ಹತ್ಯೆಗೂ ಮುನ್ನ ಮನ್ಸುಖ್ ಹಿರೇನ್ಗೆ ಕ್ಲೋರೋಫಾರ್ಮ್: ಎಟಿಎಸ್
ಮುಂಬೈ, ಮಾರ್ಚ್ 25: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕಗಳೊಂದಿಗೆ ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ, ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ನಿಗೂಢ ಸಾವಿನ ಕುರಿತು ಮಹಾರಾಷ್ಟ್ರ ಭಯೋತ್ಪಾದನಾ ದಳ (ಎಟಿಎಸ್) ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ. ಮನ್ಸುಖ್ ಅವರನ್ನು ಹತ್ಯೆ ಮಾಡುವ ಮುನ್ನ ಬಲವಂತವಾಗಿ ಕ್ಲೋರೋಫಾರ್ಮ್ ನೀಡಲಾಗಿದೆ ಎಂದು ಎಟಿಎಸ್ ಶಂಕಿಸಿದೆ.
ಮನ್ಸುಖ್ ಹಿರೇನ್ ಅವರನ್ನು ಹತ್ಯೆ ಮಾಡುವ ಮುನ್ನ ಅವರಿಗೆ ಥಳಿಸಿ ಗಾಯ ಮಾಡಲಾಗಿತ್ತು ಎಂದು ಮರಣೋತ್ತರ ಪರೀಕ್ಷೆ ವರದಿಯ ಆಧಾರದಲ್ಲಿ ಎಟಿಎಸ್ ತಿಳಿಸಿದೆ.
ಸಚಿನ್ ವಾಜೆ ಜತೆ ಕಾಣಿಸಿದ್ದ ಮಹಿಳೆ ಯಾರು?: ಎನ್ಐಎಗೂ ಉತ್ತರ ಸಿಗದ ಪ್ರಶ್ನೆ
ಮನ್ಸುಖ್ ಹಿರೇನ್ ಅವರು ಮಾರ್ಚ್ 5ರಂದು ಮುಂಬೈನ ಕೊಳ್ಳವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಆತ್ಮಹತ್ಯೆ ಎಂದು ಪೊಲೀಸರು ಹೇಳಿದ್ದರು. ಆದರೆ ಹಿರೇನ್ ಅವರ ಪತ್ನಿಯ ಹೇಳಿಕೆ ಪ್ರಕರಣಕ್ಕೆ ತಿರುವು ನೀಡಿತ್ತು. ತಮ್ಮ ಪತಿ ಉತ್ತಮ ಈಜುಗಾರ, ಕಡಿಮೆ ನೀರಿರುವ ಈ ಕೊಳ್ಳದಲ್ಲಿ ಬಿದ್ದು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಅಲ್ಲದೆ, ತಮ್ಮ ಪತಿ ಸಾವಿಗೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಕಾರಣ ಎಂದು ಆರೋಪಿಸಿದ್ದರು.
ವಾಜೆ ಹಾಜರಾತಿ ಬಗ್ಗೆ ತನಿಖೆ
ಈ ಅಪರಾಧ ನಡೆಯುವಾಗ ಸಚಿನ್ ವಾಜೆ ಸ್ಥಳದಲ್ಲಿದ್ದರೇ ಎಂದು ತಿಳಿದುಕೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ ಮೊಬೈಲ್ ಟವರ್ ತಂತ್ರಜ್ಞಾನ ಮತ್ತು ಐಪಿ ವಿಳಾಸಗಳ ಪ್ರಕಾರ ಹಿರೇನ್ ಸಾಯುವಾಗ ವಾಜೆ ವಾಹನವೊಂದರಲ್ಲಿದ್ದರು. ಈ ಸಂಬಂಧ ಎಟಿಎಸ್, ಮಾಜಿ ಕಾನ್ಸ್ಟೆಬಲ್ ವಿನಾಯಕ್ ಶಿಂಧೆ (55) ಮತ್ತು ಕ್ರಿಕೆಟ್ ಬುಕಿ ನರೇಶ್ ಧರೆಯನ್ನು (31) ಬಂಧಿಸಿತ್ತು.
ಮುಖದ ಅನೇಕ ಕಡೆ ಗಾಯ
ಮನ್ಸುಖ್ ಹಿರೇನ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವರು ಸಾಯುವ ಮೊದಲು ಮುಖದಲ್ಲಿ ಹಲವು ಗಾಯಗಳಾಗಿರುವುದು ದೃಢಪಟ್ಟಿದೆ. ಹಿರೇನ್ ಅವರ ಮುಖದ ಎಡಭಾಗ ಹಾಗೂ ಮೂಗಿನ ಹೊಳ್ಳೆಯ ಎಡ ಪಾರ್ಶ್ವದ ಮೇಲ್ಭಾಗದಲ್ಲಿ ಗಾಯ ಪತ್ತೆಯಾಗಿದೆ. ಅಲ್ಲದೆ, ಅವರ ಬಲ ಕೆನ್ನೆಯಿಂದ ಗಲ್ಲದವರೆಗೆ ಬಲಗಣ್ಣಿನ ಭಾಗದ ಮುಖದಲ್ಲಿ ಸಹ ಗಾಯಗಳಾಗಿವೆ.
