ಸೋನಿಯಾ ಗಾಂಧಿ ಜತೆ ಉದ್ಧವ್ ಠಾಕ್ರೆ ಮಾತುಕತೆ
ಮುಂಬೈ, ನವೆಂಬರ್ 11: ಮಹಾರಾಷ್ಟ್ರದಲ್ಲಿ ಎನ್ಸಿಪಿ-ಶಿವಸೇನಾ ನೇತೃತ್ವದ ಸರ್ಕಾರ ರಚನೆಯಾದರೆ ಅದಕ್ಕೆ ಬೆಂಬಲ ನೀಡುವ ಪ್ರಸ್ತಾಪದ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಅಹ್ಮದ್ ಪಟೇಲ್ ಸೇರಿದಂತೆ ಪ್ರಮುಖ ನಾಯಕರು ಸಭೆ ನಡೆಸಿದ್ದಾರೆ. ಈ ನಡುವೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಶಿವಸೇನಾ-ಎನ್ಸಿಪಿ ಸರ್ಕಾರಕ್ಕೆ ಕಾಂಗ್ರೆಸ್ನಿಂದ ಬೆಂಬಲ ಕೋರಿದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ಸ್ಥಾಪನೆಗೆ ಸೈದ್ಧಾಂತಿಕ ವೈರುಧ್ಯ ಹೊಂದಿರುವ ಪಕ್ಷಗಳು ಕೈಜೋಡಿಸುವ ಪ್ರಯತ್ನ ಇದೇ ಮೊದಲ ಬಾರಿಯಾಗಿದೆ. ಶಿವಸೇನಾ, ಎನ್ಡಿಎ ಸರ್ಕಾರಕ್ಕೆ ನೀಡಿರುವ ಬೆಂಬಲದಿಂದ ಸಂಪೂರ್ಣ ಹೊರಬಂದರೆ ಮಾತ್ರ ಅದರೊಂದಿಗೆ ಸರ್ಕಾರ ರಚನೆ ಮಾಡುವುದಾಗಿ ಎನ್ಸಿಪಿ ಖಡಾಖಂಡಿತವಾಗಿ ಹೇಳಿತ್ತು.
ಶಿವಸೇನೆಗೆ ಬೆಂಬಲ ನೀಡುವುದು ದುರಂತದ ನಡೆ ಎಂದ ಕಾಂಗ್ರೆಸ್ ಮುಖಂಡ
ಎನ್ಡಿಎ ಸರ್ಕಾರದಲ್ಲಿದ್ದ ಶಿವಸೇನಾದ ಏಕೈಕ ಸಚಿವ ಅರವಿಂದ್ ಸಾವಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಶಿವಸೇನಾ, ಅಧಿಕೃತವಾಗಿ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಸೂಚನೆ ನೀಡಿದೆ. ಅದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ಚುರುಕು ಪಡೆದಿವೆ.
ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಬೇಕೇ ಅಥವಾ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳುವುದುದನ್ನು ಎನ್ಸಿಪಿ ಕಾಂಗ್ರೆಸ್ಗೆ ಬಿಟ್ಟಿದೆ. ಹೀಗಾಗಿ ಸೋನಿಯಾ ಗಾಂಧಿ ಅವರೊಂದಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳು ಮತ್ತು ಪ್ರಮುಖ ನಾಯಕರು ಸಭೆ ನಡೆಸಿದ್ದರು. ಆರಂಭದಲ್ಲಿ ಶಿವಸೇನಾ ಜತೆ ಕೈಜೋಡಿಸುವ ಸಾಧ್ಯತೆಗಳನ್ನು ಸೋನಿಯಾ ಗಾಂಧಿ ನಿರಾಕರಿಸಿದ್ದರು. ಆದರೆ ಮಹಾರಾಷ್ಟ್ರದಲ್ಲಿನ ಪಕ್ಷದ ನಾಯಕರ ಒತ್ತಡ ಹೆಚ್ಚಾದ ಕಾರಣ ಅವರು ಅದರ ಬಗ್ಗೆ ಚಿಂತನೆ ನಡೆಸಿದ್ದಾರೆ.
ಶಿವಸೇನೆಯ ಏಕೈಕ ಕೇಂದ್ರ ಸಚಿವರ ರಾಜೀನಾಮೆ, ಗರಿಗೆದರಿತು 'ಮಹಾ' ರಾಜಕೀಯ
ಸಭೆ ಬಳಿಕ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಸೋನಿಯಾ ಗಾಂಧಿ ಅವರು ಉದ್ಧವ್ ಠಾಕ್ರೆ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.