ಮಾತು ತಪ್ಪುವುದು ನೈಜ ಹಿಂದುತ್ವವಲ್ಲ: ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ
ಮುಂಬೈ, ನವೆಂಬರ್ 12: ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸೂತ್ರವೊಂದನ್ನು ರಚಿಸಲಿವೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಿಳಿಸಿದರು.
ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಎನ್ಸಿಪಿಯಂತೆಯೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ಬಯಸಿರುವುದಾಗಿ ತಿಳಿಸಿದರು.
Breaking ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೋವಿಂದ್ ಅಂಕಿತ
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ವಿರುದ್ಧ ಉದ್ಧವ್ ವಾಗ್ದಾಳಿ ನಡೆಸಿದರು.
'ಸರ್ಕಾರ ರಚನೆಗೆ ಬೆಂಬಲ ಕೋರುವ ಸಂಬಂಧ ಕಾಂಗ್ರೆಸ್ ಮತ್ತು ಎನ್ಸಿಪಿ ಜತೆ ಅಧಿಕೃತವಾಗಿ ಮಾತನಾಡಿದ್ದು ಸೋಮವಾರ ಮಾತ್ರ. ಅದಕ್ಕಾಗಿ ನಾವು ಸೂತ್ರವೊಂದನ್ನು ರಚಿಸಲಿದ್ದೇವೆ' ಎಂದು ತಿಳಿಸಿದರು. ಬಿಜೆಪಿ ಈಗಲೂ ಸಂಪರ್ಕದಲ್ಲಿದೆ. ನಾವು ಬಯಸಿದ್ದನ್ನು ಅವರು ಕೊಡುವುದಾದರೆ ಅವರ ಆಹ್ವಾನವನ್ನು ಪರಿಗಣಿಸಲು ಈಗಲೂ ಸಿದ್ಧರಿದ್ದೇವೆ ಎಂದು ಉದ್ಧವ್ ಠಾಕ್ರೆ ತಮ್ಮ ಶಾಸಕರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ: ಸರ್ಕಾರ ರಚನೆಗೆ 6 ತಿಂಗಳವರೆಗೆ ಅವಕಾಶ
ಕಾಂಗ್ರೆಸ್ ಮತ್ತು ಎನ್ಸಿಪಿಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದರೆ ಅವರು ಬಯಸಿರುವಂತೆಯೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಸ್ಪಷ್ಟೀಕರಣ ಬಯಸಿರುವುದಾಗಿ ಹೇಳಿದರು.
ರಾಜ್ಯಪಾಲರಿಂದ ಹೆಚ್ಚು ಸಮಯ
ಸರ್ಕಾರ ರಚನೆಗೆ ಬಿಜೆಪಿಗೆ ನೀಡಿದ್ದ ಗಡುವು ಮುಗಿಯುವ ಮುನ್ನವೇ ಶಿವಸೇನಾಗೆ ಸರ್ಕಾರ ರಚನೆಗೆ ಆಸಕ್ತಿ ಇದೆಯೇ ಎಂದು ಮಾಹಿತಿ ಬಯಸಿ ರಾಜ್ಯಪಾಲರು ಶಿವಸೇನಾಕ್ಕೆ ಪತ್ರ ರವಾನಿಸಿದ್ದರು. ಬಳಿಕ ನಮಗೆ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಅವರನ್ನು ಕೋರಿದ್ದೆವು. ಆದರೆ ಅವರು ನಿರಾಕರಿಸಿದ್ದರು. ಈಗ ರಾಜ್ಯಪಾಲರು ನಮಗೆ ಸರ್ಕಾರ ರಚನೆಯ ಬಗ್ಗೆ ನಿರ್ಧರಿಸಲು 6 ತಿಂಗಳು ನೀಡಿದಂತಿದೆ. ನಾವು 48 ಗಂಟೆ ಕೇಳಿದ್ದೆವು, ಆದರೆ ರಾಜ್ಯಪಾಲರು ಆರು ತಿಂಗಳು ನೀಡಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ವಿಭಿನ್ನ ಸಿದ್ಧಾಂತಿಗಳ ಜತೆ ಬಿಜೆಪಿ ಮೈತ್ರಿ
ಹಿಂದುತ್ವದ ವಿಚಾರದಲ್ಲಿ ಸೇನಾದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಪಕ್ಷಗಳ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದನ್ನು ಪ್ರಸ್ತಾಪಿಸಿದರು.
