ಶಾಸಕರು Yes ಎಂದರೆ 'ಮಹಾ' ವಿಕಾಸ ಅಘಾಡಿಗೆ ಶಿವಸೇನೆ ಟಾಟಾ.. ಬಾಯ್ ಬಾಯ್!
ಮುಂಬೈ, ಜೂನ್ 23: ಮಹಾರಾಷ್ಟ್ರದಲ್ಲಿ ರಾಜಕೀಯದ ಬಿಕ್ಕಟ್ಟಿನ ಮಧ್ಯೆ ಶಿವಸೇನೆಯ ಬಂಡಾಯ ಶಾಸಕರು ಬಯಸಿದರೆ ಮಹಾ ವಿಕಾಸ ಅಘಾಡಿ ಮೈತ್ರಿಕೂಟವನ್ನು ತೊರೆಯುವುದಕ್ಕೆ ನಾವು ಸಿದ್ಧ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
"ಶಾಸಕರು ಗುವಾಹಟಿಯಿಂದ ಯಾವುದೇ ರೀತಿಯ ಮಾತುಕತೆಗಳನ್ನು ನಡೆಸಬಾರದು, ಅವರು ಮತ್ತೆ ಮುಂಬೈಗೆ ಬಂದು ಸಿಎಂ ಜೊತೆ ಚರ್ಚಿಸಬೇಕು. ಇದು ಎಲ್ಲಾ ಶಾಸಕರ ಇಚ್ಛೆಯಾಗಿದ್ದರೆ ಮಹಾ ವಿಕಾಸ ಅಘಾಡಿಯಿಂದ ಹೊರಬರುವುದನ್ನು ಪರಿಗಣಿಸಲು ನಾವು ಸಿದ್ಧರಿದ್ದೇವೆ, ಆದರೆ ಅದಕ್ಕಾಗಿ ಅವರು ಇಲ್ಲಿಗೆ ಬಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆಗೆ ಚರ್ಚಿಸಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುಂಬೈ-ಮಧ್ಯ ಪ್ರದೇಶ ತಂಡಗಳ ನಡುವೆ ರಣಜಿ ಫೈನಲ್ ಫೈಟ್
ಗುವಾಹಟಿಯ ಹೋಟೆಲ್ ಸೇರಿರುವ 21 ಬಂಡಾಯ ಶಾಸಕರು ಶಿವಸೇನೆ ಸಂಪರ್ಕದಲ್ಲಿ ಇದ್ದಾರೆ. ಮುಂಬೈಗೆ ವಾಪಸ್ ಆದ ಸಂದರ್ಭದಲ್ಲಿ ಅವರು ಶಿವಸೇನೆಯೊಂದಿಗೆ ನಿಲ್ಲುತ್ತಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಅಧಿಕೃತ ನಿವಾಸಕ್ಕೆ ಉದ್ಧವ್ ಠಾಕ್ರೆ
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶೀಘ್ರದಲ್ಲಿಯೇ ಸಿಎಂ ಅಧಿಕೃತ ನಿವಾಸ ವರ್ಷಾಗೆ ವಾಪಸ್ ಆಗಲಿದ್ದಾರೆ. ಗುವಾಹಟಿಯಲ್ಲಿ ಇರುವ 21 ಬಂಡಾಯ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಮುಂಬೈಗೆ ಬಂದು ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಜೊತೆಗೆ ಒಟ್ಟು 42 ಶಾಸಕರು ಬೆಂಬಲಿಸಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಶಿವಸೇನೆಗೆ ಬೆನ್ನಿಗೆ ಕೇವಲ 13 ಶಾಸಕರು ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಬಂಡಾಯಕ್ಕೆ ಸಂಬಂಧಿಸಿದಂತೆ ಏಕನಾಥ್ ಶಿಂಧೆ ಬಹಿರಂಗ ಪತ್ರವೊಂದನ್ನು ಟ್ವೀಟ್ ಮಾಡಿದ್ದಾರೆ.
