ಚಿನ್ನವಲ್ಲ, ಬೆಳ್ಳಿಯಲ್ಲ, ಈರುಳ್ಳಿ ಕದ್ದು ಇಬ್ಬರು ಸಿಕ್ಕಿ ಬಿದ್ದರಲ್ಲ
ಮುಂಬೈ, ಡಿಸೆಂಬರ್.11: ದುಬಾರಿಯಾಗಿರೋ ಈರುಳ್ಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಸೆಂಚೂರಿ ಅಲ್ಲ ಡಬಲ್ ಸೆಂಚೂರಿಯತ್ತ ದಾಪುಗಾಲು ಇಟ್ಟಿರುವ ಈರುಳ್ಳಿಗೆ ಇದೀಗ ಭಾರಿ ಬೇಡಿಕೆ ಬಂದಿದೆ. ಇದನ್ನೇ ಲಾಭ ಮಾಡಿಕೊಳ್ಳಲು ಯತ್ನಿಸಿದ ಇಬ್ಬರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಮಹಾರಾಷ್ಟ್ರದ ಮುಂಬೈನಲ್ಲಿ ಚಿನ್ನ, ಬೆಳ್ಳಿ, ವಜ್ರಕ್ಕಿಂತ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಇಬ್ಬರು ಖದೀಮರು ಕತ್ತಲಿನಲ್ಲಿ ಅಂಗಡಿಗಳಿಗೆ ನುಗ್ಗಿ ಕೆಜಿಗಟ್ಟಲೇ ಈರುಳ್ಳಿಯನ್ನು ರಾತ್ರೋರಾತ್ರಿ ಎಸ್ಕೇಪ್ ಮಾಡುತ್ತಿದ್ದರು.
ಜಿಲ್ಲಾವಾರು ಈರುಳ್ಳಿ ಬೆಲೆ; ಬಂಗಾರದಂತೆ ಈರುಳ್ಳಿ ಅಳೆಯುತ್ತಿರುವ ವ್ಯಾಪಾರಿಗಳು
ಈ ಬಗ್ಗೆ ಅಂಗಡಿ ಮಾಲೀಕರು ಕೂಡಾ ಸಖತ್ ತಲೆ ಕೆಡಿಸಿಕೊಂಡಿದ್ದರು. ಪೊಲೀಸರಿಗೂ ದೂರಿನ ಮೇಲೆ ದೂರು ಕೊಟ್ಟಿದ್ದರು. ಈರುಳ್ಳಿ ಕಳ್ಳರಿಗೆ ಬಲೆ ಬೀಸಿದ ಪೊಲೀಸರಿಗೆ ಅದೊಂದು ಸಾಕ್ಷ್ಯ ಲಭಿಸಿದ್ದು, ಇಬ್ಬರ ಕೈಗೆ ಖಾಕಿ ಕೋಳ ತೊಡಿಸಿದೆ.
ಮಾರುಕಟ್ಟೆಯ ಸಾಲು ಅಂಗಡಿಗಳಿಗೆ ಕನ್ನ
ಮುಂಬೈನ ದೊಂಗ್ರಿ ಪ್ರದೇಶದಲ್ಲಿ ಸಾಲು ಸಾಲು ಅಂಗಡಿಗಳಿಗೆ ರಾತ್ರಿ ವೇಳೆ ನುಗ್ಗುತ್ತಿದ್ದ ಖದೀಮರು ಈರುಳ್ಳಿ ಕದ್ದು ಎಸ್ಕೇಪ್ ಆಗುತ್ತಿದ್ದರು. 21,160 ರೂಪಾಯಿ ಮೌಲ್ಯದ 168 ಕೆಜಿ ಈರುಳ್ಳಿಯನ್ನು ರಾತ್ರೋರಾತ್ರಿ ಇಬ್ಬರು ಕಳ್ಳರು ಕದ್ದಿದ್ದು, ಈ ಬಗ್ಗೆ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
ಈರುಳ್ಳಿ ಬೆಳೆದವರಿಗೆ ನಿಜಕ್ಕೂ ಲಾಭ ಸಿಗುತ್ತಿದೆಯೇ? ರೈತರ ಅಳಲು ಕೇಳಿ
|
ಕ್ಯಾಮರಾ ಕಣ್ಣಿಗೆ ಬಿದ್ದ ಈರುಳ್ಳಿ ಕಳ್ಳರು
ಈರುಳ್ಳಿ ಕಳ್ಳರ ವಿರುದ್ಧ ಐಪಿಸಿ ಸೆಕ್ಷನ್ 379 ರ ಅಡಿ ದೂರು ದಾಖಲಿಸಿಕೊಂಡ ಪೊಲೀಸರು ಐನಾತಿಗಳನ್ನು ಬಲೆಗೆ ಕೆಡವಲು ಖೆಡ್ಡಾ ತೋಡಿದರು. ಚುರುಕಿನ ತನಿಖೆ ನಡೆಸಿದ ಪೊಲೀಸರಿಗೆ ಸಿಸಿ ಕ್ಯಾಮರಾ ದೃಶ್ಯಾವಳಿ ವರವಾಯಿತು. ರಾತ್ರಿ ಅಂಗಡಿಗಳಿಗೆ ನುಗ್ಗಿದ ಖದೀಮರ ಚಟುವಟಿಕೆಗಳು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನೇ ಆಧಾರವಾಗಿ ಇಟ್ಟುಕೊಂಡ ಪೊಲೀಸರು ಇಬ್ಬರು ಈರುಳ್ಳಿ ಕಳ್ಳರನ್ನು ಕಂಬಿ ಹಿಂದೆ ತಳ್ಳಿದ್ದಾರೆ.
