ಮಹಾರಾಷ್ಟ್ರ ಕೊರೊನಾ 3ನೇ ಅಲೆಗೆ ಸಿದ್ಧಗೊಳ್ಳುತ್ತಿದೆ: ಆದಿತ್ಯ ಠಾಕ್ರೆ
ಮುಂಬೈ, ಏಪ್ರಿಲ್ 18: ಮಹಾರಾಷ್ಟ್ರವು ಕೊರೊನಾ ಮೂರನೇ ಅಲೆಗೆ ಸಿದ್ಧಗೊಳ್ಳುತ್ತಿದೆ ಎಂದು ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ಮೊದಲ ಹಾಗೂ ಎರಡನೇ ಅಲೆಗಿಂತ ಭಯಂಕರವಾಗಿರುವುದೇ ಅಥವಾ ಕಡಿಮೆ ಇರುವುದೇ ಎಂಬುದು ತಿಳಿದಿಲ್ಲ ಎಂದಿದ್ದಾರೆ.
ಭಾರತದಲ್ಲಿ ಎರಡೂವರೆ ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು
ಕೊರೊನಾ ಲಸಿಕೆಯು ಪ್ರಸ್ತುತ ಕೋವಿಡ್ ಪರಿಸ್ಥಿತಿಗೆ ಸಹಾಯ ಮಾಡದಿದ್ದರೂ ಭವಿಷ್ಯದಲ್ಲಿ ಖಂಡಿತವಾಗಿಯೇ ಸಹಾಯವಾಗಲಿದೆ. ನಮ್ಮಲ್ಲಿ 5 ಲಕ್ಷ ಹಾಸಿಗೆಗಳಿವೆ ಶೇ.70ರಷ್ಟು ಆಮ್ಲಜನಕ ಸರಬರಾಜು ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಶನಿವಾರ 67,123 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 419 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 60 ಸಾವಿರ ಮಂದಿ ಸಾವನ್ನಪ್ಪಿದ್ದು 37.7ಲಕ್ಷ ಪ್ರಕರಣಗಳಿವೆ.
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 2,61,500 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೆಯೇ 1501 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 15,66,394 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಆ ಮೂಲಕ ಒಟ್ಟಾರೆ ಕೋವಿಡ್ ಪರೀಕ್ಷೆಗಳ ಸಂಖ್ಯೆ 26,65,38,416ಕ್ಕೆ ಏರಿಕೆಯಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಅಂತೆಯೇ ಈ ವರೆಗೂ 12,26,22,590 ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.