ಮಹಾರಾಷ್ಟ್ರ ತ್ರಿಮೈತ್ರಿ ಸರ್ಕಾರ: ಯಾವ ಪಕ್ಷಕ್ಕೆ ಯಾವ ಖಾತೆ?
ಮುಂಬೈ, ಡಿಸೆಂಬರ್ 12: ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ಸಿಪಿ, ಕಾಂಗ್ರೆಸ್ ತ್ರಿಮೈತ್ರಿ ಸರ್ಕಾರ ರಚನೆಯಾದ ವಾರಗಳ ನಂತರ ಇಂದು ಖಾತೆ ಹಂಚಿಕೆ ನಡೆದಿದೆ.
ನವೆಂಬರ್ 28 ರಂದು ಮಹಾರಾಷ್ಟ್ರ ಸಿಎಂ ಆಗಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅದೇ ದಿನ ಇನ್ನೂ ಆರು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಎಲ್ಲರಿಗೂ ಇಂದು ಖಾತೆ ಹಂಚಿಕೆ ಮಾಡಲಾಗಿದೆ.
ನಿಮ್ಮ ಸಾಲಕ್ಕೂ, ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ: 'ಮಹಾ' ಪೆಟ್ಟು!
'ಲಾಭದಾಯಕ', 'ಶಕ್ತಿವಂತ' ಖಾತೆಗಳು ಸಮನಾಗಿ ಹಂಚುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಮೂರೂ ಪಕ್ಷದವರನ್ನು ಸಮಾಧಾನಪಡಿಸಲೆಂದು ಮುತುವರ್ಜಿ ವಹಿಸಿ ಖಾತೆ ಹಂಚಿಕೆ ಮಾಡಲಾಗಿದೆ.
ಶಿವಸೇನಾಕ್ಕೆ ಗೃಹ ಸಚಿವ ಖಾತೆ ದೊರೆತಿದ್ದು, ಮಹಾರಾಷ್ಟ್ರದ ಗೃಹ ಸಚಿವರಾಗಿ ಏಕನಾಥ ಶಿಂಧೆ ಕಾರ್ಯನಿರ್ವಹಿಸಲಿದ್ದಾರೆ. ಗೃಹ ಖಾತೆ ಸೇರಿದಂತೆ ನಗರಾಭಿವೃದ್ಧಿ, ಪರಿಸರ ಸಂರಕ್ಷಣೆ, ಲೋಕೋಪಯೋಗಿ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರ ಖಾತೆಗಳನ್ನು ಇವರ ಸುಪರ್ದಿಗೆ ನೀಡಲಾಗಿದೆ.
ಶಿವಸೇನಾದ ಮತ್ತೊಬ್ಬ ಸಚಿವ ಸುಭಾಶ್ ದೇಸಾಯಿ ಅವರಿಗೆ ಕೈಗಾರಿಕೋದ್ಯಮ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡಾ ಮತ್ತು ಯುವಜನ, ಉದ್ಯೋಗ ಖಾತೆಗಳನ್ನು ನೀಡಲಾಗಿದೆ.
ಬುಲೆಟ್ ರೈಲು: ಯೋಜನೆ ಮರುಪರಿಶೀಲಿಸಲು ಮುಂದಾದ 'ಮಹಾ' ಸಿಎಂ
ಎನ್ಸಿಪಿಯ ಸಚಿವ ಚಗ್ಗನ್ ಬುಜಬಲ ಅವರಿಗೆ ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ಜಲ ಸಂಪನ್ಮೂಲ, ಅಬಕಾರಿ ಖಾತೆಗಳನ್ನು ನೀಡಲಾಗಿದೆ.
ಎನ್ಸಿಪಿಯ ಮತ್ತೊಬ್ಬ ಸಚಿವ ಜಯಂತ್ ಪಾಟೀಲ್ ಅವರಿಗೆ ಹಣಕಾಸು ಮತ್ತು ಯೋಜನೆ, ವಸತಿ, ಆಹಾರ ಸರಬರಾಜು ಮತ್ತು ಕಾರ್ಮಿಕ ಖಾತೆಗಳನ್ನು ನೀಡಲಾಗಿದೆ.
ಕಾಂಗ್ರೆಸ್ ನ ಬಾಳಾಸಾಹೇಬ್ ತಾರೋಟ್ ಅವರಿಗೆ, ಕಂದಾಯ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ, ಪಶುಸಂಗೋಪನೆ, ಮೀನುಗಾರಿಕೆ ಖಾತೆಗಳನ್ನು ನೀಡಲಾಗಿದೆ.
ಮತ್ತೊಬ್ಬ ಕಾಂಗ್ರೆಸ್ ಸಚಿವ ನಿತಿನ್ ರಾವತ್ ಅವರಿಗೆ, ಬುಡಕಟ್ಟು ಜನಾಂಗ ಅಭಿವೃದ್ಧಿ, ಹಿಂದುಳಿದ ವರ್ಗ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ.
ಎನ್ಸಿಪಿ ತೊರೆದು ಹೋಗಿ ಬಿಜೆಪಿ ಜೊತೆ ಕೈ ಸೇರಿಸಿ ಎರಡು ದಿನಕ್ಕೆ ಡಿಸಿಎಂ ಆಗಿ ಮತ್ತೆ ಪಕ್ಷಕ್ಕೆ ವಾಪಸ್ ಮರಳಿದ ಅಜಿತ್ ಪವಾರ್ ಅವರಿಗೆ ಯಾವ ಖಾತೆಯನ್ನೂ ನೀಡಲಾಗಿಲ್ಲ. ಅಷ್ಟೆ ಅಲ್ಲದೆ ಸಿಎಂ ಉದ್ಧವ್ ಠಾಕ್ರೆ ಅವರ ಬಳಿ ಯಾವ ಖಾತೆ ಉಳಿದಿವೆ ಎಂಬ ಬಗ್ಗೆಯೂ ಮಾಹಿತಿ ನೀಡಿಲ್ಲ.