ಪ್ರಾಣಿ ಮಾಂಸ ಸೇವಿಸಿದವರಿಗೆ ಅಂಟುತ್ತೆ ಕಾಂಗೋ ವೈರಸ್!
ಮುಂಬೈ, ಸಪ್ಟೆಂಬರ್.29: ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಇದರ ಆತಂಕದ ನಡುವೆಯೇ ಕಾಂಗೋ ವೈರಸ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಪಾಲ್ಘರ್ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ.
ಕ್ರಿಮಿಯನ್ ಕಾಂಗೋ ಹೆಮರಾಜಿಕ್ ಜ್ವರ(CCHF)ವನ್ನು ಸಾಮಾನ್ಯ ಭಾಷೆಯಲ್ಲಿ ಕಾಂಗೋ ಜ್ವರ ಎಂದು ಕರೆಯಲಾಗುತ್ತದೆ. ಈ ಕಾಂಗೋ ಜ್ವರಕ್ಕೂ ಕೂಡಾ ಔಷಧಿ ಇಲ್ಲದ ಕಾರಣ ಜಾನುವಾರು-ಪ್ರಾಣಿಗಳು ಮತ್ತು ಮಾಂಸ ಮಾರಾಟಗಾರರು ಮತ್ತು ಪಶು ಸಂಗೋಪನಾ ಅಧಿಕಾರಿಗಳು ಸೂಕ್ತ ಮತ್ತು ಸಮಯೋಚಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರ: 24 ಗಂಟೆಗಳಲ್ಲೇ 11514 ಮಂದಿಗೆ ಕೊರೊನಾವೈರಸ್ ಸೋಂಕು
ಕಾಂಗೋ ವೈರಸ್ ಸೋಂಕು ತಗುಲಿರುವ ಪ್ರಾಣಿಗಳ ರಕ್ತ, ಮಾಂಸ ಮತ್ತು ಉಣ್ಣೆಗಳಿಂದ ಸೋಂಕು ಮನುಷ್ಯರಿಗೆ ಹರಡುತ್ತದೆ. ಈ ಹಿನ್ನೆಲೆ ಮಾಂಸ ಸೇವನೆ ಬಗ್ಗೆ ಜಾಗೃತಿ ವಹಿಸಲು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಸೂಚನೆ ನೀಡಲಾಗಿದೆ.
ಮಹಾರಾಷ್ಟ್ರದ ನೆರೆ ರಾಜ್ಯಗಳಲ್ಲಿ ಕಾಂಗೋ ವೈರಸ್
ಗುಜರಾತ್ ಹಲವು ಜಿಲ್ಲೆಗಳ ಜನರಲ್ಲಿ ಕಾಂಗೋ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಅಲ್ಲದೇ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಹಲವು ಜನರಿಗೆ ಕಾಂಗೋ ಜ್ವರದ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಪಾಲ್ಘರ್ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಡೆಪ್ಯುಟಿ ಆಯುಕ್ತ ಡಾ.ಪ್ರಶಾಂತ್ ಡಿ ಕಾಂಬ್ಳೆ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಕಾಂಗೋ ಜ್ವರ ಹರಡದಂತೆ ಗಡಿಯಲ್ಲಿ ಎಚ್ಚರಿಕೆ
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯು ಗುಜರಾತ್ ನ ವಾಲ್ಸದ್ ಜಿಲ್ಲೆಗೆ ಹೊಂದಿಕೊಂಡಿದೆ. ಈ ಹಿನ್ನೆಲೆ ಗಡಿಯಿಂದ ಸೋಂಕು ರಾಜ್ಯವನ್ನು ಪ್ರವೇಶಿಸದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಏಕೆಂದರೆ ಸೂಕ್ತ ಸಮಯದಲ್ಲಿ ಸೋಂಕಿನ ಬಗ್ಗೆ ಪರೀಕ್ಷೆ ನಡೆಸಿಕೊಳ್ಳದಿದ್ದಲ್ಲಿ, ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಶೇ.30ರಷ್ಟು ಸೋಂಕಿತರು ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಕಾಂಗೋ ವೈರಸ್ ಸೋಂಕಿತರ ಸಾವಿನ ಪ್ರಮಾಣವು ಶೇ.10 ರಿಂದ ಶೇ.40ರಷ್ಟಿದೆ.
ಕಾಂಗೋ ಜ್ವರಕ್ಕೂ ಸೂಕ್ತ ಚಿಕಿತ್ಸೆ, ಔಷಧಿಯಿಲ್ಲ
ಸಾಮಾನ್ಯವಾಗಿ ಕಾಂಗೋ ಜ್ವರದ ವೈರಸ್ ತಗುಲಿರುವ ಪ್ರಾಣಿಗಳ ರಕ್ತ ಮತ್ತು ಮಾಂಸ ಸೇವನೆಯಿಂದ ಮನುಷ್ಯರಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಹೀಗೆ ಮನುಷ್ಯನ ದೇಹವನ್ನು ಹೊಕ್ಕುವ ಅಪಾಯಕಾರಿ ವೈರಸ್ ಕೊಲ್ಲುವುದಕ್ಕೆ ಇದುವರೆಗೂ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆಯನ್ನು ಕಂಡು ಹಿಡಿದಿಲ್ಲ. ಈಗಾಗಲೇ ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಇದೀಗ ಕಾಂಗೋ ಜ್ವರ ಮತ್ತಷ್ಟು ಆತಂಕವನ್ನು ಹುಟ್ಟು ಹಾಕುತ್ತಿದೆ. ಒಂದು ರಾಜ್ಯದ ಗಡಿಯಲ್ಲಿರುವ ಕಾಂಗೋ ಜ್ವರದ ಹಾವಳಿ ಇಡೀ ರಾಜ್ಯಕ್ಕೆ ವ್ಯಾಪಿಸದಂತೆ ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ
ಭಾರತದಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲೇ ವರದಿಯಾಗಿದೆ. ರಾಜ್ಯದಲ್ಲಿ ಇದುವರೆಗೂ 1351153 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ 35751 ಜನರು ಪ್ರಾಣ ಬಿಟ್ಟಿದ್ದಾರೆ. 265033 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿದ್ದರೆ, 1049947 ಸೋಂಕಿತರು ಗುಣಮುಖರಾಗಿದ್ದಾರೆ.
Recommended Video