ರೈತ ಹೋರಾಟಕ್ಕೆ ಕೊರೊನಾ ಕಾಟ: ಮಹಾರಾಷ್ಟ್ರದಲ್ಲಿ ಕಿಸಾನ್ ಮಹಾಪಂಚಾಯತ್ ಗೆ ತಡೆ!?
ಮುಂಬೈ, ಫೆಬ್ರವರಿ.19: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರು ನಡೆಸಲು ತೀರ್ಮಾನಿಸಿದ ಕಿಸಾನ್ ಮಹಾಪಂಚಾಯತ್ ಗೆ ಜಿಲ್ಲಾಡಳಿತ ಅನುಮತಿ ನೀಡಲು ನಿರಾಕರಿಸಿದೆ. ಇದರ ಮಧ್ಯೆ ಕಿಸಾನ್ ಮಹಾ ಪಂಚಾಯತ್ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಫೆಬ್ರವರಿ.20ರಂದು ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ "ಕಿಸಾನ್ ಮಹಾ ಪಂಚಾಯತ್" ನಡೆಸುವುದಕ್ಕೆ ನಿರ್ಧರಿಸಿದೆ.
ದೇಶಾದ್ಯಂತ ರೈತ ಕಹಳೆ: "ಜೀವನ ಕಿತ್ತುಕೊಂಡವರಿಗೆ ಮತ ಹಾಕಬೇಕೇ"?
ಮಹಾರಾಷ್ಟ್ರದಲ್ಲಿ ರೈತರ ಹೋರಾಟಕ್ಕೆ ಕೊರೊನಾವೈರಸ್ ಸೋಂಕು ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ರಾಜ್ಯದ ಅಮರಾವತಿ, ಯವತ್ಮಲ್ ಮತ್ತು ಅಕೋಲಾ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆ ಕೊವಿಡ್-19 ಅಪಾಯದಿಂದ ಕಿಸಾನ್ ಮಹಾ ಪಂಚಾಯತ್ ನಡೆಸುವುದಕ್ಕೆ ಅನುಮತಿ ನಿರಾಕರಿಸಲಾಗಿದೆ. ಮಹಾರಾಷ್ಟ್ರದಲ್ಲಿನ ಕೊವಿಡ್-19 ಸ್ಥಿತಿಗತಿ ಮತ್ತು ಕಿಸಾನ್ ಮಹಾಪಂಚಾಯತ್ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಸಂಯುಕ್ತ ಕಿಸಾನ್ ಮೊರ್ಚಾದಿಂದ ಹೊಸ ಅರ್ಜಿ
ಕೃಷಿ ಕಾಯ್ದೆಗಳ ವಿರುದ್ಧದ ಕಿಸಾನ್ ಮಹಾಪಂಚಾಯತ್ ನಡೆಸುವುದಕ್ಕೆ ಯಾವತ್ಮಲ್ ಜಿಲ್ಲಾಡಳಿತವು ನಿರಾಕರಿಸಿದೆ. ಈ ಹಿನ್ನೆಲೆ ಸಾರ್ವಜನಿಕ ಸಭೆ ನಡೆಸುವುದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಶನಿವಾರ ಯಾವತ್ಮಲ್ ಮಹಾ ಪಂಚಾಯತ್ ನ್ನು ನಡೆಸಿಯೇ ತೀರುತ್ತೇವೆ ಎಂದು ಮಹಾರಾಷ್ಟ್ರದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಸಂಯೋಜಕ ಸಂದೀಪ್ ಗಿಡ್ಡೆ ತಿಳಿಸಿದ್ದಾರೆ.
ಯಾವತ್ಮಾಲ್ ನಲ್ಲಿ ರೈತರನ್ನು ತಡೆದರೆ ಧರಣಿಯ ಎಚ್ಚರಿಕೆ
ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ನಡೆಯಲಿರುವ ಕಿಸಾನ್ ಮಹಾ ಪಂಚಾಯತ್ ನ್ನು ಉದ್ದೇಶಿಸಿ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈತ್ ಸೇರಿದಂತೆ ಹಲವು ರೈತ ಮುಖಂಡರು ಭಾಷಣ ಮಾಡಲಿದ್ದಾರೆ. ಈ ರೈತರನ್ನು ತಡೆದಲ್ಲಿ "ಥಿಯ್ಯಾ ಆಂದೋಲನ" (ಧರಣಿ) ನಡೆಸುವುದಾಗಿ ಸಂಯೋಜಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹೆಚ್ಚಾದ ಕೊರೊನಾವೈರಸ್ ಹಾವಳಿ
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲೇ 5427 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 20,81,520ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ 38 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 51669ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಮುಂಬೈನಲ್ಲಿ ಹೊಸ ಕೊವಿಡ್-19 ನಿಯಮ ಮತ್ತು ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತವು ಶಿಸ್ತಕ್ರಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕ ಸಭೆ ಸಮಾರಂಭ ಮತ್ತು ಶಾಲೆಗಳನ್ನು 10 ದಿನಗಳವರೆಗೂ ಬಂದ್ ಮಾಡುವಂತೆ ಜಿಲ್ಲಾಡಳಿತವು ಆದೇಶಿಸಿದೆ.
