ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಮನ್ಸುಖ್ ಹಿರೇನ್ ಸಹ ಸಂಚುಕೋರ: ಎನ್ಐಎ ಹೇಳಿಕೆ
ಮುಂಬೈ, ಏಪ್ರಿಲ್ 8: ಉದ್ಯಮಿ ಮುಕೇಶ್ ಅಂಬಾನಿ ಮನೆ ಎದುರು ಫೆ. 25ರಂದು ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಯ ಜತೆಗೆ ಥಾಣೆ ನಿವಾಸಿ ಮನ್ಸುಖ್ ಹಿರೇನ್ ಸಹ ಸಂಚುಕೋರರಾಗಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿದೆ.
ಹಾಗೆಯೇ ಹಿರೇನ್ ಅವರನ್ನು ಮಾರ್ಚ್ 2 ಮತ್ತು 3ರ ನಡುವೆ ಮುಗಿಸುವಂತೆ ಇತರೆ ಆರೋಪಿಗಳು ಸಂಚು ರೂಪಿಸಿದ್ದರು ಎಂದು ತಿಳಿಸಿದೆ. ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಹಾಗೂ ಬೆದರಿಕೆ ಪತ್ರದೊಂದಿಗೆ ಪತ್ತೆಯಾದ ಕಾರು ಹಿರೇನ್ ಅವರಿಗೆ ಸಂಬಂಧಿಸಿದ್ದಾಗಿತ್ತು. ಮಾರ್ಚ್ 4ರಂದು ಹಿರೇನ್ ನಾಪತ್ತೆಯಾಗಿದ್ದರು. ಅದರ ಮರುದಿನ ಕಲ್ವಾದ ಕೊಳ್ಳವೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
100 ಕೋಟಿ ಸುಲಿಗೆಗೆ ಅನಿಲ್ ದೇಶ್ಮುಖ್ ಸೂಚಿಸಿದ್ದು ನಿಜ: ಎನ್ಐಗೆ ಸಚಿನ್ ವಾಜೆ ಪತ್ರ
'ಸಾರ್ವಜನಿಕ ರಸ್ತೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಎಸ್ಯುವಿಯನ್ನು ನಿಲ್ಲಿಸಿದ ಪ್ರಕರಣದಲ್ಲಿ ಮನ್ಸುಖ್ ಹಿರೇನ್ ಕೂಡ ಒಬ್ಬ ಸಂಚುಕೋರರಾಗಿದ್ದರು. ಅವರನ್ನು ಬಳಿಕ ಹತ್ಯೆ ಮಾಡಲಾಯಿತು' ಎಂದು ವಾಜೆ ಅವರನ್ನು ಎನ್ಐಎ ವಶಕ್ಕೆ ಮತ್ತಷ್ಟು ಸಮಯ ನೀಡುವಂತೆ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಮನವಿ ಸಲ್ಲಿಸುವಾಗ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ತಿಳಿಸಿದರು.
ಹಿರೇನ್ ಕೊಲೆಯ ಹಿಂದಿನ ಉದ್ದೇಶ ಕಂಡುಹಿಡಿಯುವ ಸನಿಹದಲ್ಲಿರುವುದಾಗಿ ಕಳೆದ ಬಾರಿಯ ವಿಚಾರಣೆ ವೇಳೆ ಎನ್ಐಎ ತಿಳಿಸಿತ್ತು. ಬುಧವಾರ ವಿಚಾರಣೆ ಹಿರೇನ್ ಕೊಲೆ ಹಿಂದಿನ ಉದ್ದೇಶವನ್ನು ಎನ್ಐಎ ಬಹಿರಂಗಪಡಿಸಲಿಲ್ಲ. ಆದರೆ ಹಿರೇನ್ ಹತ್ಯೆಗೆ ಸಚಿನ್ ವಾಜೆ ಆರ್ಥಿಕ ಸಹಾಯ ಮಾಡಿದ್ದರು. ವಾಜೆ ಅಲ್ಲದೆ, ಅಮಾನತುಗೊಂಡಿರುವ ಪೊಲೀಸ್ ಕಾನ್ಸ್ಟೆಬಲ್ ವಿನಾಯಕ್ ಶಿಂದೆ ಹಾಗೂ ಕ್ರಿಕೆಟ್ ಬುಕ್ಕಿ ನರೇಶ್ ಗೌರ್ ಕೂಡ ಆರೋಪಿಗಳಾಗಿದ್ದಾರೆ. ಹಿರೇನ್ ಕೊಲೆ ಸಂಚು ನಡೆಯುವಾಗ ವಾಜೆ ಮತ್ತು ಶಿಂದೆ ಇಬ್ಬರೂ ಹಾಜರಿದ್ದರು.
ಫೆ. 17ರಂದು ಹಿರೇನ್ ಮತ್ತು ವಾಜೆ ಇಬ್ಬರೂ ಕಾರ್ನಲ್ಲಿ ಸಾಗಿ ಮಾತುಕತೆ ನಡೆಸಿದ್ದು ಸಿಸಿಟಿವಿ ದೃಶ್ಯಗಳಿಂದ ಬಹಿರಂಗವಾಗಿತ್ತು. ಅದೇ ದಿನ ಹಿರೇನ್ ತಮ್ಮ ಕಾರು ಕಳುವಾಗಿರುವ ದೂರು ನೀಡಿದ್ದರು. ಬಾಂಬ್ ಬೆದರಿಕೆ ಘಟನೆಯ ಆರೋಪವನ್ನು ಹೊರುವಂತೆ ಹಿರೇನ್ ಮನವೊಲಿಸಲು ವಾಜೆ ಪ್ರಯತ್ನಿಸಿದ್ದರು. ಆದರೆ ಹಿರೇನ್ ಅದನ್ನು ನಿರಾಕರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ಎನ್ಐಎ ತಿಳಿಸಿದೆ.
ಫೈವ್ ಸ್ಟಾರ್ ಹೋಟೆಲ್ನಲ್ಲಿ ಕುಳಿತು ವಸೂಲಿ ದಂಧೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ
ವಾಜೆ ನಡೆಸುತ್ತಿದ್ದ ಸಂಸ್ಥೆಯೊಂದಕ್ಕೆ ಸೇರಿದ 1.51 ಕೋಟಿ ರೂ ಖಾಸಗಿ ಬ್ಯಾಂಕ್ನಲ್ಲಿ ಪತ್ತೆಯಾಗಿದೆ. ತನ್ನ ಸಹವರ್ತಿಗಳಲ್ಲಿ ಒಬ್ಬರಿಗೆ ವಾಜೆ 76 ಲಕ್ಷ ರೂಪಾಯಿ ನೀಡಿದ್ದರು. ಈ ಹಣ ವರ್ಗಾವಣೆಯು ಬಾಂಬೆ ಬೆದರಿಕೆ ಸಂಚು ಅಥವಾ ಗಿಲೆಟಿನ್ ಕಡ್ಡಿಗಳನ್ನು ಪೂರೈಸಿದ ಮೂಲಕ್ಕೆ ಸಂದಾಯ ಮಾಡಲು ಬಳಸಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಎನ್ಐಎ ತಿಳಿಸಿದೆ.