ಮಹಾರಾಷ್ಟ್ರ ಮಾಜಿ ಡಿಸಿಎಂ, ಹಾಲಿ ಸಚಿವ ಛಗನ್ ಭುಜ್ಬುಲ್ಗೆ ರಿಲೀಫ್
ಮುಂಬೈ, ಸೆಪ್ಟೆಂಬರ್ 9: ಮಹಾರಾಷ್ಟ್ರ ಸದನ್, ಮನಿ ಲಾಂಡ್ರಿಂಗ್ ಪ್ರಕರಣದ ಆರೋಪಿಯಾಗಿರುವ ಮಹಾರಾಷ್ಟ್ರದ ಎನ್ ಸಿಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ, ಹಾಲಿ ಸಚಿವ ಛಗನ್ ಭುಜ್ ಬುಲ್ ಅವರಿಗೆ ಶುಭ ಸುದ್ದಿ ಸಿಕ್ಕಿದೆ. ಮಹಾರಾಷ್ಟ್ರ ಸದನ್ ಹಗರಣದಲ್ಲಿ ಛಗನ್ ಭುಜ್ ಬುಲ್ ಸೇರಿದಂತೆ ಏಳು ಮಂದಿಯನ್ನು ಹಗರಣದಿಂದ ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಈ ಮುಂಚೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಛಗನ್ ಭುಜ್ ಬುಲ್ ರನ್ನು ಬಂಧಿಸಿದ್ದರು.
ಮಹಾರಾಷ್ಟ್ರದ ಕ್ಯಾಬಿನೆಟ್ ದರ್ಜೆ ಸಚಿವ ಛಗನ್ ಭುಜ್ಬಲ್ ಅವರನ್ನು ಮಹಾರಾಷ್ಟ್ರ ಸದನ ಹಗರಣದಿಂದ ಖುಲಾಸೆಗೊಳಿಸಿ ಮುಂಬೈನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. 2015ರಿಂದ ಸದರಿ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ, ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು.
ಈ ಮುಂಚೆ ಉಪ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರಾಗಿದ್ದ ಛಗನ್ ಭುಜ್ಬಲ್ ಅವರು ಮಹಾರಾಷ್ಟ್ರ ಸದನ ಹಗರಣದಲ್ಲಿ ತಮ್ಮ ಪಾತ್ರ ಏನಿಲ್ಲ, ಯಾವುದೇ ತೆರನಾದ ಅಕ್ರಮವನ್ನು ಎಸಗಿಲ್ಲ. ಇದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಎಚ್ ಎಸ್ ಸತ್ಭಾಯಿ ಮೇಲ್ಕಂಡ ಆದೇಶ ಹೊರಡಿಸಿದ್ದಾರೆ.
ಛಗನ್ ಭುಜ್ಬಲ್ ಅವರ ಪುತ್ರ ಪಂಕಜ್ ಮತ್ತು ಸಂಬಂಧಿ ಸಮೀರ್ ಹಾಗೂ ಇತರೆ ಐದು ಮಂದಿ ವಿರುದ್ಧದ ಆರೋಪಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಏನಿದು ಪ್ರಕರಣ?: ಸರ್ಕಾರಿ ಸ್ವಾಮ್ಯದ ಪ್ರಾದೇಶಿಕ ಸಾರಿಗೆ ಕಚೇರಿಗೆ ಸೇರಿದ್ದ ಸ್ಥಳದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಯೋಜನೆಯೊಂದಕ್ಕೆ ಭುಜ್ಬಲ್ ನೆರವು ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 2015ರಲ್ಲಿ ಛಗನ್ ಭುಜ್ಬಲ್ ಸೇರಿದಂತೆ ಇತರೆ 16 ಮಂದಿ ವಿರುದ್ಧ ದೂರು ದಾಖಲಿಸಲಾಗಿತ್ತು. ದೆಹಲಿಯಲ್ಲಿ ಮಹಾರಾಷ್ಟ್ರ ಸದನ ಮತ್ತು ಮುಂಬೈನಲ್ಲಿ ಆರ್ಟಿಒ ಕಟ್ಟಡ ನಿರ್ಮಾಣವನ್ನು ಕೆಎಸ್ ಚಮಂಕರ್ ಎಂಟರ್ ಪ್ರೈಸಸ್ ಎಂಬ ಡೆವಲಪರ್ ಸಂಸ್ಥೆಗೆ ನೀಡಲಾಗಿತ್ತು. ಈ ಡೆವಲಪರ್ರಿಂದ ಭುಜ್ಬಲ್ ಮತ್ತು ಅವರ ಕುಟುಂಬ ಸದಸ್ಯರು ಲಂಚ ಪಡೆದಿದ್ದಾರೆ ಎಂಬ ಆರೋಪ ಮಾಡಲಾಗಿತ್ತು.
ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ಬ್ಯೂರೋ ಹಾಗೂ ಜಾರಿ ನಿರ್ದೇಶನಾಲಯದ ವರದಿ ಆಧಾರಿಸಿ ಬಾಂಬೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಆರಂಭಿಕ ತನಿಖೆ ನಡೆಸಲಾಗಿತ್ತು. ನಾಲ್ಕು ವಾರಗಳ ಕಾಲ ಎಸಿಬಿ ತಂಡ ಭುಜ್ ಬುಲ್ ಹಾಗೂ ಅವರ ಕುಟುಂಬದ ವಿರುದ್ಧ ತನಿಖೆ ನಡೆಸಿತ್ತು. ಮೊದಲಿಗೆ ಭುಜ್ ಬುಲ್ ಅವರ ಸಂಬಂಧಿ ಸಮೀರ್ ಭುಜ್ ಬುಲ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಭುಜ್ ಬುಲ್ ಅವರ ಮಗ ಪಂಕಜ್ ಭುಜ್ ಬುಲ್, ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು.
ಭ್ರಷ್ಟಾಚಾರದ ಆರೋಪಗಳ ಜೊತೆಗೆ ಬಹುಕೋಟಿ ನೀರಾವರಿ ಹಗರಣದ ಮೇಲೆ ಕೂಡಾ ತೀವ್ರ ತನಿಖೆ ಆಗಬೇಕಿದೆ. ಅಜಿತ್ ಪವಾರ್, ಸುನಿಲ್ ತತ್ಕರೆ ಹಾಗೂ ಭುಜ್ ಬಲ್ ಅವರ ಬಣ್ಣ ಬಯಲಾಗಬೇಕಿದೆ ಎಂದು ಬಿಜೆಪಿ ನಾಯಕರು ಅಂದು ಪ್ರತಿಕ್ರಿಯಿಸಿದ್ದರು.
ಮುಂಬೈ ಭಯೋತ್ಪಾದನೆ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದ ಮಾಜಿ ಉಪಮುಖ್ಯಮಂತ್ರಿ ಆರ್ ಆರ್ ಪಾಟೀಲ್ ನೈತಿಕೆ ಹೊಣೆ ಹೊತ್ತು ರಾಜೀನಾಮೆ ನೀಡಿದ ಬಳಿಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರು ಭುಜಬಲರನ್ನು ಆಯ್ಕೆ ಮಾಡಿದ್ದರು. ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಗೃಹ ಖಾತೆಯನ್ನೂ ಭುಜಬಲ ನಿಭಾಯಿಸಿದ್ದರು. 73 ವರ್ಷ ವಯಸ್ಸಿನ ಛಗನ್ ಭುಜ್ ಬುಲ್ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರು. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಸರ್ಕಾರದಲ್ಲಿ ಆಹಾರ ಮತ್ತು ಪಡಿತರ ಸರಬರಾಜು ಖಾತೆ ಸಚಿವರಾಗಿ ಭುಜ್ ಬಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸದರಿ ಪ್ರಕರಣದಲ್ಲಿ 2016ರಲ್ಲಿ ಬಂಧನಕ್ಕೊಳಗಾಗಿ ನಿರಂತರ ವಿಚಾರಣೆ ಎದುರಿಸಿದ್ದ ಭುಜ್ ಬಲ್ ಅವರಿಗೆ 2018ರಲ್ಲಿ ಬಾಂಬೆ ಹೈಕೋರ್ಟಿನಿಂದ ಜಾಮೀನು ಪಡೆದಿದ್ದರು.