ಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಗೆ ಹಾದಿ ಸುಗಮ
ಮುಂಬೈ, ನವೆಂಬರ್ 14: ಕಳೆದ 48 ಗಂಟೆಗಳಲ್ಲಿ ಹಲವು ಬಾರಿ ಸಭೆ ಸೇರಿದ್ದ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಕರಡನ್ನು ಅಂತಿಮಗೊಳಿಸಿವೆ. ಇದರಿಂದ ಮಹಾರಾಷ್ಟ್ರದಲ್ಲಿ ಈ ಮೂರೂ ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಯತ್ನದ ಹಾದಿ ಸುಗಮಗೊಂಡಂತಾಗಿದೆ.
ರೈತರ ಸಾಲ ಮನ್ನಾ, ಬೆಳೆ ವಿಮೆ ಯೋಜನೆಯ ಪರಾಮರ್ಶೆ, ನಿರುದ್ಯೋಗ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಸ್ಮಾರಕಗಳ ನಿರ್ಮಾಣ ಸೇರಿದಂತೆ ಅನೇಕ ಅಂಶಗಳನ್ನು ಸಿಎಂಪಿ ಒಳಗೊಂಡಿದೆ.
ಮಹಾರಾಷ್ಟ್ರ ಬಿಕ್ಕಟ್ಟಿನ ಕುರಿತು ಅಮಿತ್ ಶಾ ಮಹತ್ವದ ಹೇಳಿಕೆ
ಈ ಕರಡನ್ನು ಅಂತಿಮ ಅನುಮತಿಗಾಗಿ ಎಲ್ಲ ಮೂರೂ ಪಕ್ಷಗಳ ಅಧ್ಯಕ್ಷರಿಗೆ ರವಾನಿಸಲಾಗುತ್ತದೆ. ಒಮ್ಮೆ ಅದು ಒಪ್ಪಿತವಾದ ಬಳಿಕ, ಈ ಮೂರು ಪಕ್ಷಗಳು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಮುಂದೆ ತೆರಳಿ ಸರ್ಕಾರ ರಚನೆಗೆ ತಮ್ಮ ಬಳಿ ಅಗತ್ಯ ಸದಸ್ಯರ ಸಂಖ್ಯಾಬಲ ಇದೆ ಎಂದು ಹಕ್ಕು ಮಂಡಿಸುವ ಸಾಧ್ಯತೆ ಇದೆ.
ಮಾತು ತಪ್ಪುವುದು ನೈಜ ಹಿಂದುತ್ವವಲ್ಲ: ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ
ಮಹಾರಾಷ್ಟ್ರದಲ್ಲಿ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾಗಿ 19 ದಿನಗಳಾದರೂ ಸರ್ಕಾರ ರಚಿಸುವಲ್ಲಿ ಯಾವುದೇ ಪಕ್ಷ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಪಾಲ ಕೋಶ್ಯಾರಿ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು.