ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ಮುಂಬೈ ಆಸ್ಪತ್ರೆಯಲ್ಲಿ ಪತ್ತೆ
ಮುಂಬೈ, ಜುಲೈ 18: ಬುಧವಾರದಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ನ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರು ಅನಾರೋಗ್ಯದ ಕಾರಣ ಮುಂಬೈಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವುದು ತಿಳಿದುಬಂದಿದೆ.
ಕರ್ನಾಟಕದ ಕಾಂಗ್ರೆಸ್ ಶಾಸಕರು ತಂಗಿದ್ದ ಬೆಂಗಳೂರಿನ ವಿಂಡ್ ಫ್ಲವರ್ ಪ್ರಕೃತಿ ರೆಸಾರ್ಟ್ ನಲ್ಲಿ ತಂಗಿದ್ದ ಶ್ರೀಮಂತ್ ಪಾಟೀಲ್ ಅವರು ಬುಧವಾರ ರಾತ್ರಿ ಮುಂಬೈಗೆ ತೆರಳಿದ್ದರು. ಮುಂಬೈಯಲ್ಲಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಲು ಅವರು ತೆರಳಿದ್ದಾರೆ ಎಂಬ ಗುಮಾನಿ ಎದ್ದಿತ್ತು. ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರೂ ಆಗಿರುವ ಶ್ರೀಮಂತ್ ಪಾಟೀಲ್ ಬುಧವಾರ ರಾತ್ರಿ ಎದೆನೋವು ಆರಂಭವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಿಶ್ವಾಸಮತ ಯಾಚನೆ LIVE: ಸದನದಲ್ಲಿ ಕ್ರಿಯಾಲೋಪ ಚರ್ಚೆ ಎತ್ತಿದ ಸಿದ್ದರಾಮಯ್ಯ
ಇಂದು(ಗುರುವಾರ) ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚಸಲಿರುವ ಕಾರಣ ಕಾಂಗ್ರೆಸ್ ನ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ನಲ್ಲಿಟ್ಟು, ಗುರುವಾರ ಬೆಳಿಗ್ಗೆ ನೇರವಾಗಿ ವಿಧಾನಸೌಧಕ್ಕೆ ಕರೆತರಲು ಯೋಜನೆ ರೂಪಿಸಲಾಗಿತ್ತು. ಆದರೆ ಬುಧವಾರ ರಾತ್ರಿಯೇ ಶ್ರೀಮಂತ್ ಪಾಟೀಲ್ ನಾಪತ್ತೆಯಾಗಿದ್ದರು.
ಅವರು ಅತೃಪ್ತ ಶಾಸಕರನ್ನು ಸೇರಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ ಅವರು ಇಂದು ನಡೆಯಲಿರುವ ವಿಶ್ವಾಸ ಮತದ ಸಮಯದಲ್ಲಿ ಸದನದಲ್ಲಿ ಇರುವುದಿಲ್ಲ ಎಂಬುದು ಖಚಿತವಾಗಿದೆ.