ಮಹಾರಾಷ್ಟ್ರ ಮಳೆ, ಪ್ರವಾಹ: ಮುಂಬೈನಲ್ಲಿ ಮಂಗಳವಾರದವರೆಗೆ ಆರೆಂಜ್ ಅಲರ್ಟ್
ಮುಂಬೈ ಜುಲೈ 9: ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ಮುಂಬೈನ ನಗರ ಮತ್ತು ಉಪನಗರಗಳಲ್ಲಿ ಸಾಧಾರಣ ಮಳೆಯ ಮನ್ಸೂಚನೆ ನೀಡಿದೆ. ಆದರೆ ರಾಜಧಾನಿಯ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ (64.5 ರಿಂದ 115.5 ಮಿಮೀ) ಅತಿ ಹೆಚ್ಚು (115.6 ರಿಂದ 204.4 ಮಿಮೀ) ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಕರಾವಳಿ ನಗರದಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಸಾಂದರ್ಭಿಕ ಗಾಳಿ ಬೀಸುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಹೀಗಾಗಿ ಮುಂದಿನ 24 ಗಂಟೆಗಳವರೆಗೆ ಮುಂಬೈನಲ್ಲಿ IMD ರೆಡ್ ಅಲರ್ಟ್ ಘೋಷಿಸಿದೆ.
ಧಾರಾಕಾರ ಮಾನ್ಸೂನ್ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದೆ. ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಬೈ ಪ್ರಾದೇಶಿಕ ಹವಾಮಾನ ಕೇಂದ್ರ ಬುಧವಾರ ಮುಂಬೈ, ಥಾಣೆ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಮುಂದಿನ ಐದು ದಿನಗಳವರೆಗೆ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿದೆ. ಮುಂಬೈ ಮತ್ತು ಥಾಣೆಗೆ ಜುಲೈ 10 ರವರೆಗೆ ಆರೆಂಜ್ ಅಲರ್ಟ್ ಕೂಡ ಘೋಷಿಸಿದೆ. ಗುರುವಾರ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದಂತೆ, ಅಂಧೇರಿ ಸಬ್ವೇ ಜಲಾವೃತವಾಗಿದೆ.
ಭೂಕುಸಿತದ ವರದಿಗಳು
ಬುಧವಾರವೂ ಮಹಾನಗರದ ಹಲವೆಡೆ ತೀವ್ರ ಜಲಾವೃತವಾಗಿತ್ತು. ಮಂಗಳವಾರ ದಾದರ್ ಮತ್ತು ಸಿಯಾನ್ನಲ್ಲಿ ಜಲಾವೃತವಾಗಿದ್ದು, ಪೊವೈ ಸರೋವರವು ತುಂಬಿ ಹರಿಯುತ್ತಿದೆ. ರಾಜಧಾನಿ ನಗರದಲ್ಲಿ ಸೋಮವಾರದಿಂದ ಭಾರಿ ಮಳೆಯಾಗುತ್ತಿದ್ದು, ಪ್ರದೇಶಗಳು ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಇದರಿಂದ ಸಂಚಾರಕ್ಕೂ ತೊಂದರೆಯಾಗಿದೆ. ಮಂಗಳವಾರ ಮುಂಬೈನ ಘಾಟ್ಕೋಪರ್ ನಗರದಲ್ಲಿ ಭಾರಿ ಮಳೆಯ ನಡುವೆ ಭೂಕುಸಿತ ಸಂಭವಿಸಿ, ಮನೆ ನೆಲಸಮವಾಗಿದೆ. ಬುಧವಾರ, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪಗಢ ಕೋಟೆ ಬಳಿ ಮತ್ತೊಂದು ಭೂಕುಸಿತ ವರದಿಯಾಗಿದೆ.
17 ಎನ್ಡಿಆರ್ಎಫ್ ತಂಡಗಳ ನಿಯೋಜನೆ
ರಾಜ್ಯದ ಹಲವು ನದಿಗಳು ಎಚ್ಚರಿಕೆಯ ಮಟ್ಟ ತಲುಪಿವೆ. ಕುಂಡಲಿಕಾ ನದಿಯು ಎಚ್ಚರಿಕೆಯ ಮಟ್ಟವನ್ನು ದಾಟಿದ್ದು, ಅಂಬಾ, ಸಾವಿತ್ರಿ, ಪಾತಾಳಗಂಗಾ, ಉಲ್ಲಾಸ್ ಮತ್ತು ಗರ್ಹಿ ನದಿಗಳ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ದುರ್ಬಲ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮಹಾರಾಷ್ಟ್ರದ ಪ್ರದೇಶಗಳಲ್ಲಿ 17 ತಂಡಗಳನ್ನು ನಿಯೋಜಿಸಿದ್ದು, ಭಾರಿ ಮಳೆ ಅವಘಡಗಳನ್ನು ತಪ್ಪಿಸಲು ತಂಡ ಕಟ್ಟೆಚ್ಚರ ವಹಿಸಿದೆ.
ಮಳೆ ಪ್ರವಾಹಕ್ಕೆ ಇಬ್ಬರು ಬಲಿ
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಭಾರಿ ಮಳೆಯಿಂದಾಗಿ ಆಸನ ನದಿಯಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿಯವರೆಗೆ, ಕನಿಷ್ಠ 200 ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದ ಮರಾಠವಾಡ ಪ್ರದೇಶದಲ್ಲಿ ಮತ್ತು ಇಲ್ಲಿಂದ ಸುಮಾರು 200 ಕಿಮೀ ದೂರದಲ್ಲಿರುವ ಹಿಂಗೋಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಮಳೆ ಪ್ರವಾಹಕ್ಕೆ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.
ಪರಿಸ್ಥಿತಿ ಮೇಲ್ವಿಚಾರಣೆ
ಈಗ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗುತ್ತಿದೆಯಾದರೂ, ಆಡಳಿತವು ಈ ಗ್ರಾಮಗಳ ನಿವಾಸಿಗಳನ್ನು ಹತ್ತಿರದ ಜಿಲ್ಲಾ ಪರಿಷತ್ ಶಾಲೆಗೆ ಸ್ಥಳಾಂತರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಜಿತೇಂದ್ರ ಪಾಪಾಲ್ಕರ್ ಹೇಳಿದರು. ಇಲ್ಲಿಯವರೆಗೆ ಯಾವುದೇ ಜೀವ ಹಾನಿ ವರದಿಯಾಗಿಲ್ಲ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ, ಹಿಂಗೋಲಿ ಜಿಲ್ಲೆಯಲ್ಲಿ 230.70 ಮಿಮೀ ಮಳೆ ದಾಖಲಾಗಿದೆ. ಇದು ವಾರ್ಷಿಕ ಸರಾಸರಿ ಮಳೆಯ ಶೇಕಡಾ 26.84 ರಷ್ಟಿದೆ ಎಂದು ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.