RSS ಕೇಂದ್ರ ಕಚೇರಿ ಹೊಂದಿರುವ ನಾಗಪುರದಲ್ಲಿ ಬಿಜೆಪಿಗೆ ಭಾರೀ ಮುಖಭಂಗ
ಮುಂಬೈ, ಡಿ 5: ಮಹಾರಾಷ್ಟ್ರದಲ್ಲಿ ಮಹಾವಿಕಾಸ ಆಘಾಡಿ ಮೈತ್ರಿಕೂಟ ಸರಕಾರದ ಬೆನ್ನೆಲುಬಾಗಿರುವ, ಹಿರಿಯ ಮುಖಂಡ ಶರದ್ ಪವಾರ್ ಅವರ ರಣತಂತ್ರ ರಾಜ್ಯದ ವಿಧಾನಪರಿಷತ್ ಚುನಾವಣೆಯಲ್ಲಿ ಚೆನ್ನಾಗಿ ವರ್ಕೌಟ್ ಆಗಿದೆ.
ಆರು ಸ್ಥಾನಗಳಿಗೆ ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ತೀವ್ರ ಮುಖಭಂಗ ಎದುರಿಸಿದೆ. ಇಲ್ಲಿ ಉಳಿದ ಐದರಲ್ಲಿ, ನಾಲ್ಕು ಸ್ಥಾನಗಳನ್ನು ಮೈತ್ರಿಕೂಟ ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದರೆ, ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.
ಮಹಾರಾಷ್ಟ್ರ: ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಮುಖಭಂಗ
ನಾಗಪುರ, ಪುಣೆ ಮತ್ತು ಔರಂಗಾಬಾದ್ ನ ಮೂರು ಪದವೀಧರ, ಪುಣೆ ಮತ್ತು ಅಮರಾವತಿಯ ಶಿಕ್ಷಕರ ಕ್ಷೇತ್ರ ಜೊತೆಗೆ, ಧುಳೆ-ನಂದೂರ್ಬಾದ್ ನ ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆದಿತ್ತು. ಈ ಪೈಕಿ, ಬಿಜೆಪಿ ಧುಳೆ ಕ್ಷೇತ್ರವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮಹಾವಿಕಾಸ ಆಘಾಡಿ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯ ಮಟ್ಟದಲ್ಲಿ ನಡೆದ ಮೊದಲ ಚುನಾವಣೆ ಇದಾಗಿತ್ತು. ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಸಾಧನೆ ಈ ಚುನಾವಣೆಯಲ್ಲಿ ಶೂನ್ಯ. ಬಿಜೆಪಿಗೆ ಭಾರೀ ಮುಖಭಂಗ:
ಮಹಾವಿಕಾಸ ಆಘಾಡಿ ಮೈತ್ರಿಕೂಟ
ಪುಣೆ ಪದವೀಧರ ಕ್ಷೇತ್ರದಲ್ಲಿ ಎನ್ಸಿಪಿಯ ಅರುಣ್ ಲಾಡ್ ಗಣಪತಿ, ಔರಂಗಾಬಾದ್ ನಲ್ಲಿ ಎನ್ಸಿಪಿಯ ಸತೀಶ್ ಚೌಹಾಣ್, ನಾಗಪುರದಲ್ಲಿ ಕಾಂಗ್ರೆಸ್ಸಿನ ಅಭಿಜಿತ್ ವಂಜಾರಿ, ಧುಳೆ-ನಂದೂರ್ಬಾದ್ ನಲ್ಲಿ ಬಿಜೆಪಿಯ ಅಮರೀಶ್ ಪಾಟೀಲ್, ಅಮರಾವತಿಯಲ್ಲಿ ಪಕ್ಷೇತರ ಕಿರಣ್ ಸರ್ ನಾಯಕ್, ಪುಣೆ ಶಿಕ್ಷಕರ ಕ್ಷೇತ್ರದಲ್ಲಿ ಜಯಂತ್ ದಿನಕರ್ ಅಸ್ಗಾಂವ್ಕರ್ ಜಯಸಾಧಿಸಿದ ಅಭ್ಯರ್ಥಿಗಳು.
ನಾಗಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ
ಬಿಜೆಪಿಯಲ್ಲಿ ಐದು ಸ್ಥಾನದಲ್ಲಿ ಸೋಲು ಅನುಭವಿಸಿದರೂ, ಭಾರೀ ಹಿನ್ನಡೆಯಾಗುವ ಸೋಲು ಎಂದರೆ ನಾಗಪುರದ್ದು. ಈ ಕ್ಷೇತ್ರದಲ್ಲಿ ಸ್ಪಷ್ಟ ಹಿಡಿತವನ್ನು ಬಿಜೆಪಿ ಹೊಂದಿದ್ದರೂ, ಸುಮಾರು ಆರು ದಶಕಗಳ ನಂತರ ಈ ಕ್ಷೇತ್ರದಲ್ಲಿ ಸೋಲು ಅನುಭವಿಸಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ. (ಚಿತ್ರದಲ್ಲಿ ನಾಗಪುರದ ವಿಜೇಜ ಕಾಂಗ್ರೆಸ್ ಅಭ್ಯರ್ಥಿ)
ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ
ನಾಗಪುರದಲ್ಲಿ ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕೇಂದ್ರ ಕಚೇರಿ ಇದೆ ಎನ್ನುವುದು ಒಂದು ಕಡೆಯಾದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಕೂಡಾ ಇದು. ಹಾಗಾಗಿ, ಇಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ನಿತಿನ್ ಗಡ್ಕರಿ ಕುಟುಂಬದ ಪ್ರಾಬಲ್ಯವಿರುವ ನಾಗಪುರದಲ್ಲಿ , ಫಡ್ನವೀಸ್ ಅವರ ತಂದೆ ಗಂಗಾಧರ ಅವರು ಈ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗಿ ಬರುತ್ತಿದ್ದರು. ಈಗ 58ವರ್ಷಗಳ ನಂತರ ಬಿಜೆಪಿ ಇಲ್ಲಿ ಸೋತಿದೆ.