Breaking News: ಮಹಾರಾಷ್ಟ್ರದಲ್ಲಿ 12 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ ಸ್ಪೀಕರ್
ಮುಂಬೈ, ಜೂನ್ 05: ಮಹಾರಾಷ್ಟ್ರ ವಿಧಾನಸಭೆ ಕಲಾಪದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ 12 ಮಂದಿ ಶಾಸಕರನ್ನು ಅಮಾನತುಗೊಳಿಸಿದೆ ಸ್ಪೀಕರ್ ಜಿರ್ವಾಲ್ ನರಹರಿ ಸೀತಾರಾಮ್ ಆದೇಶ ಹೊರಡಿಸಿದ್ದಾರೆ.
ಸೋಮವಾರ ವಿಧಾನಸಭೆ ಕಲಾಪ ನಡೆಯುತ್ತಿರುವ ವೇಳೆ ಸದನದಲ್ಲಿ ಗದ್ದಲ ಸೃಷ್ಟಿಸಿದ ಹಿನ್ನೆಲೆ 12 ಮಂದಿ ಭಾರತೀಯ ಜನತಾ ಪಕ್ಷದ ಶಾಸಕರನ್ನು ಮುಂದಿನ ಒಂದು ವರ್ಷಗಳವರೆಗೂ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಟೈಮ್ಸ್ ನೌ ವರದಿ ಪ್ರಕಾರ, ಬಿಜೆಪಿ ಶಾಸಕರು ಪ್ರಸಿಡಿಂಗ್ ಅಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿದರು ಎನ್ನಲಾಗಿದೆ.
ರಾಜ್ಯ ಹಿಂದುಳಿದ ವರ್ಗ ಆಯೋಗವು ರಾಜ್ಯದ ಒಬಿಸಿ ಜನಸಂಖ್ಯೆಯ ಪ್ರಾಯೋಗಿಕ ಅಂಕಿ-ಅಂಶಗಳನ್ನು ತಯಾರಿಸಲು ಅನುವು ಮಾಡಿಕೊಡಲು 2011ರ ಜನಗಣತಿಯ ದತ್ತಾಂಶವನ್ನು ಒದಗಿಸುವಂತೆ ಮಹಾರಾಷ್ಟ್ರ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು.
ರಾಜಕೀಯ ಮೀಸಲಾತಿ ಬಗ್ಗೆ ನಿರ್ಣಯ
ಮಹಾರಾಷ್ಟ್ರದ ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಪಕ್ಷದ ಸದಸ್ಯರಿಗೆ ರಾಜಕೀಯ ಮೀಸಲಾತಿ ಒದಗಿಸುವ ದೃಷ್ಟಿಯಿಂದ ಮಹಾ ವಿಕಾಸ್ ಅಗಾಧಿ ಹೊಸ ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯವನ್ನು ಎನ್ಸಿಪಿ ಮುಖಂಡ ಮತ್ತು ರಾಜ್ಯ ಸಚಿವ ಛಗನ್ ಭುಜ್ಬಾಲ್ ಮಂಡಿಸಿದರು. ಬಿಜೆಪಿ ಶಾಸಕರ ಗದ್ದಲ ಕೋಲಾಹಲದ ನಡುವೆ ಧ್ವನಿ ಮತ ಚಲಾಯಿಸಲಾಯಿತು. ಪ್ರೆಸಿಡಿಂಗ್ ಅಧಿಕಾರಿ ಭಾಸ್ಕರ್ ಜಾಧವ್ ಮತದಾನದ ನಿರ್ಣಯವನ್ನು ಮಂಡಿಸಿದಾಗ, ಕೆಲವು ಬಿಜೆಪಿ ಸದಸ್ಯರು ಸ್ಪೀಕರ್ ವೇದಿಕೆಯ ಮೇಲೆ ಹತ್ತಿ ಅಧ್ಯಕ್ಷರೊಂದಿಗೆ ವಾದಕ್ಕಿಳಿದರು ಎಂದು ವರದಿಯಾಗಿದೆ.
ಬಿಜೆಪಿ ಶಾಸಕರ ವಿರುದ್ಧ ಮಿತ್ರಕೂಟಗಳ ಆರೋಪ
ವಿಧಾನಸಭೆಯಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು. ಅದು ಪುನರಾರಂಭಗೊಂಡಾಗ, ಶಿವಸೇನೆ ಮತ್ತು ಎನ್ಸಿಪಿ ಬಿಜೆಪಿ ಸದಸ್ಯರು ಪ್ರಿಸೈಡಿಂಗ್ ಅಧಿಕಾರಿಯೊಂದಿಗೆ "ಕೆಟ್ಟದಾಗಿ ವರ್ತಿಸಿದ್ದಾರೆ" ಮತ್ತು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಒಂದು ವರ್ಷ ಬಿಜೆಪಿ ಶಾಸಕರು ಅಮಾನತು
ವಿಧಾನಸಭಾ ಕಲಾಪದ ಸಂದರ್ಭದಲ್ಲಿ ಗದ್ದಲ-ಕೋಲಾಹಲ ಸೃಷ್ಟಿ ಹಾಗೂ ಪ್ರೆಸಿಡಿಂಗ್ ಅಧಿಕಾರಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆ ಭಾರತೀಯ ಜನತಾ ಪಕ್ಷದ 12 ಶಾಸಕರನ್ನು ಮುಂದಿನ ಒಂದು ವರ್ಷಗಳವರೆಗೂ ಅಮಾನತುಗೊಳಿಸಿ ಸ್ಪೀಕರ್ ಜಿರ್ವಾಲ್ ನರಹರಿ ಸೀತಾರಾಮ್ ಆದೇಶಿಸಿದ್ದಾರೆ.
ಬಿಜೆಪಿಯಿಂದ ವಿಧಾನಸಭೆ ಕಲಾಪ ಬಹಿಷ್ಕಾರ
ಬಿಜೆಪಿ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಶಾಸಕರು ಯಾವುದೇ ರೀತಿ ಅನುಚಿತ ವರ್ತನೆ ತೋರಿಲ್ಲ. ವಿಧಾನಸಭೆ ಕಲಾಪವನ್ನು ಸ್ಥಗಿತಗೊಳಿಸುವುದಕ್ಕೆ ಮಹಾ ವಿಕಾಸ್ ಅಗಾಧಿ ಸರ್ಕಾರವು ಹೊಸ ತಿರುವು ನೀಡುತ್ತಿದೆ," ಎಂದು ದೂಷಿಸಿದ್ದಾರೆ. ಅಲ್ಲದೇ, ಈ ಸಾಲಿನ ವಿಧಾನಸಭೆ ಕಲಾಪವನ್ನು ಬಿಜೆಪಿ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.