ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆದ ಮಿಲಿಂದ್ ಗೆ ಉನ್ನತ ಹುದ್ದೆ?
ನವದೆಹಲಿ, ಜುಲೈ 08: ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತೊರೆದಿರುವ ರಾಹುಲ್ ಗಾಂಧಿ ಅವರ ಸ್ಥಾನಕ್ಕೆ ಸಮರ್ಥ ನಾಯಕರನ್ನು ಕೂರಿಸಲು ಕಾಂಗ್ರೆಸ್ ಹುಡುಕಾಟ ನಡೆಸಿದೆ.
ಇಡೀ ದೇಶದಾದ್ಯಂತ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳನ್ನು ಜಾರಿಗೆ ತರುವಂತೆ ರಾಹುಲ್ ಸೂಚಿಸಿ, ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನ ಪಡೆಯುವುದಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಈ ರೇಸಿನಿಂದ ಹೊರಗಿಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಜೊತೆಗೆ ಗಾಂಧಿ-ನೆಹರೂ ಮನೆತನಯೇತರ ಸಮರ್ಥರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಯತ್ನಿಸಲಾಗುತ್ತಿದ್ದು, ಈ ಬಾರಿ ಯುವ ಮುಖಂಡರೊಬ್ಬರಿಗೆ ಈ ಸ್ಥಾನ ದಕ್ಕುವ ಸಾಧ್ಯತೆ ನಿಚ್ಚಳವಾಗಿದೆ.
ರಾಹುಲ್ ಸ್ಥಾನ ತುಂಬಬಲ್ಲ ಸಮರ್ಥ ಸಂಭಾವ್ಯರ ಪಟ್ಟಿ ಬಹಿರಂಗ
ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ ಬಳಿಕ ಮುಂಬೈ ಕಾಂಗ್ರೆಸ್ಅಧ್ಯಕ್ಷ ಸ್ಥಾನಕ್ಕೆ ಮಿಲಿಂದ್ ದಿಯೋರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಈಗ ರಾಹುಲ್ ಸ್ಥಾನವನ್ನು ತುಂಬಬಲ್ಲ ಸಮರ್ಥರ ಪಟ್ಟಿಯಲ್ಲಿ ಸಚಿನ್ ಪೈಲಟ್ ನಂತರ ಮಿಲಿಂದ್ ದಿಯೋರಾ ಹೆಸರು ಕಾಣಿಸಿಕೊಂಡಿದೆ.
@milinddeora is a young and dynamic leader and was a ray of hope for Mumbai Congress and the changes to come under his leadership. His resignation is sad and will jolt the Mumbai Congress. There is a lot to be done and very little time.
— Priya Dutt (@PriyaDutt_INC) July 7, 2019
ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಎದುರಿಸುವ ಮುನ್ನ ಕಾಂಗ್ರೆಸ್ ಹೊಸ ಅಧ್ಯಕ್ಷರನ್ನು ನೇಮಿಸಲು ಮುಂದಾಗಿದೆ. ಈಗ ಮುಂಬೈ ಕಾಂಗ್ರೆಸ್ ತೊರೆದು ದೆಹಲಿಗೆ ತೆರಳುತ್ತಿರುವ ಮಿಲಿಂದ್ ಅವರು ಮಹಾರಾಷ್ಟ್ರ ಚುನಾವಣೆ ಬಗ್ಗೆ ಈಗಾಗಲೇ ಸಮಿತಿ ರಚನೆಗೆ ಸೂಚಿಸಿದ್ದಾರೆ.
ನಾನು ಪಕ್ಷವನ್ನು ಒಗ್ಗೂಡಿಸುವ ಹಿತದೃಷ್ಟಿಯಿಂದ ಎಂಆರ್ಸಿಸಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ್ದೆ. ಲೋಕಸಭೆ ಚುನಾವಣೆ ಸೋಲಿನ ಬಳಿಕ ರಾಜೀನಾಮೆ ನೀಡಲು ಸಿದ್ಧನಾಗಿದ್ದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳಲು ಕರೆ ಬಂದಿದೆ. ಮುಂಬೈ ಕಾಂಗ್ರೆಸ್ ಒಗ್ಗೂಡಿಸುವುದರ ಬಗ್ಗೆ ನಾನು ಮಾರ್ಗದರ್ಶನ ನೀಡುತ್ತೇನೆ ಎಂದು ಮಿಲಿಂದ್ ದಿಯೋರಾ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮುಂಬೈನ ಎಲ್ಲಾ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು. ಮಿಲಿಂದ್ ದಿಯೋರಾ ಅವರು ಶಿವಸೇನಾದ ಅರವಿಂದ್ ಸಾವಂತ್ ವಿರುದ್ಧ ಸೋಲು ಕಂಡಿದ್ದರು. ಚುನಾವಣೆ ಬಳಿಕ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ವಲಸೆ ಹೋಗಿದ್ದರು. ಇಷ್ಟೆಲ್ಲ ಹಿನ್ನೆಲೆ ಇದ್ದರೂ ಮಿಲಿಂದ್ ಅವರನ್ನು ದೆಹಲಿಗೆ ಕರೆಸಿಕೊಂಡು ಉನ್ನತ ಹುದ್ದೆ ನೀಡಲು ಕಾಂಗ್ರೆಸ್ ಮುಂದಾಗಿದೆ.