'ನನ್ನ ರಾಜೀನಾಮೆ ಪತ್ರ ರೆಡಿ ಇದೆ'- ಮಹಾ ಸಿಎಂ ಉದ್ದವ್ ಠಾಕ್ರೆ
ಮುಂಬೈ, ಜೂನ್ 22: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರದ ಬುಡವನ್ನು ಶಿವಸೇನಾ ಮುಖಂಡ ಏಕನಾಥ್ ಶಿಂಧೆ ಅಲ್ಲಾಡಿಸಿದ್ದಾರೆ. ಬಂಡಾಯ ಶಾಸಕರನ್ನು ಸಮಾಧಾನಪಡಿಸುವಲ್ಲಿ ಸಿಎಂ ಉದ್ದವ್ ಠಾಕ್ರೆ ವಿಫಲವಾಗಿದ್ದಾರೆ. ಅಂತಿಮವಾಗಿ ವಿಧಿ ಇಲ್ಲದೆ, ತಮ್ಮ ನೋವನ್ನು ಫೇಸ್ ಬುಕ್ ಲೈವ್ ಮೂಲಕ ತೋಡಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ಭವಿಷ್ಯ ಅತಂತ್ರವಾಗಿರುವುದಕ್ಕಿಂತ, ತಮ್ಮ ಪಕ್ಷದ ಶಾಸಕರೇ ಬಂಡಾಯವೆದ್ದು, ಸರ್ಕಾರದ ವಿರುದ್ಧ ನಿಂತಿರುವುದು ತಮಗೆ ಅತ್ಯಂತ ದುಃಖ ತಂದಿದೆ ಎಂದು ಬುಧವಾರ ಸಂಜೆ ಸಿಎಂ ಉದ್ಧವ್ ಠಾಕ್ರೆ ಹೇಳಿದರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯಿಂದ ಮಹತ್ವದ ಸುದ್ದಿಗೋಷ್ಠಿ ಮುಖ್ಯಾಂಶ ಇಲ್ಲಿದೆ.
- ಫೇಸ್ ಬುಕ್ ಲೈವ್ ಮೂಲಕ ಮಹಾರಾಷ್ಟ್ರ ಉದ್ದೇಶಿಸಿ ಮಾತನಾಡಿದ ಉದ್ಧವ್, ನಾನು ರಾಜೀನಾಮೆ ಬರೆದಿಟ್ಟಿದ್ದೇನೆ, ರಾಜ್ಯಪಾಲರಿಗೆ ಅದನ್ನು ತಲುಪಿಸಿ ಎಂದರು.
- ನನ್ನ ರಾಜೀನಾಮೆ ಬೇಕಿದ್ದರೆ, ಬಂದು ಕೇಳಬಹುದಿತ್ತು, ಬಂಡಾಯ ಏಕೆ?, ಕಾಂಗ್ರೆಸ್, ಎನ್ ಸಿಪಿ ಶಾಸಕರ ಬದಲಿಗೆ ಶಿವಸೇನಾ ಶಾಸಕರ ನಡೆಯಿಂದ ಆಘಾತವಾಗಿದೆ ಎಂದು ಹೇಳಿದರು.
- ನಾನು ಬಾಳಾಸಾಹೇಬ್ ಪುತ್ರ, ನನಗೆ ನೀಡಿದ್ದ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ಅನುಭವದ ಕೊರತೆಯಿದ್ದರೂ ನಾನು ಜವಾಬ್ದಾರಿ ವಹಿಸಿಕೊಂಡು ಮುನ್ನಡೆದಿದ್ದೇನೆ ಎಂದರು.
- ಹಿಂದುತ್ವವನ್ನು ಬಿಟ್ಟು ಶಿವಸೇನೆ ಹಿಂದೆ ಸರಿಯುವುದಿಲ್ಲ, ಬಾಳಾಸಾಹೇಬ್ ನೀಡಿದ ಮಂತ್ರವದು ಅದನ್ನು ಕೊನೆ ತನಕ ಪಾಲಿಸುತ್ತೇವೆ ಎಂದು ಘೋಷಿಸಿದರು.
- ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಬಂಡಾಯ ಶಾಸಕರಲ್ಲಿ ಯಾರಾದರೂ ಮುಖಾಮುಖಿಯಾಗಿ ಹೇಳಿದರೆ ಅವರು ಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿಯುವೆ.
-
ಶಿವಸೇನಾ
ಶಾಸಕರ
ಬೇಡಿಕೆಯಂತೆ
ನಾನು
ವರ್ಷಾಬಂಗಲೆ(ಸಿಎಂ
ಅಧಿಕೃತ
ನಿವಾಸ)ಯಿಂದ
ನನ್ನ
ಎಲ್ಲಾ
ಮುಖ್ಯ
ಸಾಮಾಗ್ರಿಗಳನ್ನು,
ಕುರುಹುಗಳನ್ನು
ಮಾತೋಶ್ರಿಗೆ
ಶಿಫ್ಟ್
ಮಾಡುವೆ
ಎಂದು
ಭಾವನಾತ್ಮಕವಾಗಿ
ಉದ್ಧವ್
ನುಡಿದರು.
ಮಹಾರಾಷ್ಟ್ರದ ವಿಧಾನಸಭೆ ಬಲಾಬಲ:
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ.
ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.
Explained: ಮಹಾರಾಷ್ಟ್ರದಲ್ಲಿ ಆ 40 ಶಾಸಕರ ಸಹಿ ಸರ್ಕಾರಕ್ಕೆ ಆಗುತ್ತಾ ಕಹಿ!?
ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ.
ರಾಜ್ಯಪಾಲರಿಗೆ ಬೆಂಬಲ ಪತ್ರ:
ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಪರವಾಗಿ 7 ಮಂದಿ ಪಕ್ಷೇತರ ಶಾಸಕರು ಹಾಗೂ 33 ಶಿವಸೇನೆ ಶಾಸಕರು ಸಹಿ ಸಂಗ್ರಹಿಸುವ ಕೆಲಸ ಮಾಡಿದರು. ಆ ಮೂಲಕ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಬೆಂಬಲವಿಲ್ಲ ಎನ್ನುವ ಸಂದೇಶ ಸಾರಿದರು. ಇದರ ಜೊತೆಗೆ ವಿಶ್ವಾಸ ಮತಯಾಚನೆಗಾಗಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಪತ್ರ ಬರೆಯುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.ರಾಜ್ಯದಲ್ಲಿ ಸರ್ಕಾರ ರಚಿಸುವುದಕ್ಕಾಗಿ ಶಿವಸೇನೆಯು ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆಗೆ ಕೈ ಜೋಡಿಸಿದೆ. "ನಾವು ಬಾಳಾ ಸಾಹೇಬ್ ಸಂಘದ ನಿಷ್ಠಾವಂತ ಶಿವ ಸೈನಿಕರು, ಬಾಳಾ ಸಾಹೇಬ್ ನಮಗೆ ಹಿಂದುತ್ವದ ಪಾಠ ಮಾಡಿದ್ದಾರೆ. ಅಧಿಕಾರಕ್ಕಾಗಿ ನಾವು ಬಾಳಾ ಸಾಹೇಬ್ ಅವರ ತತ್ವ ಸಿದ್ಧಾಂತ ಮತ್ತು ಆಲೋಚನೆಗಳನ್ನು ಎಂದಿಗೂ ಮುರಿಯುವುದಿಲ್ಲ. ಆನಂದ್ ದಿಘೆ ಸಾಹೇಬ್ ನೀತಿಗಳಿಗೆ ವಂಚಿಸುವುದಿಲ್ಲ," ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.