ಅಧಿಕಾರಕ್ಕಾಗಿ ಕಸರತ್ತು: ರಾಜ್ಯಪಾಲರನ್ನು ಪ್ರತ್ಯೇಕ ಭೇಟಿ ಮಾಡಲಿರುವ ಬಿಜೆಪಿ, ಸೇನಾ
ಮುಂಬೈ, ಅಕ್ಟೋಬರ್ 28: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಬಿಜೆಪಿ ಹಾಗೂ ಶಿವಸೇನಾ ನಡುವಿನ ಮೈತ್ರಿ ಅಧಿಕಾರ ಸ್ಥಾಪನೆ ವಿಷಯದಲ್ಲಿ ಚರ್ಚೆ, ವಿರಸ ಮುಂದುವರೆದಿದೆ. ಈ ನಡುವೆ ರಾಜ್ಯಪಾಲರನ್ನು ಪ್ರತ್ಯೇಕವಾಗಿ ಬಿಜೆಪಿ ಹಾಗೂ ಶಿವಸೇನಾ ಮುಖಂಡರು ಸಮಯ ನಿಗದಿ ಮಾಡಿಕೊಂಡಿದ್ದಾರೆ.
ಅಚಲ್ ಪುರ್ ಶಾಸಕ, ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥ ಬಚ್ಚು ಕಾಡು ಹಾಗೂ ಮೇಲ್ ಘಾಟ್ ನ ರಾಜ್ ಕುಮಾರ್ ಪಟೇಲ್ ಅವರು ಉದ್ಧವ್ ಠಾಕ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷೇತರ ಶಾಸಕಿ ಗೀತಾ ಜೈನ್, ರಾಜೇಂದ್ರ ರಾವುತ್ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮಿತ್ರಪಕ್ಷವಾಗಿರುವ ಶಿವಸೇನಾ ಸಮಾನ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಿದೆ.
ಚುನಾವಣಾ ಪೂರ್ವ ಮೈತ್ರಿಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಶ್ವಾಸನೆ ನೀಡಿದಂತೆ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಬೇಕು. ಅಧಿಕಾರ ಅವಧಿ ಸಮನಾಗಿ ಹಂಚಿಕೆಯಾಗಬೇಕು, ಉನ್ನತ ಸ್ಥಾನಗಳು ಸಿಗಬೇಕು, 2.5 ವರ್ಷ ಬಿಜೆಪಿಯಿಂದ ಸಿಎಂ ಹಾಗೂ 2.5 ವರ್ಷ ಶಿವಸೇನಾದಿಂದ ಸಿಎಂ ಎಂದು ಶಿವಸೇನಾ ತನ್ನ ಬೇಡಿಕೆಯನ್ನು ಮುಂದಿಟ್ಟು ಪಟ್ಟು ಹಿಡಿದು ಕುಳಿತಿದೆ.
2014ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. 1995 ರಿಂದ 1999ರ ಸೇನಾ- ಬಿಜೆಪಿ ಸರ್ಕಾರದ ಮೇಲೆ ಸೇನಾದ ಬಾಳಾ ಠಾಕ್ರೆ ಹೇಗೆ ಹಿಡಿತ ಹೊಂದಿದ್ದರೋ ಅದೇ ರೀತಿ ಈ ಬಾರಿಯೂ ಹಿಡಿತ ಸಿಕ್ಕಿದೆ ಎಂದು ಘೋಷಿಸಿಕೊಂಡಿದೆ. 2014ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 122 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 105 ಸ್ಥಾನ ಗಳಿಸಿದೆ. 288 ವಿಧಾನಸಭಾ ಸ್ಥಾನಗಳುಳ್ಳ ಮಹಾರಾಷ್ಟ್ರದಲ್ಲಿ ಅಧಿಕಾರ ಸ್ಥಾಪಿಸಲು 146 ಸ್ಥಾನಗಳು ಅವಶ್ಯ. ಸೇನಾ ಕೂಡಾ 2014ರಲ್ಲಿ 63 ಸ್ಥಾನ ಗೆದ್ದಿತ್ತು. ಈ ಬಾರಿ 56 ಸ್ಥಾನ ಗೆದ್ದಿದೆ.