'ಬಿಜೆಪಿಯು ಮೆಹಬೂಬಾ ಮುಫ್ತಿ (ಪಿಡಿಪಿ), ನಿತೀಶ್ ಕುಮಾರ್ (ಜೆಡಿಯು), ಚಂದ್ರಬಾಬು ನಾಯ್ಡು (ಟಿಡಿಪಿ) ಮತ್ತು ರಾಮವಿಲಾಸ್ ಪಾಸ್ವಾನ್ (ಎಕ್ಜೆಪಿ) ಅವರಂತಹ ತನ್ನ ಸಿದ್ಧಾಂತೇತರ ಪಕ್ಷಗಳ ಜತೆ ಸಹಭಾಗಿತ್ವ ನಡೆಸಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಇದು ಕಾಂಗ್ರೆಸ್ ಮತ್ತು ಎನ್ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ನೆರವು ನೀಡಲಿದೆ' ಎಂದು ಹೇಳಿದರು.
ವಿರೋಧಿಗಳ ನಡುವೆ ಮೈತ್ರಿ: ಶಿವಸೇನಾ-ಕಾಂಗ್ರೆಸ್ 'ಹಸ್ತಲಾಘವ' ಸಾಧ್ಯವೇ?
ಇದು ನೈಜ ಹಿಂದುತ್ವವಲ್ಲ
ಬಿಜೆಪಿಯೊಂದಿಗಿನ ಮೈತ್ರಿಯನ್ನು ಅಧಿಕೃತವಾಗಿ ಮುರಿದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ, 'ಅದು ಮುರಿದುಹೋಗಿದ್ದರೆ, ಅದು ಅವರಿಂದಲೇ ಹೊರತು ನನ್ನಿಂದ ಅಲ್ಲ. ಅವರು ಸುಳ್ಳು ಹೇಳಿದರು ಮತ್ತು ನಾನು ಸುಳ್ಳುಗಾರ ಎಂದು ಸಾಬೀತುಪಡಿಸಲು ಪ್ರಯತ್ನಿಸಿದರು' ಎಂದು ಪ್ರತಿಕ್ರಿಯಿಸಿದರು. ಸಿಎಂ ಸೀಟು ಹಂಚಿಕೆಯು ಚುನಾವಣೆಗೂ ಮುನ್ನವೇ ನಿರ್ಧಾರವಾಗಿತ್ತು. ಆದರೆ ಬಿಜೆಪಿ ತನ್ನ ಬದ್ಧತೆಯನ್ನು ಗೌರವಿಸಲಿಲ್ಲ. ನೀವು ರಾಮ ಮಂದಿರದ ಪರ ಒಲವು ಹೊಂದಿದ್ದು, ವಚನಗಳನ್ನು ಮುರಿದಾಗ ಅದು ನೈಜ ಹಿಂದುತ್ವ ಆಗುವುದಿಲ್ಲ' ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮಗೆ ಅವಸರವಿಲ್ಲ
ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, 'ನಾವು ಕಾಂಗ್ರೆಸ್ ಜತೆ ಮಾತುಕತೆ ನಡೆಸಲಿದ್ದೇವೆ. ಬಳಿಕ ಶಿವಸೇನಾಗೆ ಬೆಂಬಲ ನೀಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ. ನಮಗೆ ಯಾವುದೇ ಅವಸರವಿಲ್ಲ' ಎಂದರು.