Maharashtra Political Crisis : ಠಾಕ್ರೆ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದು ಹೇಗೆ ಏಕನಾಥ್ ಶಿಂಧೆ?
ಮುಂಬೈ, ಜೂನ್ 22: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಶಿವಸೇನೆಯ ಏಕನಾಥ್ ಶಿಂಧೆ ರಾಜಕೀಯ ಲೆಕ್ಕಾಚಾರಗಳನ್ನೇ ತಿರುವು-ಮುರುವು ಮಾಡುವುದಕ್ಕೆ ಹೊರಟಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಬೆಳವಣಿಗೆಗಳ ಮಧ್ಯೆ ಏಕನಾಥ್ ಶಿಂಧೆ ತಮ್ಮ ಬೆಂಬಲಿತ ಶಾಸಕೊಂದಿಗೆ ಗುಜರಾತ್ನಿಂದ ಅಸ್ಸಾಂನ ಗುವಾಹಟಿ ಕಡೆಗೆ ಮುಖ ಮಾಡಿದ್ದಾರೆ. ಗುವಾಹಟಿಗೆ ತೆರಳುವುದಕ್ಕೂ ಪೂರ್ವದಲ್ಲೇ ಶಿಂಧೆ ಸಂಘಕ್ಕೆ ಮತ್ತಿಬ್ಬರು ಶಾಸಕರು ಸೇರ್ಪಡೆ ಆಗಿದ್ದಾರೆ.
Breaking; ಬಾಳ ಸಾಹೇಬ್ ಠಾಕ್ರೆಯ ಶೀವಸೇನೆ ತೊರೆದಿಲ್ಲ; ಏಕನಾಥ ಶಿಂಧೆ
ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆ ನಂತರದಲ್ಲಿ ನಡೆದ ಬೆಳವಣಿಗೆಗೆ ಕೆಂಡವಾಗಿರುವ ಏಕನಾಥ್ ಶಿಂಧೆ ಮಹಾ ವಿಕಾಸ ಅಘಾಡಿ ವಿರುದ್ಧ ಸಿಡಿದೆದ್ದಿದ್ದಾರೆ. ಕಳೆದ ಎರಡು ದಿನಗಳಿಂದ ಸೂರತ್ನಲ್ಲಿ ಬೆಂಬಲಿತ ಶಾಸಕರೊಂದಿಗೆ ಬೀಡುಬಿಟ್ಟಿರುವ ಅವರ ರಾಜಕೀಯ ಲೆಕ್ಕಾಚಾರ ಮತ್ತು ಇತ್ತೀಚಿನ ಪ್ರಮುಖ ಬೆಳವಣಿಗೆಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಮಹಾರಾಷ್ಟ್ರದ ಪ್ರಮುಖ ರಾಜಕೀಯ ಬೆಳವಣಿಗೆಗಳು
* ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆಗಿನ ದೂರವಾಣಿ ಸಂಭಾಷಣೆ ನಂತರದಲ್ಲಿ ಏಕನಾಥ್ ಶಿಂಧೆ ಮತ್ತು ಬೆಂಬಲಿತ ಶಾಸಕರು ಗುವಾಹಟಿಗೆ ಶಿಫ್ಟ್ ಆದರು. ಇನ್ನೊಂದು ಕಡೆ ಬಂಡಾಯದ ಬಾವುಟ ಹಾರಿಸಿರುವ ಶಾಸಕರು ಮತ್ತೆ ಪಕ್ಷದೊಂದಿಗೆ ಕೈ ಜೋಡಿಸಲಿದ್ದಾರೆ ಎಂದು ಉದ್ಧವ್ ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದರು.
* ಏಕನಾಥ್ ಶಿಂಧೆ ಅವಶ್ಯಕತೆಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಲಾಗುತ್ತಿದ್ದು, ಶೀಘ್ರವೇ ಎಲ್ಲ ಶಾಸಕರು ತಮ್ಮನ್ನು ಕೂಡಿಕೊಳ್ಳುತ್ತಾರೆ. ಕಾಂಗ್ರೆಸ್, ಎನ್ ಸಿಪಿ ಶಾಸಕರು ಕೂಡ ತಮ್ಮ ಸರ್ಕಾರದೊಂದಿಗೆ ಇದ್ದಾರೆ ಎಂದು ತಮ್ಮ ಶಾಸಕರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು.
