ಠಾಕ್ರೆಗೆ ಠಕ್ಕರ್ ಕೊಡಲು ಏಕನಾಥ್ ಖೇಲ್: ಮಹಾರಾಷ್ಟ್ರದಲ್ಲಿ ಬಂಡಾಯ ಹಲ್ ಚಲ್!?
ಮುಂಬೈ, ಜೂನ್ 21: ಮಹಾರಾಷ್ಟ್ರದಲ್ಲಿ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ತಮ್ಮ ಬೆಂಬಲಿತ ಶಾಸಕರನ್ನು ಕರೆದುಕೊಂಡು ಗುಜರಾತ್ನ ಸೂರತ್ಗೆ ತೆರಳಿರುವುದು ಮಹಾ ವಿಕಾಸ್ ಅಘಾಡಿ ಸರ್ಕಾರದ ಬುಡವನ್ನೇ ಅಲ್ಲಾಡಿಸಿದೆ.
ಸೂರತ್ನ ಖಾಸಗಿ ಹೋಟೆಲ್ವೊಂದರಲ್ಲಿ ಸಚಿವ ಏಕನಾಥ್ ಶಿಂಧೆ ಕನಿಷ್ಠ ಬೆಂಬಲಿತ 12 ಶಾಸಕರೊಂದಿಗೆ ಇರುವುದರ ಬಗ್ಗೆ ತಿಳಿಯುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ಎದೆಯಲ್ಲಿ ನಡುಕ ಶುರುವಾಗಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಏಕನಾಥ ಯಾರು?
ಮಹಾರಾಷ್ಟ್ರದಲ್ಲಿ ಶಿವಸೇನೆಯು 55 ಶಾಸಕರನ್ನು ಹೊಂದಿದ್ದು, ಈ ಪೈಕಿ 26 ಶಾಸಕರು ಏಕನಾಥ್ ಶಿಂಧೆ ಬೆನ್ನಿಗೆ ನಿಂತಿರುವುದು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಏಕೆಂದರೆ ಪಕ್ಷಾಂತರ ವಿರೋಧಿ ಕಾಯ್ದೆ ಪ್ರಕಾರ, ಯಾವುದೇ ಒಂದು ಪಕ್ಷದಲ್ಲಿ ಒಟ್ಟು ಶಾಸಕರ ಪೈಕಿ ಮೂರರ ಎರಡರಷ್ಟು ಶಾಸಕರು ಪಕ್ಷಾಂತರಕ್ಕೆ ಒಪ್ಪಿದರೆ ಅಂಥ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಅನರ್ಹತೆಯಿಂದ ಬಚಾವ್ ಆಗುವುದಕ್ಕೆ ಏಕನಾಥ್ ಶಿಂಧೆ ಲೆಕ್ಕಾಚಾರ ಹೇಗಿದೆ ಎನ್ನುವುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಬಿಜೆಪಿಗೆ ಬೆಂಬಲಿಸುವ ಏಕನಾಥ್ ಶಿಂಧೆ ಲೆಕ್ಕಾಚಾರ ಏನಿದೆ?
ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಟ್ಟು 55 ಶಾಸಕರಿದ್ದಾರೆ. ಈಗ ಪಕ್ಷದ ವಿರುದ್ಧವೇ ಬಂಡಾಯ ಬಾವುಟ ಹಾರಿಸಿರುವ ಏಕನಾಥ್ ಶಿಂಧೆಯ ಬೆನ್ನಿಗೆ ನಿಂತಿರುವ ಶಾಸಕರು ಒಂದು ವೇಳೆ ಬಿಜೆಪಿಗೆ ಹೋಗುವುದಕ್ಕೆ ಬಯಸಿದರೆ ಅದಕ್ಕೆ ಪೂರಕ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗುತ್ತದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಶಿವಸೇನೆಯಲ್ಲಿನ ಒಟ್ಟು ಶಾಸಕರಲ್ಲಿ ಮೂರರ ಎರಡರಷ್ಟು ಮಂದಿ ಬೆಂಬಲವನ್ನು ಪಡೆದಿರಬೇಕಾಗುತ್ತದೆ. ಅಂದರೆ ಒಟ್ಟು 55 ಶಾಸಕರಲ್ಲಿ ಕನಿಷ್ಠ 37 ಶಾಸಕರು ಬಿಜೆಪಿಯ ಜೊತೆ ಹೋಗುವುದಕ್ಕೆ ಸಹಮತ ವ್ಯಕ್ತಪಡಿಸಬೇಕಾಗುತ್ತದೆ.