ರಾಜ್ಯದ ಮೂರು ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್ ಡೌನ್
ಮಹಾರಾಷ್ಟ್ರದ ಅಮರಾವತಿ, ಯವತ್ಮಲ್ ಮತ್ತು ಅಕೋಲಾ ಜಿಲ್ಲೆಗಳಲ್ಲಿ ವಾರಾಂತ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಫೆಬ್ರವರಿ.20ರ ರಾತ್ರಿ 8 ಗಂಟೆಯಿಂದ ಫೆಬ್ರವರಿ.22ರ ಬೆಳಗ್ಗೆ 7 ಗಂಟೆವರೆಗೂ ನಿಷೇಧಾಾಜ್ಞೆ ಜಾರಿಯಲ್ಲಿರುತ್ತದೆ. ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಎಲ್ಲ ಮಾರುಕಟ್ಟೆಗಳು ಬಂದ್ ಆಗಲಿವೆ ಎಂದು ಅಮರಾವತಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ದಿಲೀಪ್ ರಾನ್ಮೇಲೆ ತಿಳಿಸಿದ್ದಾರೆ.
ಹೊಸ ನಿಯಮ ಜಾರಿಗೊಳಿಸಿದ ಮುಂಬೈ ಮಹಾನಗರ ಪಾಲಿಕೆ
ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡದಿದ್ದರೆ ದಂಡ ವಿಧಿಸುವಂತೆ ಸೂಚಿಸಲಾಗಿದೆ. ಹೊಸ ಮಾರ್ಗಸೂಚಿ ಮತ್ತು ನಿಯಮಗಳಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.
ಮುಂಬೈ ಮಹಾನಗರ ಪಾಲಿಕೆಯ ಹೊಸ ಮಾರ್ಗಸೂಚಿ:
- ಒಂದು ಕಟ್ಟಡದಲ್ಲಿ 5ಕ್ಕಿಂತ ಹೆಚ್ಚು ಕೊವಿಡ್-19 ಸೋಂಕಿತರು ಕಂಡು ಬಂದಲ್ಲಿ ಕಟ್ಟಡವನ್ನು ಸೀಲ್ ಮಾಡುವುದು
- ಗೃಹ ದಿಗ್ಬಂಧನದಲ್ಲಿ ಇರುವ ಕೊರೊನಾವೈರಸ್ ಸೋಂಕಿತರ ಕೈಗಳಿಗೆ ಸ್ಟ್ಯಾಂಪ್ ಹಚ್ಚುವುದು
- ಸ್ಥಳೀಯ ರೈಲುಗಳಲ್ಲಿ ಮಾಸ್ಕ್ಲ ಧರಿಸದೇ ಸಂಚರಿಸುವವರ ಮೇಲೆ ನಿಗಾ ವಹಿಸಲು 300 ಮಾರ್ಷಲ್ ಗಳನ್ನು ನೇಮಿಸಿಕೊಳ್ಳುವುದು
- ಮುಂಬೈನಲ್ಲಿ ನಿಯಮ ಉಲ್ಲಂಘಿಸುವವರ ಮೇಲೆ ಲಕ್ಷ್ಯ ವಹಿಸಲು ಹೆಚ್ಚುವರಿ ಮಾರ್ಷಲ್ ನೇಮಕ
- ಕೊವಿಡ್-19 ನಿಯಮ ಉಲ್ಲಂಘಿಸುವ ಮದುವೆ ಸಭಾ ಭವನ, ಕ್ಲಬ್, ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡುವುದು
- ಬ್ರೆಜಿಲ್ ನಿಂದ ಆಗಮಿಸಿದ ಪ್ರಯಾಣಿಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರಿಸುವುದು
- ಹೆಚ್ಚು ಹೆಚ್ಚು ಸೋಂಕಿತರು ಕಂಡು ಬರುವ ಪ್ರದೇಶದಲ್ಲಿ ಕೊರೊನಾವೈರಸ್ ತಪಾಸಣೆಯನ್ನು ಹೆಚ್ಚಿಸುವುದು