ಸಿಎಂ ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆ ಬಹಿರಂಗ ಪತ್ರ
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಸಿಎಂಗೆ ಬರೆದ ಮೂರು ಪುಟಗಳ ಪತ್ರದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಶಿಂಧೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ಸಿಎಂ ಎಂದಿಗೂ ಸೆಕ್ರೆಟರಿಯೇಟ್ನಲ್ಲಿ ಇರುತ್ತಿರಲಿಲ್ಲ, ಬದಲಿಗೆ ಠಾಕ್ರೆಯ ಮಾತೋಶ್ರೀ ನಿವಾಸದಲ್ಲಿ ಇರುತ್ತಿದ್ದರು. ನಾವು ಸಿಎಂ ಸುತ್ತಲಿನವರಿಗೆ ಕರೆ ಮಾಡುತ್ತಿದ್ದೆವು, ಆದರೆ ಅವರು ನಮ್ಮ ಫೋನ್ ಕರೆಗೆ ಹಾಜರಾಗಲೇ ಇಲ್ಲ. ಈ ಎಲ್ಲ ಸಂಗತಿಗಳಿಂದ ಬೇಸತ್ತು ಏಕನಾಥ್ ಶಿಂಧೆಯ ಮನವೊಲಿಸಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಶಾಸಕರ ಪತ್ರದಲ್ಲಿ ಬರೆದಿದ್ದಾರೆ.
|
ಸಿಎಂ ಉದ್ಧವ್ ಠಾಕ್ರೆ ಸುತ್ತಲಿನ ಜನರದ್ದೇ ಎಲ್ಲ ಆಟ
"ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನ್ನು ಭೇಟಿ ಮಾಡುವುದಕ್ಕೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಸಿಎಂ ಸುತ್ತಲಿರುವ ಜನರೇ ನಾವು ಅವರನ್ನು ಭೇಟಿ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಿದ್ದರು. ಸಿಎಂ ಭೇಟಿಗೆ ತೆರಳಿದಾಗಲೆಲ್ಲ ನಾವು ಅವಮಾನವನ್ನು ಎದುರಿಸುವಂತಾ ಸ್ಥಿತಿ ಇತ್ತು. ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷದವರೇ ನಮ್ಮ ಪಾಲಿನ ಪ್ರತಿಪಕ್ಷ ನಾಯಕರಂತೆ ವರ್ತಿಸುತ್ತಿದ್ದರು. ಆ ಪಕ್ಷದ ಶಾಸಕರು ನಿರಾಯಾಸವಾಗಿ ಸಿಎಂ ಅನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿತ್ತು, ಅಲ್ಲದೇ ಆ ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ನಿಧಿ ಒದಗಿಸಲಾಗುತ್ತಿತ್ತು," ಎಂದು ಏಕನಾಥ್ ಶಿಂಧೆ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಭಾವನಾತ್ಮಕ ಭಾಷಣ ಮಾಡಿದ ಠಾಕ್ರೆ
ಮಹಾರಾಷ್ಟ್ರದಲ್ಲಿ ಎರಡೂವರೆ ವರ್ಷಗಳಿಂದಲೂ ಸಮ್ಮಿಶ್ರ ಸರ್ಕಾರವು ಅಪಾಯದಲ್ಲಿ ಸಿಲುಕಿದೆ. ಶಿವಸೇನೆ ಸಂಸ್ಥಾಪಕ ಹಾಗೂ ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಹೆಸರು ಉಲ್ಲೇಖಿಸಿ ಬಂಡಾಯ ಶಾಸಕರನ್ನು ಉದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದರು. ಕೋವಿಡ್-19 ಸೋಂಕು ತಗುಲಿದ ಹಿನ್ನೆಲೆ ಫೇಸ್ ಬುಕ್ ಮೂಲಕ ಲೈವ್ ವಿಡಿಯೋದಲ್ಲಿ ಮಾತನಾಡಿದರು. "ನಮ್ಮದೇ ಜನರಿಗೆ ನಾನು ಮುಖ್ಯಮಂತ್ರಿ ಆಗಿರುವುದು ಇಷ್ಟವಿಲ್ಲದಿದ್ದರೆ, ನೇರವಾಗಿ ನನ್ನ ಬಳಿಗೆ ಬಂದು ಹೇಳಲಿ, ನಾನು ರಾಜೀನಾಮೆ ನೀಡುವುದಕ್ಕೆ ಸಿದ್ಧವಾಗಿದ್ದೇನೆ. ನಾನು ಬಾಳಾಸಾಹೇಬ್ ಪುತ್ರನಾಗಿದ್ದು, ಯಾವುದೇ ಹುದ್ದೆಗೆ ಅಂಟಿಕೊಂಡಿರುವವನು ಅಲ್ಲ," ಎಂದು ಹೇಳಿದ್ದರು.
ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಿವೆ?
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.
ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ. ಈಗ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಜೊತೆಗೆ 42 ಮಂದಿ ಶಾಸಕರು ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಶಿವಸೇನೆಗೆ ಬೆಂಬಲಿಸುವ ಶಾಸಕರ ಸಂಖ್ಯೆ 13ಕ್ಕೆ ತಗ್ಗಿರುವ ಬಗ್ಗೆ ವರದಿಯಾಗಿದೆ.