ಶಿವಸೇನೆಯ 37 ಶಾಸಕರ ಬೆಂಬಲವಿದ್ದರೆ ಅನರ್ಹತೆ ಇರುವುದಿಲ್ಲ
ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಪಕ್ಷದ ವಿರುದ್ಧ ಚಟುವಟಿಕೆಗಳಿಗೆ ಅನರ್ಹತೆಯ ಶಿಕ್ಷೆಯನ್ನು ನೀಡಲಾಗುತ್ತದೆ. ಇಂಥ ಅನರ್ಹತೆಯ ಶಿಕ್ಷೆಯಿಂದ ಬಚಾವ್ ಆಗುವುದಕ್ಕೆ ಏಕನಾಥ್ ಶಿಂಧಗೆ 37 ಶಾಸಕರ ಬೆಂಬಲದ ಅಗತ್ಯವಿರುತ್ತದೆ. ಅಂದರೆ 37 ಮಂದಿ ಶಾಸಕರು ಒಮ್ಮತವನ್ನು ವ್ಯಕ್ತಪಡಿಸಿದರೆ, ಆಗ ಎಲ್ಲಾ ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಸಮ್ಮಿಶ್ರ ಸರ್ಕಾರದಲ್ಲಿನ ಸಿಡುಕಿನ ಲಾಭ ನೋಡುತ್ತಿರುವ ಬಿಜೆಪಿ
ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದಲ್ಲಿನ ಬಿಕ್ಕಟ್ಟನ್ನು ದುರ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಸರಿ ಪಡೆಯು ಲೆಕ್ಕಾಚಾರ ಹಾಕಿಕೊಳ್ಳುತ್ತಿದೆ. ಈ ಹಂತದಲ್ಲಿ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೆ ಬೇಡಿಕೆ ಎತ್ತುವ ಸಾಧ್ಯತೆಯೂ ಇದೆ. ಮಹಾ ವಿಕಾಸ ಅಘಾಡಿಯಲ್ಲಿ ಭಾರೀ ಅಶಾಂತಿ ಇದೆ ಎಂದು ನಾವು ಬಹಿರಂಗವಾಗಿ ಹೇಳುತ್ತಿದ್ದೇವೆ," ಎಂದು ಬಿಜೆಪಿಯ ಹಿರಿಯ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯ ನಂತರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳು ಹೇಗೆ ತಮ್ಮದೇ ಸದಸ್ಯರ ವಿಶ್ವಾಸವನ್ನು ಕಳೆದುಕೊಂಡಿವೆ ಎಂಬುದನ್ನು ಅಂಕಿ-ಅಂಶಗಳು ತೋರಿಸುತ್ತವೆ
ಸಚಿವ ಏಕನಾಥ್ ಶಿಂಧೆ ಸಿಡುಕಿಗೆ ಕಾರಣವೇನು?
ಶಿವಸೇನೆಯಲ್ಲಿ ಯಾವುದೇ ಪ್ರಮುಖ ನೀತಿಗಳು, ಯೋಜನೆಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸುವಾಗ ತಮ್ಮನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಏಕನಾಥ್ ಶಿಂಧೆ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು. ಇದರ ಜೊತೆಗೆ ಇತ್ತೀಚಿಗೆ ನಡೆದ ಠಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯು ಸ್ವತಂತ್ರ್ಯವಾಗಿ ಸ್ಪರ್ಧೆಗೆ ಇಳಿಯಬೇಕು ಎಂದು ಶಿಂಧೆ ಪ್ರಸ್ತಾಪಿಸಿದ್ದರು. ಆದರೆ ಅವರ ಮಾತಿಗೆ ಸೊಪ್ಪು ಹಾಕದ ಶಿವಸೇನೆಯು ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆಗೆ ಮೈತ್ರಿಯಾಗಿ ಅಖಾಡಕ್ಕೆ ಇಳಿಯಿತು. ಈ ರಾಜಕೀಯ ಬೆಳವಣಿಗೆಗಳು ಶಿವಸೇನೆಯಲ್ಲಿ ತಮ್ಮ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತೆ ಆಗಿತ್ತು. ಹೀಗಾಗಿ ಕೆರಳಿದ ಏಕನಾಥ್ ಶಿಂಧೆ ಈಗ ಬೆಂಬಲಿತ ಶಾಸಕರೊಂದಿಗೆ ಸೇರಿಕೊಂಡು ಸರ್ಕಾರದ ವಿರುದ್ಧವೇ ತೊಡೆ ತಟ್ಟುವುದಕ್ಕೆ ಶುರು ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಶಾಸಕರ ನಂಬರ್ ಗೇಮ್ ಹೇಗಿದೆ?
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಯಾವ ಪಕ್ಷವು ಎಷ್ಟು ಶಾಸಕರನ್ನು ಹೊಂದಿದೆ ಎಂಬುದರ ಮೇಲೆ ಮುಂದಿನ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಶಿವಸೇನೆ 55, NCP 53, ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ. ಈ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ಮಹಾ ವಿಕಾಸ ಅಗಾಢಿಯು ಒಟ್ಟು 152 ಶಾಸಕರ ಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಶಾಸಕರನ್ನು ಹೊಂದಿದ್ದರೆ, ಇತರೆ ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಶಾಸಕರ ಸಂಖ್ಯೆಯು 29 ಆಗಿದೆ.
Recommended Video