ಮಗಳ ಹುಟ್ಟುಹಬ್ಬಕ್ಕೆ ಕೇಕ್ ಕಳುಹಿಸಲು ಹೋಗಿ 1.9 ಲಕ್ಷ ರೂ. ಕಳೆದುಕೊಂಡ ತಂದೆ
ಮುಂಬೈ, ಮೇ 20: ಮುಂಬೈನ ಥಾಣೆಯಲ್ಲಿ ನೆಲೆಸಿರುವ ಮಗಳ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಳುಹಿಸಲು ಯೋಜಿಸಿದ್ದ ಛತ್ತೀಸಗಡ ಮೂಲದ ತಂದೆ, ಸೈಬರ್ ವಂಚಕರ ಬಲೆಗೆ ಬಿದ್ದು 1.9 ಲಕ್ಷ ರೂ. ಕಳೆದುಕೊಂಡಿದ್ದಾರೆ. ಕೇಕ್ ಕಳುಹಿಸುವ ನೆಪದಲ್ಲಿ ತಂದೆಯಿಂದ ಬ್ಯಾಂಕ್ ವಿವರಗಳನ್ನು ಪಡೆದುಕೊಂಡ ಸೈಬರ್ ವಂಚಕ, ಅವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ವಂಚಕ, ಇದೇ ರೀತಿಯ ಟ್ರಿಕ್ ಉಪಯೋಗಿಸಿ ಮಗಳ ಖಾತೆಯಿಂದಲೂ ಹಣ ಸ್ವಾಹ ಮಾಡಿದ್ದಾನೆ.
ಮುಂಬಯಿನ ವಾಗಲ್ ಎಸ್ಟೇಟ್ ಪೊಲೀಸರ ಪ್ರಕಾರ, ದೂರುದಾರ ಯುವತಿ ನವಿ ಮುಂಬಯಿಯ ಬಿಪಿಒ ಒಂದರಲ್ಲಿ ಉದ್ಯೋಗ ಮಾಡುತ್ತಾರೆ. ಛತ್ತೀಸಗಡದಲ್ಲಿ ನೆಲೆಸಿರುವ ಯುವತಿಯ ತಂದೆಯು ಆಕೆಯ ಹುಟ್ಟುಹಬ್ಬದ ಪ್ರಯುಕ್ತ ಉಡುಗೊರೆಯಾಗಿ ಕೇಕ್ ಕಳುಹಿಸಬೇಕೆಂದು ಇರುವುದರ ಬಗ್ಗೆ ತಿಳಿಸಿದ್ದಾರೆ. ಆಗ ಯುವತಿ, ಹತ್ತಿರದಲ್ಲಿ ಕೇಕ್ ಅಂಗಡಿ ಇದ್ದು, ಶೀಘ್ರದಲ್ಲೇ ಅದರ ಪೋನ್ ನಂಬರ್ ಕಳುಹಿಕೊಡುವುದಾಗಿ ತಂದೆಗೆ ತಿಳಿಸಿದ್ದಾರೆ.
ನಂತರ ಯುವತಿ ಕೇಕ್ ಅಂಗಡಿಯ ಪೋನ್ ನಂಬರ್ಗಾಗಿ ಇಂಟರ್ನೆಟ್ ನಲ್ಲಿ ಹುಡುಕಾಡಿದ್ದಾರೆ. ಬಳಿಕ ಅಲ್ಲಿ ಸಿಕ್ಕಿರುವ ಮಾಹಿತಿಯನ್ನು ತಂದೆಯೊಂದಿಗೆ ಹಂಚಿಕೊಂಡಿದ್ದಾರೆ.
ಯುವತಿಯ ತಂದೆ ಆ ಪೋನ್ ನಂಬರ್ ಮೂಲಕ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಆತ ಕೇಕ್ ಬುಕ್ ಮಾಡಲು ಮುಂಗಡವಾಗಿ 100 ರೂ. ನೀಡಬೇಕಾಗುತ್ತದೆ. ಇದಕ್ಕಾಗಿ ತಮ್ಮ ಬ್ಯಾಂಕ್ ಕಾರ್ಡ್ ಮಾಹಿತಿಯನ್ನು ನೀಡುವಂತೆ ತಿಳಿಸಿದ್ದಾನೆ. ಅದರಂತೆ ಯುವತಿಯ ತಂದೆ ಬ್ಯಾಂಕ್ ಕಾರ್ಡ್ ಮಾಹಿತಿಯನ್ನು ನೀಡಿದ್ದಾರೆ. ನಂತರ ವಂಚಕ ವ್ಯಕ್ತಿ, ಅವರ ಬ್ಯಾಂಕ್ ಖಾತೆಯಲ್ಲಿದ್ದ 1.91 ಲಕ್ಷ ರೂ. ಎಗರಿಸಿದ್ದಾನೆ. ಯುವತಿಯ ತಂದೆಯು ತನ್ನ ಬ್ಯಾಂಕ್ ಖಾತೆಯಿಂದ ಈ ರೀತಿ ಹಣ ಕಡಿತವಾಗಿರುವ ಬಗ್ಗೆ ಯುವತಿಗೆ ಮಾಹಿತಿ ನೀಡಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಸೈಬರ್ ವಂಚಕ, ಯುವತಿಯನ್ನು ಸಂಪರ್ಕಿಸಿದ್ದಾನೆ. ತಪ್ಪಾಗಿ ಆಕೆಯ ತಂದೆಯ ಖಾತೆಯಿಂದ ಹಣ ಕಡಿತವಾಗಿದ್ದು, ಹಿಂದಿರುಗಿಸುವುದಾಗಿ ತಿಳಿಸಿದ್ದಾನೆ. ಇದಕ್ಕಾಗಿ ಮಗಳ ಖಾತೆಯ ಬ್ಯಾಂಕ್ ವಿವರವನ್ನು ನೀಡುವಂತೆ ತಿಳಿಸಿದ್ದಾನೆ. ಸೈಬರ್ ಖದೀಮರ ತಂತ್ರಗಳನ್ನು ಅರಿಯದೇ ಯುವತಿಯು ಅಪರಿಚಿತ ವ್ಯಕ್ತಿಗೆ ತನ್ನ ಬ್ಯಾಂಕ್ ಖಾತೆಯ ವಿವರ ನೀಡಿದ್ದಾರೆ. ಖಾತೆಯ ವಿವರ ಪಡೆದ ಖದೀಮ, ಆಕೆಯ ಬ್ಯಾಂಕ್ ಖಾತೆಯಿಂದ 90,000 ರೂ. ಎಗರಿಸಿದ್ದಾನೆ.
ಇದರಿಂದ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಯುವತಿ, ವೇಗಲ್ ಎಸ್ಟೇಟ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು, ವಂಚನೆ, ವಸ್ತುಗಳ ಡೆಲವರಿ ನೆಪದಲ್ಲಿ ಅಪ್ರಮಾಣಿಕತೆ, ಕಳ್ಳತನ ಮತ್ತು ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವೈಯಕ್ತಿಕ ವಂಚನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೈಬರ್ ವಂಚಕನನ್ನು ಬಲೆಗೆ ಬೀಳಿಸುವ ನಿಟ್ಟಿನಲ್ಲಿ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.
ನಾಗರಿಕರು ಯಾವುದೇ ಕಾರಣಕ್ಕೂ ತಮ್ಮ ವೈಯಕ್ತಿಕ ಬ್ಯಾಂಕ್ ವಿವರಗಳನ್ನು, ಒಟಿಪಿ ಸೇರಿದಂತೆ ಇತರ ಗೌಪ್ಯ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡದಂತೆ ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.
Recommended Video