ಮನ್ಸುಖ್ ಕಾರು ಕಳುವಾಗುವ ಹಿಂದಿನ ದಿನ ನಕಲಿ ಆಧಾರ್ ಐಡಿ ಬಳಸಿ ಹೋಟೆಲ್ನಲ್ಲಿ ತಂಗಿದ್ದ ವಾಜೆ
ಕ್ಲೋರೋಫಾರ್ಮ್ ನೀಡುವಾಗ ಏಟು
ಹಿರೇನ್ ಅವರ ಹೆಚ್ಚಿನ ಅಂಗಗಳು ಮತ್ತು ತಲೆಬುರುಡೆಗೆ ಯಾವುದೇ ಏಟಾಗಿಲ್ಲ. ಆರೋಪಿಗಳು ಹಿರೇನ್ ಅವರಿಗೆ ಬಲವಂತವಾಗಿ ಕ್ಲೋರೋಫಾರ್ಮ್ ನೀಡುವಾಗ ಅವರು ಪ್ರತಿರೋಧ ಒಡ್ಡಿದ್ದರಿಂದ ಈ ಗಾಯಗಳಾಗಿರಬಹುದು. ಕ್ಲೋರೋಫಾರ್ಮ್ ನೀಡಿದ ಬಳಿಕ ಹಿರೇನ್ ನಿಯಂತ್ರಣ ಕಳೆದುಕೊಂಡಿರಬಹುದು. ನಂತರ ಅವರನ್ನು ಸುಲಭವಾಗಿ ಸಾಯಿಸಿರಬಹುದು ಎಂದು ಎಟಿಎಸ್ ಅಧಿಕಾರಿಗಳು ಊಹಿಸಿದ್ದಾರೆ.
ಗೊಂದಲ ಮೂಡಿಸಿರುವ ಕರ್ಚೀಫ್ಗಳು
ಹಿರೇನ್ ಅವರ ಮಾಸ್ಕ್ ಒಳಭಾಗದಲ್ಲಿ ಸುರುಳಿ ಸುತ್ತಿದ್ದ ಐದು ಕರ್ಚೀಫ್ಗಳು ಪತ್ತೆಯಾಗಿದ್ದವು. ಈ ಕರ್ಚೀಫ್ಗಳು ಅವರ ಬಾಯಿ ಅಥವಾ ಮೂಗಿನೊಳಗೆ ಇರಲಿಲ್ಲ. ಹಿರೇನ್ಗೆ ಕ್ಲೋರೋಫಾರ್ಮ್ ನೀಡಲು ಮತ್ತು ಬಳಿಕ ಉಸಿರುಗಟ್ಟಿಸಿ ಸಾಯಿಸಲು ಈ ಕರ್ಚೀಫ್ಗಳನ್ನು ಬಳಸಿರಬಹುದು ಎನ್ನಲಾಗಿದೆ. ಇದರ ವಿಧಿ ವಿಜ್ಞಾನ ವರದಿ ಇನ್ನೂ ಕೈಸೇರಬೇಕಿದೆ.
ಮುಕೇಶ್ ಅಂಬಾನಿಗೆ ಬೆದರಿಕೆ ಪ್ರಕರಣ: ಸ್ಫೋಟಕ ಪತ್ತೆಗೂ ಕೆಲವು ದಿನ ಮುಂಚೆ ವಾಜೆ-ಹಿರೇನ್ ಭೇಟಿ
ಗುಜರಾತ್ನ ಸಿಮ್ ಬಳಕೆ
ಹಿರೇನ್ ಹತ್ಯೆಯಾದ ಸಂದರ್ಭದಲ್ಲಿ ವಾಜೆ ಸ್ಥಳದಲ್ಲಿದ್ದರೇ ಎಂಬ ಬಗ್ಗೆ ಎಟಿಎಸ್ ತನಿಖೆ ನಡೆಸುತ್ತಿದೆ. ಸಚಿನ್ ವಾಜೆ ಗುಜರಾತ್ನಿಂದ ತರಿಸಿಕೊಂಡಿದ್ದ ಸಿಮ್ ಅನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಬಂಧಿತ ಮಾಜಿ ಕಾನ್ಸ್ಟೆಬಲ್ ವಿನಾಯಕ್ ಶಿಂಧೆ, ಈ ಸಿಮ್ ಮೂಲಕವೇ ವಾಜೆ ಸಂವಹನ ನಡೆಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಕ್ರಿಕೆಟ್ ಬುಕಿ ನರೇಧ್ ಧರೆಗೆ 14 ಸಿಮ್ಗಳನ್ನು ಪೂರೈಸಿದ್ದ ಗುಜರಾತ್ನ ವ್ಯಕ್ತಿಯೊಬ್ಬನನ್ನು ಎಟಿಎಸ್ ಸೋಮವಾರ ಬಂಧಿಸಿದೆ.