Maharashtra Political Crisis: ಉದ್ಧವ್ ಠಾಕ್ರೆಯನ್ನೇ ಅಸ್ಸಾಂಗೆ ಕರೆದ ಸಿಎಂ ಶರ್ಮಾ
ಗುವಾಹಟಿ, ಜೂ. 24: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ದಿನೇ ದಿನೇ ಬಿಗಡಾಯಿಸುತ್ತಿದ್ದು, ರಾಜ್ಯದ ಬಂಡಾಯ ಶಾಸಕರು ಅಸ್ಸಾಂಗೆ ಕೆಲವರು ಗುಜರಾತ್ಗೂ ಓಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ರಜೆ ಅವಧಿಗೆ ಕರೆದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶಿವಸೇನೆಯ ಬಂಡಾಯ ಶಾಸಕರು ಮತ್ತು ಮಹಾರಾಷ್ಟ್ರದ ಕೆಲವು ಸ್ವತಂತ್ರ ಶಾಸಕರು ಅಸ್ಸಾಂನಲ್ಲಿ ಬೀಡು ಬಿಟ್ಟಿರುವ ಹಿನ್ನೆಲೆ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ಉದ್ಧವ್ ಠಾಕ್ರೆ ಅವರನ್ನು ವಿರಾಮ ತೆಗೆದುಕೊಳ್ಳಲು ಅಸ್ಸಾಂಗೆ ಬರುವಂತೆ ಆಹ್ವಾನಿಸಿದ್ದಾರೆ.
ಶುಕ್ರವಾರ ಎಎನ್ಐ ಜೊತೆ ಮಾತನಾಡಿದ ಶರ್ಮಾ, ಬಂಡಾಯ ಶಾಸಕರು ಅಸ್ಸಾಂನಲ್ಲಿ ಹೆಚ್ಚು ದಿನ ತಂಗಿದರೆ ಅದು ನನಗೆ ಒಳ್ಳೆಯದು. ನಾನು ಎಲ್ಲರನ್ನು ಆಹ್ವಾನಿಸುತ್ತೇನೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೂಡ ರಜೆಗಾಗಿ ಅಸ್ಸಾಂಗೆ ಬರಬೇಕು. ನಾನು ದೇಶದ ಎಲ್ಲಾ ಶಾಸಕರನ್ನು ಅಸ್ಸಾಂಗೆ ಬರುವಂತೆ ಆಹ್ವಾನಿಸುತ್ತೇನೆ ಎಂದು ಹೇಳಿದ್ದಾರೆ.
ಗುವಾಹಟಿಯಲ್ಲಿ ಮಹಾರಾಷ್ಟ್ರದ ಬಂಡಾಯ ಶಾಸಕರಿಗೆ ಆತಿಥ್ಯ ನೀಡುವ ಆರೋಪವನ್ನು ಅಸ್ಸಾಂ ಮುಖ್ಯಮಂತ್ರಿ ತಳ್ಳಿಹಾಕಿದ ಶರ್ಮಾ ತಮ್ಮ ರಾಜ್ಯಕ್ಕೆ ಭೇಟಿ ನೀಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ರಚನೆಯ ಉಲ್ಲಂಘನೆಗೆ ಸಂಬಂಧಿಸಿದ ಪ್ರತಿಪಕ್ಷಗಳ ಗೇಲಿ ಕುರಿತು ಮಾತನಾಡಿದ ಅವರು, ಜನರು ಹೋಟೆಲ್ಗೆ ಬರುವುದನ್ನು ನಾನು ಹೇಗೆ ತಡೆಯಲು ಸಾಧ್ಯ? ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಇರುವುದರಿಂದ ಅಸ್ಸಾಂನ ಹೋಟೆಲ್ಗೆ ಬರಬೇಡಿ ಎಂದು ನಾನು ನಿಮಗೆ ಹೇಳಬಹುದೇ? ?ಯಾರಾದರೂ ಅಸ್ಸಾಂಗೆ ಬಂದಾಗ ನನಗೆ ಸಂತೋಷವಾಗುತ್ತದೆ. ಅವರು ಎಲ್ಲಿಯವರೆಗೆ ಬೇಕಾದರೂ ಉಳಿಯಬಹುದು ಎಂದು ಹೇಳಿದರು.
Maharashtra Political Crisis: ಈಗ ಮಹಾರಾಷ್ಟ್ರದಲ್ಲಿ ಸಂಸದರ ಬಂಡಾಯ
ಮುಂದುವರಿದು ಹಿಮಾಂತ್ ಶರ್ಮಾ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸಂಬಂಧವನ್ನು ನಿರಾಕರಿಸಿದರು. ಅಸ್ಸಾಂನಲ್ಲಿ ಸಾಕಷ್ಟು ಉತ್ತಮ ಹೋಟೆಲ್ಗಳಿವೆ, ಯಾರು ಬೇಕಾದರೂ ಅಲ್ಲಿಗೆ ಬಂದು ತಂಗಬಹುದು. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಮಹಾರಾಷ್ಟ್ರದ ಶಾಸಕರು ಅಸ್ಸಾಂನಲ್ಲಿ ಉಳಿದುಕೊಂಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ, ಇತರ ರಾಜ್ಯಗಳ ಶಾಸಕರು ಸಹ ಬಂದು ತಂಗಬಹುದು ಎಂದು ಹೇಳಿದರು.
