ಮಹಾರಾಷ್ಟ್ರದಲ್ಲಿ ಕೈಕೊಟ್ಟ ಎನ್ಸಿಪಿ, ಶಿವಸೇನಾ ಕಕ್ಕಾಬಿಕ್ಕಿ
ಮುಂಬೈ, ನವೆಂಬರ್ 18: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಮತ್ತೊಂದು ಹಂತ ತಲುಪಿದೆ. ಶಿವಸೇನಾ ಜತೆ ಕೈಜೋಡಿಸಿ ಸರ್ಕಾರ ರಚಿಸಲು ಆಸಕ್ತಿ ತೋರಿಸಿದ್ದ ಶರದ್ ಪವಾರ್ ನೇತೃತ್ವದ ಎನ್ಸಿಪಿ, ತನ್ನ ಮಿತ್ರಪಕ್ಷ ಕಾಂಗ್ರೆಸ್ ಮನವೊಲಿಸಿ ತ್ರಿಪಕ್ಷ ಮೈತ್ರಿ ಸರ್ಕಾರ ಸ್ಥಾಪನೆಗೆ ಮುಂದಾಗಿತ್ತು. ಆದರೆ ಎನ್ಸಿಪಿ ಇದ್ದಕ್ಕಿದ್ದಂತೆ ಯೂ-ಟರ್ನ್ ತೆಗೆದುಕೊಂಡಿದೆ.
ಶಿವಸೇನಾ-ಎನ್ಸಿಪಿ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ನಡೆಯಲು ಹೇಗೆ ಸಾಧ್ಯ ಎನ್ನುವ ಮೂಲಕ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾಕ್ಕೆ ಆಘಾತ ನೀಡಿದ್ದಾರೆ. ಇದರಿಂದ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಸರ್ಕಾರ ರಚಿಸುವ ಆಸೆಯೊಂದಿಗೆ ತನ್ನ ಕಟು ವೈರಿ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಕೈಜೋಡಿಸಲು ಮುಂದಾಗಿದ್ದ ಶಿವಸೇನಾ ಕಂಗಾಲಾಗಿದೆ.
ಮಧ್ಯಂತರ ಚುನಾವಣೆ ಇಲ್ಲ: ಸ್ಥಿರ ಸರ್ಕಾರದ ಭರವಸೆ ನೀಡಿದ ಪವಾರ್
ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಯ ಕುರಿತು ಮೂರೂ ಪಕ್ಷಗಳ ಮುಖಂಡರು ಅನೇಕ ಹೇಳಿಕೆಗಳನ್ನು ನೀಡಿದ್ದರು. ಜತೆಗೆ ಪತ್ರಿಕಾಗೋಷ್ಠಿಗಳನ್ನು ನಡೆಸಿ ಸರ್ಕಾರ ರಚನೆಗೆ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದ್ದರು. ಆದರೆ ಸೋಮವಾರ ಸಂಸತ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಯ ಬಳಿಕ ಶರದ್ ಪವಾರ್ ವರಸೆ ಬದಲಾಗಿದೆ.
ಮೈತ್ರಿ ಹೇಗೆ ಸಾಧ್ಯ?
ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಶರದ್ ಪವಾರ್, ಬಿಜೆಪಿ ಮತ್ತು ಶಿವಸೇನಾ ನಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದವು. ಈಗ ಕಾಂಗ್ರೆಸ್-ಎನ್ಸಿಪಿ ಮತ್ತು ಶಿವಸೇನಾ ನಡುವೆ ಮೈತ್ರಿ ನಡೆಯಲು ಹೇಗೆ ಸಾಧ್ಯ? ಎಂದು ಹೇಳಿದರು. ಎನ್ಸಿಪಿ-ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುತ್ತೇವೆ ಎಂದು ಶಿವಸೇನಾ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ. ಹಾಗೆಯೇ ತ್ರಿಪಕ್ಷೀಯ ಸರ್ಕಾರ ರಚಿಸುವ ನಡೆಸಿದ ತಮ್ಮ ಪ್ರಯತ್ನಗಳ ಕುರಿತು ಸಹ ಮಾತಾಡಲಿಲ್ಲ.
