ಶಾಸಕರಿಗೆ ಬಿಜೆಪಿ ಗಾಳ: ಮಿತ್ರ ಪಕ್ಷದ ವಿರುದ್ಧವೇ ಶಿವಸೇನಾ ಗಂಭೀರ ಆರೋಪ
ಮುಂಬೈ, ನವೆಂಬರ್ 7: 'ಶಿವಸೇನಾಗೆ ಬೆಂಬಲ ನೀಡುವ ಮೂಲಕ ಸರ್ಕಾರ ರಚನೆಗೆ ಮುಂದಾಗುವುದಿಲ್ಲ. ಬಿಜೆಪಿ-ಶಿವಸೇನಾ ಮೈತ್ರಿಗೆ ಜನರು ಬಹುಮತ ನೀಡಿರುವುದರಿಂದ ಅವರೇ ಸರ್ಕಾರ ರಚಿಸಬೇಕು. ನಾವು ವಿರೋಧಪಕ್ಷದ ಸ್ಥಾನದಲ್ಲಿಯೇ ಕೂರುತ್ತೇವೆ' ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಯಾದವ್, ಶಿವಸೇನಾ-ಎನ್ಸಿಪಿ ಮೈತ್ರಿ ಸರ್ಕಾರದ ಕುರಿತಾದ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿದ ಬಳಿಕವೂ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಸರ್ಕಾರ ರಚನೆಯ ಕಸರತ್ತು ಯಾವುದೇ ನಿರ್ಣಾಯಕ ಹಂತಕ್ಕೆ ತಲುಪಿಲ್ಲ.
ಈ ನಡುವೆ ಬಿಜೆಪಿಯು ತನ್ನ ಶಾಸಕರಿಗೆ ಆಮಿಷವೊಡ್ಡುವ ಮೂಲಕ ಅವರನ್ನು ಸೆಳೆದುಕೊಂಡು ಸರ್ಕಾರ ರಚನೆಗೆ ಸಂಚು ನಡೆಸುತ್ತಿದೆ ಎಂದು ಶಿವಸೇನಾ ಗುರುವಾರ ತನ್ನ ಮಿತ್ರ ಪಕ್ಷದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಮಹಾರಾಷ್ಟ್ರ: ಶಿವಸೇನಾ ಆಸೆಗೆ ತಣ್ಣೀರೆರಚಿದ ಶರದ್ ಪವಾರ್
ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಶಿವಸೇನಾ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಮುಖ್ಯಮಂತ್ರಿಯನ್ನು ಮಹಾರಾಷ್ಟ್ರ ಬಯಸಿದೆ ಎಂದು ಹೇಳಿದೆ. ಅಲ್ಲದೆ, ಸರ್ಕಾರ ರಚನೆಗೆ ಎದುರಾಗಿರುವ ಬಿಕ್ಕಟ್ಟನ್ನು ತುಂಡರಿಸಲು ಹಣದ ಬಲವನ್ನು ಬಳಸಿಕೊಳ್ಳುತ್ತಿದೆ ಎಂದು ತನ್ನ ಮಿತ್ರ ಪಕ್ಷದ ವಿರುದ್ಧ ಆರೋಪಿಸಿದೆ.
ಹಣಬಲದ ಮೂಲಕ ಪ್ರಯತ್ನ
'ಕೆಲವು ಜನರು ಹಣ ಬಲದ ಮೂಲಕ ಶಿವಸೇನಾದ ನೂತನ ಶಾಸಕರನ್ನು ಗೆಲ್ಲಲು ಹೊರಟಿದ್ದಾರೆ. ಇಂತಹ ದೂರುಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಮೌಲ್ಯ ಕಳೆದುಕೊಂಡ ರಾಜಕೀಯಕ್ಕೆ ಸೇನಾ ಅವಕಾಶ ನೀಡುವುದಿಲ್ಲ' ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
'ಹಿಂದಿನ ಸರ್ಕಾರವು ಹಣದ ಪ್ರಭಾವದಿಂದ ಹೊಸ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿದೆ. ಆದರೆ ರೈತರು ಸೇನಾದ ಮುಖ್ಯಮಂತ್ರಿಯನ್ನು ಬಯಸಿರುವುದರಿಂದ ರೈತರಿಗೆ ಯಾರೂ ಸಹಾಯ ಮಾಡುತ್ತಿಲ್ಲ' ಎಂದು ಆರೋಪಿಸಲಾಗಿದೆ.
ಪ್ರತಿಷ್ಠೆ ಹಾಳುಗೆಡವಲು ಬಿಡೊಲ್ಲ
'ಶುಭ ಸುದ್ದಿಯನ್ನು ಶೀಘ್ರದಲ್ಲಿಯೇ ನಿರೀಕ್ಷಿಸಲಾಗಿದೆ' ಎಂಬ ಬಿಜೆಪಿ ಶಾಸಕ ಸುಧೀರ್ ಮುಂಗಂಟಿವರ್ ಹೇಳಿಕೆಗೆ ಕಿಡಿಕಾರಿರುವ ಶಿವಸೇನಾ, 'ಸುಧೀರ್ ಮುಂಗಂಟಿವರ್ ಶುಭ ಸುದ್ದಿಯ ಬಗ್ಗೆ ಮಾತನಾಡಿದ್ದಾರೆ ಆದರೆ ಸಂಖ್ಯೆಯ ಬಗ್ಗೆ ಅಲ್ಲ. ಮಹಾರಾಷ್ಟ್ರದ ಪ್ರತಿಷ್ಠೆಯನ್ನು ಹಾಳುಮಾಡುವುದರ ಬಗ್ಗೆ ಯಾರೂ ಆಲೋಚನೆ ಮಾಡಬಾರದು. ರಾಜ್ಯದ ಸಮಗ್ರತೆಯನ್ನು ಕಾಪಾಡುವ ಹೋರಾಟಕ್ಕೆ ಸೇನಾ ಖಡ್ಗದೊಂದಿಗೆ ಸಿದ್ಧವಿದೆ' ಎಂದು ಹೇಳಿದೆ.
