ಕೇಂದ್ರದಿಂದ ಒತ್ತಡವಿತ್ತೇ?: ಸೆಲೆಬ್ರಿಟಿಗಳ ಟ್ವೀಟ್ ವಿರುದ್ಧ ತನಿಖೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ
ನವದೆಹಲಿ, ಫೆಬ್ರವರಿ 8: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್ ಅವರಂತಹ ಸೆಲೆಬ್ರಿಟಿಗಳ ಮೇಲೆ ಕೇಂದ್ರದಿಂದ ಒತ್ತಡವಿತ್ತೇ ಎಂಬುದನ್ನು ತಿಳಿದುಕೊಳ್ಳಲು ತನಿಖೆ ಆರಂಭಿಸಲು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ'ದ ಪುರಸ್ಕೃತರಾಗಿದ್ದಾರೆ. ಇಂತಹ ಸೆಲೆಬ್ರಿಟಿಗಳು ಕೃಷಿ ಕಾಯ್ದೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸಿರುವುದರ ಹಿಂದೆ ಒತ್ತಡದ ಕಾರಣಗಳು ಇರಬಹುದು ಎಂಬ ಸಂದೇಹ ವ್ಯಕ್ತವಾಗಿತ್ತು.
ಕೇಂದ್ರವೇ ಸಚಿನ್ ಅವರನ್ನು ಕಣಕ್ಕಿಳಿಸಿದೆ; ಆರ್ಜೆಡಿ ಮುಖಂಡನ ಆರೋಪ
'ಕೃಷಿ ಕಾಯ್ದೆಗಳ ಕುರಿತಂತೆ ಸೆಲೆಬ್ರಿಟಿಗಳಿಂದ ಒಂದೇ ಸಮಯಕ್ಕೆ ಒಂದೇ ರೀತಿಯ ಪೋಸ್ಟ್ಗಳು ಟ್ವಿಟ್ಟರ್ನಲ್ಲಿ ಪ್ರಕಟವಾಗಿರುವುದು ತಿಳಿದುಬಂದಿದೆ. ಹೀಗಾಗಿ ಅದು ಏಕೆ ನಡೆದಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ತನಿಖೆ ನಡೆಸಲಾಗುವುದು' ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದಾರೆ. ಮುಂದೆ ಓದಿ.
ಪಾಪ್ ಸಿಂಗರ್ ರಿಹಾನಾ ವಿರುದ್ಧ ಕೇಂದ್ರ ಸಚಿವ ಸದಾನಂದಗೌಡ ಏನೆಂದರು?
ಕಾಂಗ್ರೆಸ್ ಒತ್ತಾಯ
ರೈತರ ಪ್ರತಿಭಟನೆಯನ್ನು ಸರ್ಕಾರ ನಿಭಾಯಿಸುತ್ತಿರುವುದನ್ನು ಟೀಕಿಸಿ ಜಾಗತಿಕ ಮಟ್ಟದಲ್ಲಿ ಸೆಲೆಬ್ರಿಟಿಗಳು ಸರಣಿ ಟ್ವೀಟ್ ಮಾಡಿದ ಬೆನ್ನಲ್ಲೇ ಅದಕ್ಕೆ ತಿರುಗೇಟು ನೀಡುವಂತೆ ಭಾರತದ ಸೆಲೆಬ್ರಿಟಿಗಳು ಟ್ವೀಟ್ಗಳನ್ನು ಮಾಡಿದ್ದರು. ಇದರ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.
ಹ್ಯಾಶ್ಟ್ಯಾಗ್ ಟ್ರೆಂಡ್
ಖ್ಯಾತ ಪಾಪ್ ಗಾಯಕ ರಿಹಾನ್ನಾ ಮತ್ತು ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸೇರಿದಂತೆ ಅನೇಕರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಅದರ ವಿರುದ್ಧ ಸಿಡಿದೆದ್ದಿದ್ದ ಸಿನಿಮಾ, ಕ್ರಿಕೆಟ್, ರಾಜಕಾರಣ ಹಾಗೂ ಇತರೆ ವಿಭಾಗಗಳ ತಾರೆಯರು 'ಇಂಡಿಯಾ ಟುಗೆದರ್', 'ಇಂಡಿಯಾ ಅಗೈನ್ಸ್ಟ್ ಪ್ರೊಪಗಂಡಾ' ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರ್ಕಾರದ ಪರ ಧ್ವನಿ ಎತ್ತಿದ್ದು, ವಿವಾದ ಸೃಷ್ಟಿಸಿತ್ತು.
ಎಂಎಸ್ಪಿ ಇತ್ತು, ಇದೆ, ಮುಂದೆ ಇದ್ದೇ ಇರುತ್ತದೆ; ಮೋದಿ
ಒಗ್ಗಟ್ಟಾಗಿ ಇರೋಣ ಎಂದ ಸೆಲೆಬ್ರಿಟಿಗಳು
'ಭಾರತದ ಸಾರ್ವಭೌಮತೆಯೊಂದಿಗೆ ರಾಜಿ ಮಾಡಲಾಗದು. ಹೊರಗಿನ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಾ ಪಾಲ್ಗೊಳ್ಳಲು ಸಾಧ್ಯವಿಲ್ಲ. ಭಾರತೀಯರಿಗೆ ಭಾರತದ ಬಗ್ಗೆ ತಿಳಿದಿದೆ. ಭಾರತಕ್ಕೆ ಯಾವುದು ಒಳಿತು ಎಂದು ಅವರೇ ನಿರ್ಧರಿಸಬೇಕು. ದೇಶವಾಗಿ ಎಲ್ಲರೂ ಒಗ್ಗಟ್ಟಾಗಿ ಇರೋಣ' ಎಂದು ಬಹುತೇಕ ಸೆಲೆಬ್ರಿಟಿಗಳು ಒಂದೇ ರೀತಿಯ ಪದಬಳಕೆಯ ಟ್ವೀಟ್ಗಳನ್ನು ಮಾಡಿದ್ದರು.
ಒಂದೇ ಬಗೆಯ ಪದ ಬಳಕೆ
'ಈ ಸೆಲೆಬ್ರಿಟಿಗಳು ಮಾಡಿದ್ದ ಟ್ವೀಟ್ಗಳಲ್ಲಿ 'Amicable' ಎಂಬ ಪದ ಸಾಮಾನ್ಯವಾಗಿತ್ತು. ಅಕ್ಷಯ್ ಕುಮಾರ್ ಮತ್ತು ಸೈನಾ ನೆಹ್ವಾಲ್ ಒಂದೇ ರೀತಿಯಲ್ಲಿ ಟ್ವೀಟ್ ಮಾಡಿದ್ದರು. ನಟ ಸುನಿಲ್ ಶೆಟ್ಟಿ ಬಿಜೆಪಿ ನಾಯಕರೊಬ್ಬರನ್ನು ಟ್ಯಾಗ್ ಮಾಡಿದ್ದರು. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಆದರೆ ಈ ಟ್ವೀಟ್ಗಳನ್ನು ಮಾಡುವಂತೆ ಸರ್ಕಾರದಿಂದ ಒತ್ತಡ ಹೇರಲಾಗಿತ್ತೇ ಎಂಬ ಬಗ್ಗೆ ಸರ್ಕಾರ ತನಿಖೆ ನಡೆಸುವುದನ್ನು ಬಯಸಿದ್ದೇವೆ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್ ಹೇಳಿದ್ದರು.