ಆಮ್ಲಜನಕ ಬಿಕ್ಕಟ್ಟು ನಿವಾರಣೆಗೆ "ಆಕ್ಸಿಜನ್ ಆನ್ ವ್ಹೀಲ್" ಯೋಜನೆ
ಮುಂಬೈ, ಮೇ 1: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಆಮ್ಲಜನಕ ಸರಬರಾಜು ಸವಾಲನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಮಹೀಂದ್ರಾ ಗ್ರೂಪ್ ಚೇರ್ ಮನ್ ಆನಂದ್ ಮಹೀಂದ್ರಾ ಅವರು "ಆಕ್ಸಿಜನ್ ಆನ್ ವ್ಲೀಲ್"(ಚಕ್ರಗಳ ಮೇಲೆ ಆಮ್ಲಜನಕ) ಯೋಜನೆಯನ್ನು ಪರಿಚಯಿಸಿದ್ದಾರೆ.
ವೈದ್ಯಕೀಯ ಆಮ್ಲಜನಕ ಉತ್ಪಾದನೆ ಘಟಕಗಳಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಅನ್ನು ಸರಬರಾಜು ಮಾಡುವುದಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. "ಪ್ರಸ್ತುತ ಸಂದರ್ಭದಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸುವುದಕ್ಕೆ ಆಮ್ಲಜನಕ ತೀರಾ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್ ಉತ್ಪಾದನೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ ಆಕ್ಸಿಜನ್ ಸಿಲಿಂಡರ್ ಅನ್ನು ಸರಿಯಾದ ರೀತಿಯಲ್ಲಿ ಆಸ್ಪತ್ರೆ ಹಾಗೂ ಮನೆಗಳಿಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಮಹೀಂದ್ರಾ ಲಾಜಿಸ್ಟಿಕ್ಸ್ ಮೂಲಕ ಈ ಸಮಸ್ಯೆ ನಿವಾರಣೆಗೆ ಸೇತುವೆಯಾಗಿ ಯೋಜನೆ ಆರಂಭಿಸಲಾಗುತ್ತಿದೆ" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಆಮ್ಲಜನಕ ಸಿಲಿಂಡರ್ V/S ಸಾಂದ್ರಕ; ಕೊವಿಡ್ ರೋಗಿಗಳಿಗೆ ಯಾವುದು ಉತ್ತಮ?
ಮಹಾರಾಷ್ಟ್ರದಲ್ಲಿ ಸ್ಥಳೀಯ ಮಾರ್ಗಗಳ ಮೂಲಕ ವೈದ್ಯಕೀಯ ಆಮ್ಲಜನಕ ಉತ್ಪಾದಕರು ಮತ್ತು ಆಸ್ಪತ್ರೆಗಳ ನಡುವೆ ಸಂಪರ್ಕ ಸಾಧಿಸಲು ಟ್ರಕ್್ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಗ್ರಾಹಕರಿಗೆ ನೇರವಾಗಿ ಆಕ್ಸಿಜನ್ ಸರಬರಾಜು:
ವೈದ್ಯಕೀಯ ಆಮ್ಲಜನಕ ಸಂಗ್ರಹಣೆ, ತುಂಬಿಸುವುದು ಹಾಗೂ ವಿತರಣೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ಆ ಮೂಲಕ ಆಕ್ಸಿಜನ್ ಸಂಗ್ರಹಿಸಿ ಅಗತ್ಯವಿದ್ದಲ್ಲಿ ಗ್ರಾಹಕರಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ.
"ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಜೊತೆಗೆ ನಮ್ಮ ಕಾರ್ಯದ ಬಗ್ಗೆ ಬದ್ಧತೆಯನ್ನು ತೋರಿದ್ದೇವೆ. ಕೇವಲ 48 ಗಂಟೆಗಳಲ್ಲಿ ಮಹೀಂದ್ರಾ ಲಾಜಿಸ್ಟಿಕ್ಸ್ ತಂಡವು ಪುಣೆ ಮತ್ತು ಚಕನ್ನಲ್ಲಿ 20 ಬೊಲೆರೋ ವಾಹನಗಳೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದೆ" ಎಂದು ಹೇಳಿದ್ದಾರೆ. ಅಲ್ಲದೇ ಈಗಾಗಲೇ 13 ಆಸ್ಪತ್ರೆಗಳಿಗೆ ತುರ್ತು ಅಗತ್ಯಕ್ಕೆ ಅನುಗುಣಮವಾಗಿ 61 ಜಂಬೋ ಸಿಲಿಂಡರ್ ಅನ್ನು ಸರಬರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ.