ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಿಗ್ ಶಾಕ್: ಶಿವಸೇನೆ ನಾಯಕನಿಂದ ಪವಾರ್ ಭೇಟಿ
ಮುಂಬೈ, ನವೆಂಬರ್ 01: ಶಿವಸೇನೆ ನಾಯಕ ಸಂಯಜ್ ರಾವತ್ ಅವರು ಶುಕ್ರವಾರ ಎನ್ ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದು, ಮಹಾರಾಷ್ಟ್ರ ಬಿಜೆಪಿ ಘಟಕಕ್ಕೇ ಭಾರೀ ಆಘಾತವನ್ನುಂಟು ಮಾಡಿದೆ.
ಬಿಜೆಪಿ ತನ್ನ ಬೆಡಿಕೆಗೆ ಒಪ್ಪಿ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆಗೆ ಬಿಟ್ಟುಕೊಡದೆ ಇದ್ದಲ್ಲಿ, ಶಿವಸೇನೆಯು ಎನ್ ಸಿಪಿ, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಬಹುದಾದ ಸಾಧ್ಯತೆಯೂ ಇದ್ದು, ಅದಕ್ಕೆ ಎನ್ ಸಿಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಸಿದ್ಧವಿರುವುದರಿಂದ ಬಿಜೆಪಿ ಪಾಲಿಗೆ ಈ ಇಬ್ಬರು ನಾಯಕರ ಭೇಟಿ ಆಘಾತವೆನ್ನಿಸಿದೆ.
ಆದರೆ ಭೇಟಿ ಬಳಿಕ ಮಾತನಾಡಿದ ಸಂಜಯ್ ರಾವತ್, 'ದೀಪಾವಳಿ ಹಿನ್ನೆಲೆಯಲ್ಲಿ ಇದೊಂದು ಸೌಜನ್ಯದ ಭೇಟಿಯಷ್ಟೆ'. ನಾವು ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ' ಎಂದಿದ್ದಾರೆ.
ಸರ್ಕಾರ ರಚನೆ ವಿಷಯದಲ್ಲಿ ಉದ್ಧವ್ ಠಾಕ್ರೆ ಮಾತೇ ಅಂತಿಮ: ಆದಿತ್ಯ ಠಾಕ್ರೆ
ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಮತ್ತಿಬ್ಬರು ಡಿಸಿಎಂ: ಮೂಲಗಳಿಂದ ಮಾಹಿತಿ
ಈ ವಾರದ ಆರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಶಿವಸೇನೆ ನಾಯಕರು ಭೇಟಿ ಮಾಡಿದ್ದರು. ಅದನ್ನೂ ಸೌಜನ್ಯದ ಭೇಟಿ ಎಂದಿದ್ದರು. ಇದರೊಟ್ಟಿಗೆ ಶುಕ್ರವಾರ ವರ್ಲಿ ಶಾಸಕ ಆದಿತ್ಯ ಠಾಕ್ರೆ ಸಹ ರಾಜ್ಯಪಾಲರನ್ನು ಭೇಟಿ ಮಾಡಿದ್ದು, "ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಲು ನಾನು ಗವರ್ನರ್ ಅವರನ್ನು ಭೇಟಿ ಮಾಡಿದ್ದೆ. ಸರ್ಕಾರ ರಚನೆಯ ಕುರಿತು ಯಾವುದೇ ಚರ್ಚೆ ನಡೆಸಿಲ್ಲ" ಎಂದಿದ್ದರು.