ಪ್ರಜಾಪ್ರಭುತ್ವವನ್ನು ಕೊಲ್ಲಲೂ ಮೋದಿ ಸರ್ಕಾರ ಹಿಂಜರಿಯುವುದಿಲ್ಲ; ಶಿವಸೇನೆ
ಮುಂಬೈ, ಮಾರ್ಚ್ 25: ದೆಹಲಿ ಮೇಲೆ ಕೇಂದ್ರಕ್ಕೆ ಹೆಚ್ಚಿನ ಅಧಿಕಾರ ನೀಡುವ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ 2021ಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಶಿವಸೇನೆ, "ಬಿಜೆಪಿಯೇತರ ರಾಜ್ಯಗಳನ್ನು ರಾಜ್ಯಪಾಲರ ಮೂಲಕ ಕೇಸರಿ ಪಕ್ಷ ನಿಗ್ರಹಿಸುತ್ತಿದೆ" ಎಂದು ಆರೋಪಿಸಿದೆ.
ಪಕ್ಷದ ಪತ್ರಿಕೆ "ಸಾಮ್ನಾ"ದ ಸಂಪಾದಕೀಯದಲ್ಲಿ ಈ ಕುರಿತು ಟೀಕಿಸಿದ್ದು, ನರೇಂದ್ರ ಮೋದಿ ಅವರು ಈ ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯವನ್ನು ನಿಗ್ರಹಿಸಲು ನಿರ್ಧರಿಸಿದಂತಿದೆ ಎಂದು ದೂರಿದೆ. ಬಿಜೆಪಿ ಆಡಳಿತದಲ್ಲಿ ಇರದ ರಾಜ್ಯ ಸರ್ಕಾರಗಳನ್ನು ರಾಜ್ಯಪಾಲರ ಮೂಲಕ ನಿಗ್ರಹಿಸುವ ನೀತಿಯನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ. ಈಗ ಕೇಂದ್ರ ಜಿಎನ್ ಸಿಟಿಡಿ ಮಸೂದೆ ತಂದಿದೆ ಹಾಗೂ ಅದನ್ನು ಬಲವಂತವಾಗಿ ಅಂಗೀಕರಿಸಿದೆ. ಇದು ದೆಹಲಿ ವಿಧಾನಸಭೆ, ದೆಹಲಿ ಮುಖ್ಯಮಂತ್ರಿ ಹಾಗೂ ಕ್ಯಾಬಿನೆಟ್ನ ಅಧಿಕಾರವನ್ನೇ ಮೊಟಕುಗೊಳಿಸಿದೆ ಎಂದಿದೆ.
ಪ್ರಜಾಪ್ರಭುತ್ವಕ್ಕೆ ಕೆಟ್ಟ ದಿನ: ದೆಹಲಿ ಮಸೂದೆ ಬಗ್ಗೆ ಸಿಎಂ ಕೇಜ್ರಿವಾಲ್ ಕಿಡಿ
ದೆಹಲಿ ಕೇಂದ್ರಾಡಳಿತ ಪ್ರದೇಶ. ಎಲ್ಲಾ ಅಧಿಕಾರ ಲೆಫ್ಟಿನೆಂಟ್ ಗರ್ವನರ್ ಅವರ ಬಳಿಯಿದೆ. ಹೀಗಾಗಿ ಜನರಿಂದ ಚುನಾಯಿತರಾದ ದೆಹಲಿ ಮುಖ್ಯಮಂತ್ರಿಯನ್ನು ಹಿಂಸಿಸುವ ಒಂದೇ ಒಂದು ಅವಕಾಶವನ್ನೂ ಅವರು ಬಿಡುವುದಿಲ್ಲ. ಇಲ್ಲಿ ವಿಧಾನಸಭೆ ಹಾಗೂ ಬಹುಮತಕ್ಕೆ ಬೆಲೆಯಿಲ್ಲ. ಈ ಹೊಸ ಶಾಸನದೊಂದಿಗೆ ಲೆಫ್ಟಿನೆಂಟ್ ಜನರಲ್ ಅವರನ್ನೇ ದೆಹಲಿ ಸರ್ಕಾರವನ್ನಾಗಿ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ಕಾಯ್ದೆಯಿಂದಾಗಿ, ಬಹುಮತವಿದ್ದರೂ ದೆಹಲಿ ಸಿಎಂಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿ ದಾಖಲೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ದೊರೆಯಬೇಕು. ಕೇಂದ್ರಕ್ಕೆ ಇವರು ನೇರ ಸಂಪರ್ಕಿತರಾದ್ದರಿಂದ, ಕೇಂದ್ರದ ಸೂಚನೆ ಮೇರೆಗೆ ಕೆಲಸ ಮಾಡಲು ದೆಹಲಿ ಸಿಎಂಗೆ ಸೂಚಿಸಲಾಗುತ್ತದೆ. ಇದು ಸ್ವಾತಂತ್ರ್ಯದ ನಿಗ್ರಹ ಎಂದು ಆರೋಪಿಸಿದರು.
ದೆಹಲಿಯಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರೆ ಮೋದಿ ಸರ್ಕಾರ ಈ ಮಸೂದೆಯನ್ನು ಪರಿಚಯಿಸುತ್ತಿರಲಿಲ್ಲ. ಕೇಂದ್ರವು ರಾಜ್ಯಪಾಲರ ಮೂಲಕವೇ ದೆಹಲಿ ಹಾಗೂ ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಅಧಿಕಾರ ಕಟ್ಟಿಹಾಕಲು ಯತ್ನಿಸುತ್ತಿದೆ. ಇದಕ್ಕೆ ಪ್ರಜಾಪ್ರಭುತ್ವವನ್ನೇ ಕೊಲ್ಲಲೂ ಹಿಂಜರಿಕೆ ತೋರುವುದಿಲ್ಲ ಎಂದು ಹೇಳಿದೆ.
ದೆಹಲಿಯ ಮೇಲೆ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವ ಪ್ರಸ್ತಾವಿತ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ ( ತಿದ್ದುಪಡಿ) ಮಸೂದೆ 2021ರನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.