ಲಾಕ್ಡೌನ್ ಭೀತಿ; ಮತ್ತೆ ಊರಿನತ್ತ ಗಂಟುಮೂಟೆ ಕಟ್ಟುತ್ತಿರುವ ಕಾರ್ಮಿಕರು
ಮುಂಬೈ, ಏಪ್ರಿಲ್ 5: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಭಾನುವಾರ ರಾತ್ರಿ ರಾಜ್ಯದಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 57074 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸದ್ಯಕ್ಕೆ ವಾರಂತ್ಯದ ಲಾಕ್ಡೌನ್ ಘೋಷಿಸಲಾಗಿದೆ. ಈ ಬೆಳವಣಿಗೆಯಿಂದ ಆತಂಕಗೊಂಡಿರುವ ವಲಸೆ ಕಾರ್ಮಿಕರು ಮತ್ತೆ ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಲಾಕ್ಡೌನ್ ಆಗಿ ಮತ್ತೆ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಭೀತಿಯಿಂದ ಈಗಲೇ ಮನೆಗಳಿಗೆ ವಾಪಸ್ಸಾಗುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿರುವ ದೃಶ್ಯ ರಾಜ್ಯದಲ್ಲಿ ಕಂಡುಬರುತ್ತಿದೆ. ಮುಂದೆ ಓದಿ...
ರೈಲು ಸೇವೆ ಸ್ಥಗಿತದ ಭೀತಿ
ಭಾನುವಾರ ರಾತ್ರಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೊರೊನಾ ನಿಯಂತ್ರಣಕ್ಕೆ ಕೆಲವು ಕಠಿಣ ನಿಯಮಗಳನ್ನು ಘೋಷಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ರೈಲು ಸೇವೆಯನ್ನು ಸ್ಥಗಿತಗೊಳಿಸುವ ಎಲ್ಲಾ ಸಾಧ್ಯತೆಗಳಿದ್ದು, ಎಷ್ಟು ಸಾಧ್ಯವೋ ಅಷ್ಟು ಬೇಗ ಊರಿಗೆ ಮರಳುವುದು ಸೂಕ್ತ ಎಂದು ಕೆಲವು ಕಾರ್ಮಿಕರು ಹೇಳುತ್ತಿದ್ದಾರೆ. ಕಳೆದ ವರ್ಷವೂ ಬಿಹಾರ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಕಾರ್ಮಿಕರು ಮಹಾರಾಷ್ಟ್ರದಿಂದ ವಾಪಸ್ ಮರಳಲು ಕಾಲು ಹಾದಿ ಹಿಡಿದಿದ್ದರು.
ಮಹಾರಾಷ್ಟ್ರದಲ್ಲಿ ವಾರಾಂತ್ಯದ ಲಾಕ್ಡೌನ್: ನಿಯಮಗಳನ್ನು ಓದಿ
ಎರಡು ದಿನಗಳಿಂದ ಊರಿಗೆ ಮರಳುತ್ತಿರುವ ಕಾರ್ಮಿಕರ ಸಂಖ್ಯೆ ಹೆಚ್ಚಳ
ಎರಡು ದಿನಗಳಿಂದಲೂ ಉತ್ತರ ಪ್ರದೇಶ ಹಾಗೂ ಬಿಹಾರದ ಕಡೆಗೆ ಹೋಗುವ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ನಿರ್ಬಂಧಗಳನ್ನು ಉದ್ಧವ್ ಠಾಕ್ರೆ ಭಾನುವಾರ ರಾತ್ರಿ ಘೋಷಣೆ ಮಾಡುತ್ತಿದ್ದಂತೆಯೇ ರೈಲುಗಳಿಗೆ ಬುಕ್ಕಿಂಗ್ ಮಾಡುವುದು ಹೆಚ್ಚಾಗಿದೆ. ಭಾನುವಾರ ಬೇರೆ ರಾಜ್ಯಗಳಿಗೆ ತೆರಳುವ ಕಾರ್ಮಿಕರ ಸಂಖ್ಯೆಯೂ ಏಕಾಏಕಿ ಹೆಚ್ಚಾಗಿದ್ದಾರೆ ಮಾಹಿತಿ ನೀಡಿದ್ದಾರೆ.
"ಲಾಕ್ ಡೌನ್ ಮುನ್ನ ಊರು ಸೇರಬೇಕು"
"ಕಳೆದ ವರ್ಷ ಲಾಕ್ಡೌನ್ ಜಾರಿಯಾಗಿ ಜೌನ್ಪುರದಲ್ಲಿನ ಮನೆ ತಲುಪಲು ನಡೆದುಕೊಂಡೇ ಹೋಗಬೇಕಾಯಿತು. ಈಗ ಮತ್ತೆ ಅಂಥ ಪರಿಸ್ಥಿತಿಯಲ್ಲಿ ಸಿಲುಕಲು ಇಷ್ಟವಿಲ್ಲ. ಸರ್ಕಾರ ಹೊಸ ಹೊಸ ನಿರ್ಬಂಧಗಳನ್ನು ಹೇರುತ್ತಿದೆ. ಹೀಗಾಗಿ ರೈಲುಗಳನ್ನು ನಿಲ್ಲಿಸುವ ಮುನ್ನ ಊರು ಸೇರಬೇಕೆಂದು ಹೊರಟಿದ್ದೇನೆ" ಎಂದು ಸಿಮೆಂಟ್ ವಾಹನ ಚಾಲಕ ಸೋನು ಪಟೇಲ್ ಹೇಳಿದ್ದಾರೆ. ಇವರಂತೆಯೇ ಸಾವಿರಾರು ಕಾರ್ಮಿಕರು ಗಂಟು ಮೂಟೆ ಕಟ್ಟಿಕೊಂಡು ರಾಜ್ಯ ಬಿಡುತ್ತಿದ್ದಾರೆ.
ಹೊಸ ದಾಖಲೆ: ಮಹಾರಾಷ್ಟ್ರದಲ್ಲಿ ಒಂದೇ ದಿನ 57074 ಮಂದಿಗೆ ಕೊರೊನಾವೈರಸ್!
ಭಾನುವಾರ ಒಂದೇ ದಿನ 57074 ಮಂದಿಗೆ ಕೊರೊನಾ
ಮಹಾರಾಷ್ಟ್ರದಲ್ಲಿ ಭಾನುವಾರ 57074 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ ಸೋಂಕಿಗೆ 222 ಮಂದಿ ಪ್ರಾಣ ಬಿಟ್ಟಿದ್ದು, 27,508 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಪತ್ತೆಯಾಗುವ ಒಟ್ಟು ಕೊವಿಡ್-19 ಪ್ರಕರಣಗಳ ಪೈಕಿ ಶೇ.50ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಮಹಾರಾಷ್ಟ್ರವೊಂದರಲ್ಲೇ ದೃಢಪಡುತ್ತಿವೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಪ್ರತಿ ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಲಾಕ್ ಡೌನ್ ಜಾರಿಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲ್ಲಿಕ್ ಸ್ಪಷ್ಟಪಡಿಸಿದ್ದಾರೆ.