ಎಚ್ಚರಿಕೆ ಗಂಟೆ: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ 3ನೇ ಅಲೆ!
ಮುಂಬೈ, ಏಪ್ರಿಲ್ 28: ಮಹಾರಾಷ್ಟ್ರ ಸರ್ಕಾರವು 18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕೆ ಲಸಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಇದರ ಬೆನ್ನಲ್ಲೇ ಸಾಂಕ್ರಾಮಿಕರೋಗ ತಜ್ಞರು ಕೊರೊನಾವೈರಸ್ ಸೋಂಕಿನ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಒಂದು ಕಡೆ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿದೆ. ಇನ್ನೊಂದು ಕಡೆ ಪ್ರಸ್ತುತ ನಡೆಯುತ್ತಿರುವ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವೂ ವೇಗ ಕಳೆದುಕೊಂಡಿದೆ. ಹೀಗೆ ಮುಂದುವರಿದರೆ ಮಹಾರಾಷ್ಟ್ರದಲ್ಲಿ ಮೂರನೇ ಅಲೆಯ ಆತಂಕ ತಪ್ಪಿದ್ದಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮೇ 1ರಿಂದ 18ರಿಂದ 44 ವಯಸ್ಸಿನವರಿಗೆ ಕೊರೊನಾ ಲಸಿಕೆ ಸಿಗಲ್ಲ
ಮಹಾರಾಷ್ಟ್ರದಲ್ಲಿ 18 ರಿಂದ 44 ವರ್ಷ ವಯೋಮಾನದ ಎಲ್ಲರಿಗೂ ಉಚಿತವಾಗಿ ಕೊರೊನಾವೈರಸ್ ಲಸಿಕೆಯನ್ನು ನೀಡುವುದಕ್ಕೆ ಸರ್ಕಾರದ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ತಿಳಿಸಿದರು. ಆದರೆ ಮೇ 1ರಿಂದಲೇ ಲಸಿಕೆ ವಿತರಣೆ ಆರಂಭಿಸುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ರಾಜ್ಯದಲ್ಲಿ ಕೊರೊನಾವೈರಸ್ ಲಸಿಕೆಯ ಕೊರತೆ
ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಮಹಾರಾಷ್ಟ್ರ ತೀರ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಲಸಿಕೆಯ ಕೊರತೆ ಎದುರಾಗಿದೆ. ವಾಸ್ತವದಲ್ಲಿ ಹೊಂದಿರು ಲಸಿಕೆಯಲ್ಲಿ ಎಲ್ಲರಿಗೂ ವಿತರಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೂ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ತಿಳಿಸಿದ್ದಾರೆ.
ಲಸಿಕೆ ನೀಡಿದ್ದಲ್ಲಿ ಮಾತ್ರ ಕೊರೊನಾವೈರಸ್ ನಿಯಂತ್ರಣ
ಮಹಾರಾಷ್ಟ್ರದಲ್ಲಿ ಒಟ್ಟು ಜನಸಂಖ್ಯೆಯ ಮೂರರ ಎರಡರಷ್ಟು ಜನರಿಗೆ ಲಸಿಕೆಯನ್ನು ನೀಡಿದಾಗ ಮಾತ್ರ ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯ ಎಂದು ತಜ್ಞರು ಅಭಿಪ್ರಾಯ ಮಂಡಿಸಿದ್ದಾರೆ. 9 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 102 ದಿನಗಳೇ ಕಳೆದು ಹೋಗಿದೆ. ಇಷ್ಟು ದಿನಗಳಲ್ಲಿ ಕೇವಲ 1.50 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜನರು ಮನೆಗಳಿಂದ ಹೊರ ಬಂದರೆ 3ನೇ ಅಲೆ
ಪ್ರಸ್ತುತ ಸಂದರ್ಭದಲ್ಲಿ ಕೊರೊನಾವೈರಸ್ ಲಸಿಕೆಯನ್ನು ವಿತರಿಸುವಲ್ಲಿ ಸರ್ಕಾರ ವೈಫಲ್ಯ ಅನುಭವಿಸಿದರೆ ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ. ಇಂದು ಲಸಿಕೆ ನೀಡದಿದ್ದರೆ ಮುಂದೆ ಜನರು ಮನೆಗಳಿಂದ ಹೊರಗೆ ಬರುತ್ತಾರೆ. ಆಗ ಮತ್ತೆ ಕೊವಿಡ್-19 ಸೋಂಕಿನ ಮೂರನೇ ಅಲೆ ಹರಡಲು ಆರಂಭವಾಗುತ್ತದೆ. ಈ ಹಿಂದೆ ಡಿಸೆಂಬರ್ ತಿಂಗಳಿನಲ್ಲೂ ನಿಯಮಗಳನ್ನು ಸಡಿಲಗೊಳಿಸಿದ್ದಕ್ಕೆ ಜನರ ಓಡಾಟಸ ಹೆಚ್ಚಾಯಿತು. ಇದರಿಂದಾಗಿ ಎರಡನೇ ಅಲೆ ಹೆಚ್ಚಾಯಿತು. ತುರ್ತಾಗಿ ಎಲ್ಲರಿಗೂ ಲಸಿಕೆ ನೀಡದಿದ್ದರೆ ಕೊರೊನಾವೈರಸ್ ಮೂರನೇ ಅಲೆಗೆ ನಾವೇ "ಕೆಂಪು ಹಾಸಿನ" ಆಹ್ವಾನ ನೀಡಿದಂತೆ ಆಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ರಾಜ್ಯದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್
ಮಹಾರಾಷ್ಟ್ರದಲ್ಲಿ ಒಂದೇ ದಿನ 63,309 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 985 ಜನರು ಮಹಾಮಾರಿಗೆ ಬಲಿಯಾಗಿದ್ದು, ಇದೇ ಅವಧಿಯಲ್ಲಿ 61,181 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 44,73,394 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 37,30,729 ಸೋಂಕಿತರು ಗುಣಮುಖರಾಗಿದ್ದು, 6,73,481 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Recommended Video