ಸರ್ಕಾರ ರಚನೆಗೆ ನೈತಿಕತೆ ಇದೆಯೇ?
'ಶಿವಸೇನಾವು ಬಿಜೆಪಿಯ ಮಿತ್ರ ಪಕ್ಷ ಹಾಗೂ ಎನ್ಡಿಎ ಮಹಾಮೈತ್ರಿಕೂಟದ ಭಾಗ. ತನ್ನ ಶಾಸಕರನ್ನು ಬಿಜೆಪಿ ಸೆಳೆದುಕೊಳ್ಳುತ್ತಿದೆ ಎಂದು ಅದರಲ್ಲಿ ಭಯ ಮೂಡಿದ್ದರೆ, ಬಿಜೆಪಿ ನೈತಿಕವಾಗಿ ಎಷ್ಟು ಭ್ರಷ್ಟವಾಗಿದೆ ಎಂಬುದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಹಾಗೆಯೇ ನಾವು ಅವರಿಂದ ಮಹಾರಾಷ್ಟ್ರವನ್ನು ಏಕೆ ರಕ್ಷಿಸಬೇಕು ಎಂಬುದನ್ನು ತಿಳಿಯಬೇಕು. ಮಹಾಮೈತ್ರಿಕೂಟಕ್ಕೆ ಈಗ ಸರ್ಕಾರ ರಚಿಸಲು ನೈತಿಕ ಹಕ್ಕು ಇದೆಯೇ?' ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಪ್ರಶ್ನಿಸಿದ್ದಾರೆ.
ರೆಸಾರ್ಟ್ಗೆ ಹೋಗುತ್ತಿಲ್ಲ
ತನ್ನ ಶಾಸಕರನ್ನು ಬಿಜೆಪಿಯಿಂದ ಕಾಪಾಡಲು ಶಿವಸೇನಾ ರೆಸಾರ್ಟ್ಗೆ ಕರೆದೊಯ್ಯಲಿದೆ ಎಂಬ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ಸೇನಾ ಮುಖಂಡ ಸಂಜಯ್ ರಾವತ್, ನಾವು ಈ ರೀತಿ ಮಾಡುವ ಅಗತ್ಯವಿಲ್ಲ. ಏಕೆಂದರೆ ನಮ್ಮ ಶಾಸಕರು ತಮ್ಮ ನಿರ್ಧಾರದ ಬಗ್ಗೆ ಅಚಲವಾಗಿದ್ದಾರೆ ಹಾಗೂ ಪಕ್ಷಕ್ಕೆ ಬದ್ಧರಾಗಿದ್ದಾರೆ. ಈ ರೀತಿಯ ಗಾಳಿಸುದ್ದಿಗಳನ್ನು ಹರಡುವವರು ತಮ್ಮ ಶಾಸಕರ ಬಗ್ಗೆ ಮೊದಲು ಚಿಂತಿಸಲಿ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರ ಭೇಟಿಯಾಗಲಿರುವ ಬಿಜೆಪಿ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಆಡಳಿತಾರೂಢ ಬಿಜೆಪಿಯ ನಿಯೋಗವೊಂದು ಗುರುವಾರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಂದ ಅನುಮೋದನೆಗೊಂಡಿರುವ ಸಂದೇಶವನ್ನು ಅದು ತಲುಪಿಸಲಿದೆ ಎಂದು ಬಿಜೆಪಿ ಹಿರಿಯ ಮುಖಂಡರು ತಿಳಿಸಿದ್ದಾರೆ.
ಸ್ಥಿರ ಸರ್ಕಾರ ಬೇಕು
ನಾವು ಸ್ಥಿರ ಮತ್ತು ಸುಭದ್ರ ಸರ್ಕಾರವನ್ನು ನಡೆಸಲು ಆಶಿಸಿದ್ದೇವೆ. ಶಿವಸೇನಾ ಜತೆ ಸೇರಿ ಸರ್ಕಾರ ರಚಿಸಲು ನಾವು ಬಯಸಿದ್ದೇವೆ. ದೇವೇಂದ್ರ ಫಡಣವೀಸ್ ಅವರೂ ಶಿವಸೈನಿಕ ಎಂಬುದನ್ನು ಉದ್ಧವ್ ಜಿ ಅವರೇ ಸ್ವತಃ ಈ ಮೊದಲು ಹೇಳಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಸುಧೀರ್ ಮುಂಗಂಟಿವರ್ ಹೇಳಿದ್ದಾರೆ.