ಚಾಯ್ ಪೆ ಚರ್ಚಾ' ನಡೆಸಲು ತಮಗೆ ಆಸಕ್ತಿ ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಭಾನುವಾರ ಹೇಳಿದ್ದರು.
ಸಾವರ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದ್ದರೂ ಶಿವಸೇನಾವು ಅಧಿಕಾರದಲ್ಲಿ ಉಳಿಯಬೇಕೆಂಬ ಕಾರಣಕ್ಕೆ ಮೃದು ಧೋರಣೆ ತಾಳಿದೆ ಎಂದು ಆರೋಪಿಸಿದ್ದರು.
ಪೌರತ್ವ ಪ್ರತಿಭಟನೆ: ಅಲಿಗಢ ವಿ.ವಿ. ತೊರೆಯಲು ವಿದ್ಯಾರ್ಥಿಗಳಿಗೆ ಪೊಲೀಸರ ಸೂಚನೆ
ದೆಹಲಿ ಶನಿವಾರ ಕಾಂಗ್ರೆಸ್ ಆಯೋಜಿಸಿದ್ದ 'ಭಾರತ್ ಬಚಾವೊ ರ್ಯಾಲಿ'ಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶವು ಈಗ 'ರೇಪ್ ಇನ್ ಇಂಡಿಯಾ' ಎಂಬಂತಾಗಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿ, ಕ್ಷಮೆ ಕೋರಲು ಆಗ್ರಹಿಸಿತ್ತು. ಅದಕ್ಕೆ ಕ್ಷಮೆ ಕೋರಲು 'ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ' ಎಂದು ರಾಹುಲ್ ಹೇಳಿದ್ದರು. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.