10 ರು ಗೆ ಊಟ ನುಡಿದಂತೆ ನಡೆದ ಶಿವಸೇನಾ ಸರ್ಕಾರ
ಮುಂಬೈ, ಜನವರಿ 27: "ಉತ್ತಮ ಗುಣಮಟ್ಟದ ಆಹಾರವನ್ನು 10 ರುಗಳಿಗೆ ನೀಡುವ ಭೋಜನಾಲಯವನ್ನು ಮಹಾರಾಷ್ಟದೆಲ್ಲೆಡೆ ಸ್ಥಾಪಿಸಲಾಗುವುದು. ಸುಮಾರು 1,000 ಸಂಖ್ಯೆಯ ಭೋಜನಾಲಯ ಸ್ಥಾಪನೆ ಯೋಜನೆ ರೂಪಿಸಲಾಗಿದೆ. ಕೇಂದ್ರಿಕೃತ ಅಡುಗೆ ಮನೆ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಸ್ಥಾಪಿಸಿ ಅದರ ನಿರ್ವಹಣೆಯನ್ನು ಮಹಿಳೆಯರಿಗೆ ನೀಡಲಾಗುವುದು" ಎಂದು ಚುನಾವಣೆಗೂ ಮುನ್ನ ಶಿವಸೇನಾ ಮುಖಂಡ ,ಹಾಲಿ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಆಶ್ವಾಸನೆ ನೀಡಿದ್ದರು. ಈ ಆಶ್ವಾಸನೆಯನ್ನು ಇಂದು ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಜಾರಿಗೊಳಿಸಿದೆ.
ಮಹಾರಾಷ್ಟ್ರದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಪ್ರತ್ಯೇಕ ಕೇಂದ್ರ/ಕ್ಯಾಂಟೀನ್ ಸ್ಥಾಪಿಸಲಾಗುತ್ತದೆ. ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದ್ದು, ಶಿವಸೇನಾದ ಕ್ರಮಕ್ಕೆ ಮೈತ್ರಿ ಒಕ್ಕೂಟದ ಕಾಂಗ್ರೆಸ್, ಎನ್ಸಿಪಿ ಕೂಡಾ ಬೆಂಬಲ ನೀಡಿವೆ.
10ರು ಗೆ ಊಟ, ರೈತ ಸ್ನೇಹಿ ಪ್ರಣಾಳಿಕೆ ಬಿಡುಗಡೆ ಮಾಡಿದ ಶಿವಸೇನಾ
ಶಿವ ಭೋಜನ್ ಥಾಲಿ: ಮುಂಬೈನಲ್ಲಿ ಸಚಿವ ಅಸ್ಲಾಂ ಶೇಖ್, ಶಿವ ಭೋಜನ್ ಥಾಲಿ ಕ್ಯಾಂಟೀನ್ ಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ನಾಯರ್ ಆಸ್ಪತ್ರೆ ಸಮೀಪ ಮೊದಲ ಕ್ಯಾಂಟೀನ್ ಆರಂಭಗೊಂಡಿದೆ. ಇದೇ ರೀತಿ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರು ಬಾಂದ್ರಾ ಬಳಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕ್ಯಾಂಟೀನ್ ಗೆ ಚಾಲನೆ ನೀಡಿದರು.
10 ರು ಥಾಲಿಯಲ್ಲಿ ಏನೇನು ಇರಲಿದೆ?
ಶಿವ ಭೋಜನ್ ಥಾಲಿಯಲ್ಲಿ ಎರಡು ಚಪಾತಿ, ಒಂದು ತರಕಾರಿ ಪಲ್ಯ, ಒಂದು ಕಪ್ ಅನ್ನ ಹಾಗೂ ದಾಲ್ ಇರಲಿದೆ. ಇಷ್ಟಕ್ಕೆ 10 ರು ಮಾತ್ರ ನಿಗದಿ ಮಾಡಲಾಗಿದೆ. ಮಹಾರಾಷ್ಟ್ರದ ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ಸದ್ಯಕ್ಕೆ ಕ್ಯಾಂಟೀನ್ ಚಾಲನೆಗೊಂಡಿದ್ದು ,ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಂಟೀನ್ ಶೀಘ್ರದಲ್ಲೇ ಕಾರ್ಯ ನಿರ್ವಹಿಸಲಿದೆ.