ಇದಕ್ಕೆ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ನಿರ್ಲಕ್ಷಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುವಾಹಟಿಯ ಹೋಟೆಲ್ನಲ್ಲಿ ತಂಗಿರುವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ ಬಹುಪಾಲು ಶಾಸಕರು ಬಂಡಾಯ ಎದ್ದ ನಂತರ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದಲ್ಲಿ ಬಿಕ್ಕಟ್ಟು ಭುಗಿಲೆದ್ದಿದೆ.
ಶಿವಸೇನೆ ಮೇಲೆ ಬಿಗಿ ಹಿಡಿತ
ಜೂನ್ 20 ರಿಂದ ಗುವಾಹಟಿಯ ಹೋಟೆಲ್ನಲ್ಲಿರುವ ಬಂಡಾಯ ಶಾಸಕರು ತಮ್ಮ ಮುಂದಿನ ಕ್ರಮವನ್ನು ನಿರ್ಧರಿಸಲು ಜೂನ್ 23 ರಂದು ಶಿಂಧೆಗೆ ಅಧಿಕಾರ ನೀಡಿದರು. ಏತನ್ಮಧ್ಯೆ, ಏಕನಾಥ್ ಶಿಂಧೆ ಅವರು ಶಿವಸೇನೆ ಮೇಲೆ ಬಿಗಿ ಹಿಡಿತವನ್ನು ಹೊಂದಿರುವಂತೆ ಕಂಡುಬರುತ್ತಿದ್ದು, ಶುಕ್ರವಾರ ಹೆಚ್ಚಿನ ಶಾಸಕರು ಗುವಾಹಟಿ ತಲುಪುವ ಸಾಧ್ಯತೆಯಿರುವುದರಿಂದ ಅವರನ್ನು ಬೆಂಬಲಿಸುವ ಶಾಸಕರ ಬಲ 50 ದಾಟುವ ನಿರೀಕ್ಷೆಯಿದೆ.
ಶಿವಸೇನೆಯನ್ನು ತೊಡೆದುಹಾಕಲು ಪ್ರಯತ್ನ
ಮೈತ್ರಿ ಪಾಲುದಾರರ ದುರಾಸೆಯ ಉದ್ದೇಶಗಳ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತಿಳಿಸಲು ಶಾಸಕರು ಲೆಕ್ಕವಿಲ್ಲದಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಮಹಾರಾಷ್ಟ್ರದಿಂದ ರಾಜಕೀಯವಾಗಿ ಶಿವಸೇನೆಯನ್ನು ತೊಡೆದುಹಾಕಲು ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಪ್ರಯತ್ನಿಸುತ್ತಿವೆ ಎಂದು ಶಿವಸೇನೆ ಶಾಸಕ ಸಂಜಯ್ ರಾವತ್ ಹೇಳಿದ್ದಾರೆ.
ಎಂವಿಎ ಹೊರ ಬರಲು ಸಿದ್ಧತೆ ಬಗ್ಗೆ ನಿರ್ಧಾರ
ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಚರ್ಚಿಸುವಂತೆ ಶಿವಸೇನೆ ನಾಯಕ ಸಂಜಯ್ ರಾವತ್ ಒತ್ತಾಯಿಸಿದ್ದಾರೆ. ಇದು ಎಲ್ಲಾ ಶಾಸಕರ ಇಚ್ಛೆಯಾಗಿದ್ದರೆ ಮಹಾ ವಿಕಾಸ್ ಅಘಾಡಿ (ಎಂವಿಎ) ನಿಂದ ಹೊರಬರುವುದನ್ನು ನಿರ್ಧರಿಸಲು ಶಿವಸೇನೆ ಸಿದ್ಧವಾಗಿದೆ ಎಂದು ರಾವತ್ ಹೇಳಿಕೊಂಡಿದ್ದಾರೆ. ಆದರೆ ಠಾಕ್ರೆ ಮತ್ತು ಅವರೊಂದಿಗೆ ಸಮಸ್ಯೆಗಳನ್ನು ಚರ್ಚಿಸಿ ಬಂಡಾಯ ಶಾಸಕರು ನೇರವಾಗಿ ಸಿಎಂ ಉದ್ಧವ್ಗೆ ಸಂದೇಶವನ್ನು ತಲುಪಿಸಬೇಕಾಗುತ್ತದೆ.
ರಾಷ್ಟ್ರಪತಿ ಚುನಾವಣೆಯೇ ಟಾರ್ಗೆಟ್: ಖರ್ಗೆ
ಈ ಹಿಂದೆ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಕೇಂದ್ರವು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಮಹಾರಾಷ್ಟ್ರ ಬಿಕ್ಕಟ್ಟು ಶಿವಸೇನೆಯ ಆಂತರಿಕ ವಿಷಯವಾಗಿದೆ. ತಮ್ಮ ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ಪಕ್ಷದ ನಾಯಕ ಜಯಂತ್ ಪಾಟೀಲ್ ಅವರು ತಮ್ಮ ಪಕ್ಷವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ದೃಢವಾಗಿ ನಿಂತಿದೆ ಎಂದು ಹೇಳಿದ್ದಾರೆ.