* ಶಿವಸೇನೆ ಪಕ್ಷದೊಂದಿಗೆ ಪುನಃ ಸೇರಿಕೊಳ್ಳುವಂತೆ ಏಕನಾಥ್ ಶಿಂಧೆಗೆ ಸಿಎಂ ಉದ್ಧವ್ ಠಾಕ್ರೆ ಕೇಳಿಕೊಂಡಿದ್ದು, ಈ ಹಂತದಲ್ಲಿ ಬಿಜೆಪಿಯ ಜೊತೆಗೆ ಸೇರಿಕೊಂಡು ಸರ್ಕಾರವನ್ನು ಮುನ್ನಡೆಸುವಂತೆ ಸಿಎಂಗೆ ಏಕನಾಥ್ ಶಿಂಧೆ ಷರತ್ತು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
* "ಈಗ, ಕೆಲವರು ಬಿಜೆಪಿಗೆ ಸೇರಬೇಕು ಎಂದು ಹೇಳುತ್ತಿದ್ದಾರೆ. ನಾವು ಹೇಗೆ ಒಟ್ಟಿಗೆ ಹೋಗುವುದಕ್ಕೆ ಸಾಧ್ಯವಾಗುತ್ತದೆ? ನಾವು ಈ ಮೊದಲು ಅವರೊಂದಿಗೆ ಹೋಗಿ ಅನುಭವಿಸಿದ್ದೇವೆ. ಈಗ ಅವರೊಂದಿಗೆ ಏಕೆ ಹೋಗಬೇಕು," ಎಂದು ಪಕ್ಷದ ಸಭೆಯಲ್ಲಿ ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
* ಏಕನಾಥ್ ಶಿಂಧೆ ಮತ್ತು ಅವರ 22 ಬೆಂಬಲಿತ ಶಾಸಕರನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಇರಿಸಲಾಗುತ್ತಿದ್ದು, ಮೊದಲು ಗುಜರಾತ್ ಮತ್ತು ಈಗ ಅಸ್ಸಾಂಗೆ ತೆರಳಿರುವುದು ತೆರೆಮರೆಯ ಲೆಕ್ಕಾಚಾರವನ್ನು ಬಹಿರಂಗಪಡಿಸುತ್ತದೆ. ಇನ್ನೊಂದು ಮಗ್ಗಲಿನಲ್ಲಿ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ಏಕನಾಥ್ ಶಿಂಧೆ ಅವರೊಂದಿಗೆ ಸರ್ಕಾರ ರಚಿಸಲು ಪಕ್ಷವು ಮುಕ್ತವಾಗಿದೆ ಎಂದು ಹೇಳುತ್ತಿದ್ದಾರೆ.
* ಮಹಾರಾಷ್ಟ್ರದ ಆಡಳಿತ ಮೈತ್ರಿಕೂಟದ ಭಾಗವಾಗಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯಲ್ಲಿನ ಬಿಕ್ಕಟ್ಟು ಅವರ ಆಂತರಿಕ ವಿಷಯ ಎಂದು ಹೇಳಿದ್ದಾರೆ. ಈಗ ಶಿವಸೇನೆಯಲ್ಲಿನ ಬಿಕ್ಕಟ್ಟಿನ ಶರದ್ ಪವಾರ್ ಪಾತ್ರವಿರುವ ಬಗ್ಗೆ ಊಹಾಪೋಹಗಳು ಎದ್ದಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಮೂರು ಪಕ್ಷಗಳು ಸಂಪೂರ್ಣ ಬದ್ಧವಾಗಿವೆ ಎಂದು ಹೇಳಿದ್ದಾರೆ.
* ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಊಹಿಸಲಾಗುತ್ತಿದೆ. ಸದ್ಯ ದೆಹಲಿಯಲ್ಲಿ ಇರುವ ಫಡ್ನವೀಸ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅನ್ನು ಭೇಟಿ ಮಾಡಿದ್ದಾರೆ. ಇತ್ತ ಏಕನಾಥ್ ಶಿಂಧೆ ಮತ್ತು ಬೆಂಬಲಿತ ಶಾಸಕರನ್ನು ಸೂರತ್ ಗೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
* ಆದಾಗ್ಯೂ, ನಿನ್ನೆ ನಡೆದ ಪ್ರಮುಖ ಚುನಾವಣೆಗಳಲ್ಲಿ ಶಿವಸೇನೆಯ ಶಾಸಕರು ಬಿಜೆಪಿ ಪರವಾಗಿ ಅಡ್ಡ ಮತದಾನ ಮಾಡಿದ ನಂತರ ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ವಿರುದ್ಧ ಹರಿಹಾಯ್ದ ಹಿನ್ನೆಲೆ ಬಿಕ್ಕಟ್ಟು ಉಂಟಾಗಿದೆ ಎಂದು ವರದಿಯಾಗಿದೆ. ಏಕನಾಥ್ ಶಿಂಧೆ ಅನ್ನು ಮುಖ್ಯ ಸಚೇತಕ ಹುದ್ದೆಯಿಂದ ತೆಗೆದುಹಾಕಲಾಯಿತು.
* ಉದ್ಧವ್ ಠಾಕ್ರೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಂಜಯ್ ರಾವತ್ ತಮ್ಮ ಪಕ್ಷದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ಏಕನಾಥ್ ಶಿಂಧೆ ಕಣ್ಣು ಕೆಂಪಾಗಿಸಿದೆ. ಇದರ ಮಧ್ಯೆ ಅಭಿಯಾನ ನಡೆಸುತ್ತಿರುವ ಸಂಜಯ್ ರಾವತ್, ಬಿಕ್ಕಟ್ಟು ಶಮನಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಏಕನಾಥ್ ಶಿಂಧೆಯನ್ನು ಶಿವಸೇನೆಯ ನಿಷ್ಠಾವಂತ ನಾಯಕ ಎಂದು ಬಣ್ಣಿಸಿದ್ದಾರೆ.
* ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸುವುದಕ್ಕೆ ಬಿಜೆಪಿಗೆ ಹೆಚ್ಚುವರಿ 37 ಸ್ಥಾನಗಳ ಅಗತ್ಯವಿದೆ. ರಾಜ್ಯದಲ್ಲಿ 106 ಶಾಸಕರನ್ನು ಹೊಂದಿರುವ ಬಿಜೆಪಿಯು ವಿಶ್ವಾಸಮತವನ್ನು ಪಡೆದುಕೊಳ್ಳಬೇಕಾದರೆ, ಏಕನಾಥ್ ಶಿಂಧೆ ಬೆಂಬಲಿತ ಶಾಸಕರೂ ಸೇರಿದಂತೆ ಒಟ್ಟು 37 ಶಾಸಕರ ಬೆಂಬಲವನ್ನು ಪಡೆಯಬೇಕಾಗುತ್ತದೆ.