ಶಿವ ಭೋಜನ್ ಥಾಲಿ ಸಮಯ
ಮಧ್ಯಾಹ್ನ 12 ರಿಂದ 2 ಗಂಟೆ ಸಮಯದಲ್ಲಿ ಶಿವ ಭೋಜನ್ ಥಾಲಿ ಕಾರ್ಯ ನಿರ್ವ್ಚಹಿಸಲಿದೆ. ಪ್ರತಿ ಕ್ಯಾಂಟೀನ್ ಗೆ ದಿನಕ್ಕೆ 500 ಥಾಲಿ(ತಟ್ಟೆ) ನೀಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳೂ ಹೇಳಿದರು.ಮೊದಲ ದಿನದಂದು ಆಹಾರ ಸವಿದ ಸಾರ್ವಜನಿಕರು ಠಾಕ್ರೆ ಸರ್ಕಾರವನ್ನು ಹೊಗಳಿದ್ದಾರೆ. ಆದರೆ, ಎರಡು ಗಂಟೆ ಅವಧಿ ತುಂಬಾ ಕಡಿಮೆಯಾಯಿತು. ಭೋಜನ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಶಿವ ಭೋಜನ್ ಥಾಲಿ ಸದ್ಯಕ್ಕೆ ಮೂರು ತಿಂಗಳ ಪ್ರಾಯೋಗಿಕ ಯೋಜನೆಯಾಗಿದೆ. 6.4 ಕೋಟಿ ರು ವೆಚ್ಚ ತಗುಲುತ್ತಿದೆ. ಪ್ರತಿ ಥಾಲಿಗೆ ಸರ್ಕಾರಕ್ಕೆ 50 ರು ಖರ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 35 ರು ತಗುಲಲಿದೆ.
ಎಲ್ಲೆಲ್ಲಿ ಶಿವ ಭೋಜನ್ ಸ್ಥಾಪನೆ
ಆರಂಭಿಕ ಹಂತದಲ್ಲಿ 50 ಶಿವ ಭೋಜನ್ ಕ್ಯಾಂಟೀನ್ ಸ್ಥಾಪನೆಗೆ ಮುಂದಾಗಲಿದೆ. ವಿವಿಧ ಹಂತಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಕ್ಯಾಂಟೀನ್ ಸ್ಥಾಪಿಸಲಾಗುತ್ತದೆ. ಜಿಲ್ಲಾಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಾರಿ ಕಚೇರಿ ಮುಂತಾದೆಡೆ ಶಿವ ಭೋಜನ್ ಕ್ಯಾಂಟೀನ್ ಸ್ಥಾಪನೆಯಾಗಲಿದೆ. 10 ರು ನೀಡಿ ಪೂರ್ಣ ಭೋಜನ ಮಾಡುವಂತಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಿಎಂಸಿಯಲ್ಲಿ ಜಾರಿಯಲ್ಲಿದೆ
ಬೃಹತ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ತನ್ನ ಕ್ಯಾಂಟೀನ್ನಲ್ಲಿ ಉದ್ಯೋಗಿಗಳಿಗೆ ಕೇವಲ 10 ರೂ. ದರದಲ್ಲಿ ಊಟ ಒದಗಿಸುವ ಯೋಜನೆಗೆ ಕಳೆದ ವರ್ಷವೇ ಚಾಲನೆ ನೀಡಲಾಗಿದೆ.
ಶಿವಸೇನಾ ನಾಯಕಿ ಕಿಶೋರಿ ಪೆಡ್ನೇಕರ್ ಈ ಯೋಜನೆಗೆ ಚಾಲನೆ ನೀಡಿದ್ದರು. ಹತ್ತು ರೂಪಾಯಿಯ ಊಟವು ಎರಡು ಚಪಾತಿ, ಅನ್ನ, ದಾಲ್ ಮತ್ತು ಎರಡು ಬಗೆಯ ತರಕಾರಿ ಖಾದ್ಯಗಳನ್ನು ಒಳಗೊಂಡಿರಲಿದೆ.