ಕೊನೆಗೂ ಸಿಕ್ಕಿಬಿದ್ದರು ಇಬ್ಬರು ಖದೀಮರು
ಇನ್ನು, ಮುಂಬೈನಲ್ಲಿ ಈರುಳ್ಳಿ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿ ಕಂಡು ಬರುತ್ತಿವೆ. ಈ ಇಬ್ಬರು ಕಳ್ಳರು ಕಳೆದ ಡಿಸೆಂಬರ್.5 ಮತ್ತು 6ನೇ ತಾರೀಖಿನಂದು ದೊಂಗ್ರಿ ಪ್ರದೇಶದ ಸಾಲು ಅಂಗಡಿಗಳಿಗೆ ನುಗ್ಗಿ ಈರುಳ್ಳಿ ಕಳ್ಳತನ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ ಕಳೆಯುವುದರೊಳಗೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಚಿನ್ನವಲ್ಲ, ಬೆಳ್ಳಿಯಲ್ಲ, ಈರುಳ್ಳಿ ಮೇಲೆ ಕಳ್ಳರ ಕಣ್ಣು
ಮೊದಲೆಲ್ಲ ಚಿನ್ನದ ಅಂಗಡಿಗಳಲ್ಲಿ ಕಳ್ಳರು ಕಳ್ಳತನ ಮಾಡುತ್ತಿದ್ದರು. ಆದರೆ, ಈಗ ತರಕಾರಿ ಅಂಗಡಿಗಳಿಗೆ ನುಗ್ಗಿ ಈರುಳ್ಳಿ ಕಳ್ಳತನ ಮಾಡುತ್ತಿದ್ದಾರೆ. ಮುಂಬೈಯಷ್ಟೇ ಅಲ್ಲ, ದೇಶದ ಹಲವು ರಾಜ್ಯಗಳಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ಉತ್ತರಪ್ರದೇಶದ ಗೋರಖ್ ಪುರದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು 50 ಕೆಜಿ ಈರುಳ್ಳಿಯನ್ನು ಕದ್ದೊಯ್ದಿದ್ದು ಸುದ್ದಿಯಾಗಿತ್ತು. ಹೋಟೆಲ್ ವೊಂದಕ್ಕೆ ಆಟೋದಲ್ಲಿ ತುಂಬಿದ್ದ ಈರುಳ್ಳಿಯನ್ನು ಇಳಿಸುವಾಗ ಈ ಘಟನೆ ನಡೆದಿತ್ತು ಎನ್ನಲಾಗಿದೆ.
ದೇಶಾದ್ಯಂತ ಈರುಳ್ಳಿ ಕಳ್ಳರ ಹಾವಳಿ
ಮಧ್ಯಪ್ರದೇಶದಲ್ಲೂ ಈರುಳ್ಳಿ ಕಳ್ಳತನಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದೆಯಷ್ಟೇ ನಾಸಿಕ್ ನಿಂದ ಗೋರಖ್ ಪುರಕ್ಕೆ ಸಾಗಿಸಲಾಗುತ್ತಿದ್ದ 20 ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿ ತುಂಬಿದ ಲಾರಿಯನ್ನೇ ಖದೀಮರು ಕದ್ದಿದ್ದರು. ನಂತರ ಮಂಡಸೂರ್ ಬಳಿ ರೈತನು ಬೆಳೆದ 30 ಸಾವಿರ ರೂಪಾಯಿ ಮೌಲ್ಯದ ಈರುಳ್ಳಿಯನ್ನು ಜಮೀನಿನಿಂದಲೇ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಸ್ವತಃ ರೈತನೇ ಪೊಲೀಸರಿಗೆ ದೂರು ನೀಡಿದ್ದನು.