ಉದ್ಧವ್ ಠಾಕ್ರೆ vs ಏಕನಾಥ್ ಶಿಂಧೆ ವಿವಾದ: ಬುಧವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ಮುಂಬೈ, ಜುಲೈ 17: ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಪೀಠವು ಬುಧವಾರ (ಜುಲೈ 20 ) ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಿವಸೇನೆ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲಿದೆ.
ಉದ್ಧವ್ ಠಾಕ್ರೆ ಶಿಬಿರವು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು "ಕಾನೂನುಬಾಹಿರ" ಎಂದು ಆರೋಪಿಸಿದೆ. ಇತ್ತ ಏಕನಾಥ್ ಶಿಂಧೆ ನೇತೃತ್ವದ ಬಂಡಾಯಗಾರರು ತಾವು ಬಹುಮತದ ಶಾಸಕರನ್ನು ಹೊಂದಿರುವ ನಿಜವಾದ ಸೇನೆ ಎಂದು ಹೇಳಿಕೊಳ್ಳುತ್ತಾರೆ.
ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ನಿರ್ಧಾರ ಕಾನೂನುಬದ್ಧತೆ ಪ್ರಶ್ನೆಯಾಗಿದೆ. ಹೀಗಾಗಿ ಏಕನಾಥ್ ಶಿಂಧೆ ಸರ್ಕಾರದ ಯಾವುದೇ ಸಚಿವರಿಗೆ ಪ್ರಮಾಣ ವಚನ ಬೋಧಿಸದಂತೆ ಶಿವಸೇನೆ ಮಹಾರಾಷ್ಟ್ರ ರಾಜ್ಯಪಾಲರಿಗೆ ಮನವಿ ಮಾಡಿದೆ.
ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠವು ತೀರ್ಪು ನೀಡುವವರೆಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಶಿವಸೇನಾ ಸಂಸದ ಸಂಜಯ್ ರಾವುತ್ ಕೂಡ ಒತ್ತಾಯಿಸಿದ್ದಾರೆ.
ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಉಂಟಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನವಾದ ನಂತರ, ಏಕನಾಥ್ ಶಿಂಧೆ ಜೂನ್ 30 ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಜೊತೆಗೆ ಸೇರಿ ಸರ್ಕಾರ ರಚಿಸಿದ್ದಾರೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು ಶಿವಸೇನೆಯ 53 ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. 40 ನೋಟಿಸ್ಗಳನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಕಳುಹಿಸಲಾಗಿದೆ ಮತ್ತು ಇತರ 13 ಉದ್ಧವ್ ಠಾಕ್ರೆ ಗುಂಪಿಗೆ ಸೇರಿವೆ. ಎರಡೂ ಗುಂಪುಗಳು ಪ್ರತಿಸ್ಪರ್ಧಿ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿವೆ.
ಇನ್ನು,ಜೂನ್ 27 ರಂದು, ಏಕನಾಥ್ ಶಿಂಧೆಯ ಅನರ್ಹತೆಯ ನೋಟಿಸ್ ವಿರುದ್ಧ ಸಲ್ಲಿಸಿದ ಮನವಿಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಉಪ ಸ್ಪೀಕರ್ ಅವರಿಗೆ ನೋಟಿಸ್ ನೀಡಿತ್ತು.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸದಸ್ಯರು, ಶಿವಸೇನಾ ಮುಖ್ಯಸ್ಥ ಸುನಿಲ್ ಪ್ರಭು ಮತ್ತು ಉಪ ಸ್ಪೀಕರ್ ನರಹರಿ ಜಿರ್ವಾಲ್ ಈ ವಾರದ ಆರಂಭದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ್ದಾರೆ. ಈಗ ನ್ಯಾಯಾಲಯವು ಎರಡೂ ಕಡೆಯ ಅರ್ಜಿಗಳ ವಿಚಾರಣೆ ನಡೆಸಲಿದೆ.
ಜುಲೈ 18 ರಂದು ನಿಗದಿಯಾಗಿರುವ ರಾಷ್ಟ್ರಪತಿ ಚುನಾವಣೆ ಮುಗಿದು ಕೆಲವು ದಿನಗಳ ನಂತರ ಹೊಸ ಸಚಿವ ಸಂಪುಟ ರಚನೆ ನಡೆಯಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಕ್ಯಾಬಿನೆಟ್ ಪ್ರಸ್ತುತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಬ್ಬರನ್ನು ಮಾತ್ರ ಹೊಂದಿದೆ.