ಅವರ ದಾರಿ ನೋಡಿಕೊಳ್ಳಲಿ
ಬಿಜೆಪಿ- ಶಿವಸೇನಾ ಒಟ್ಟಾಗಿ ಸ್ಪರ್ಧಿಸಿದ್ದವು ಮತ್ತು ನಾವು (ಎನ್ಸಿಪಿ) ಹಾಗೂ ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಿದ್ದೆವು. ಅವರು ತಮ್ಮದೇ ದಾರಿ ಆಯ್ಕೆ ಮಾಡಿಕೊಳ್ಳಬೇಕಿದೆ ಮತ್ತು ನಾವು ನಮ್ಮ ರಾಜಕೀಯ ಮಾಡುತ್ತೇವೆ ಎಂದು ಪವಾರ್ ತಿಳಿಸಿದರು. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ತರುವ ಪ್ರಯತ್ನಗಳ ನಡುವೆ ಶರದ್ ಪವಾರ್ ರೀತಿಯ ಹೇಳಿಕೆ ನೀಡಿರುವುದು ಮಹಾರಾಷ್ಟ್ರದ ಸರ್ಕಾರ ರಚನೆಯ ಕಸರತ್ತು ಮತ್ತಷ್ಟು ಜಟಿಲವಾಗುವ ಸೂಚನೆ ನೀಡಿದೆ.
ಸಾಮ್ನಾದಲ್ಲಿ ಹಳೇ ದೋಸ್ತಿ ಬಿಜೆಪಿ ವಿರುದ್ಧ ಶಿವಸೇನೆ ಗಂಭೀರ ಆರೋಪ
ಸೋನಿಯಾ ಭೇಟಿ ಬಳಿಕ ಬದಲಾದ ಮಾತು
ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕುರಿತು ಮೂರೂ ಪಕ್ಷಗಳು ಕುಳಿತು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದವು. ಆ ಕುರಿತು ಶರದ್ ಪವಾರ್ ಅವರು ಸೋನಿಯಾ ಗಾಂಧಿಯೊಂದಿಗೆ ಮಾತನಾಡಿ ಅಂತಿಮ ಪ್ರಕ್ರಿಯೆ ನಡೆಸಲು ರಾಜಧಾನಿ ದೆಹಲಿಗೆ ತೆರಳಿದ್ದರು ಎನ್ನಲಾಗಿತ್ತು. ಆದರೆ ಸೋನಿಯಾ ಭೇಟಿಯ ಬಳಿಕ ಶರದ್ ಪವಾರ್ ಇದುವರೆಗಿನ ನಡೆಗೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.
ಬಿಜೆಪಿಗೆ ವಾಪಸ್ ಹೋಗಿ-ಅಠವಳೆ ಸಲಹೆ
ಕಾಂಗ್ರೆಸ್ ಮತ್ತು ಎನ್ಸಿಪಿ ಜತೆ ಸೇರಿ ಸರ್ಕಾರ ರಚಿಸಲು ಶಿವಸೇನಾಗೆ ಸಾಧ್ಯವಾಗುವುದಿಲ್ಲ. ಶಿವಸೇನಾ ತನ್ನ ಬಿಜೆಪಿಯ ನಂಟಿಗೆ ಮರಳುವುದು ಉತ್ತಮ. ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಜತೆ ಸೇರಿ ಆದಷ್ಟು ಬೇಗನೆ ಸರ್ಕಾರ ರಚಿಸುವುದು ಒಳಿತು ಎಂದು ಎನ್ಡಿಎ ಸರ್ಕಾರದ ಭಾಗವಾಗಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮದಾಸ್ ಅಠವಳೆ ಶಿವಸೇನಾಕ್ಕೆ ಸಲಹೆ ನೀಡಿದ್ದಾರೆ.