ಅರ್ನಬ್ ಗೋಸ್ವಾಮಿ ಪ್ರಕರಣ: ನ್ಯಾಯಾಂಗಕ್ಕೆ ಸೆಡ್ಡು ಹೊಡೆದ ಮಹಾರಾಷ್ಟ್ರ
ಮುಂಬೈ, ಡಿಸೆಂಬರ್ 16: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧದ ಹಕ್ಕುಚ್ಯುತಿ ನಿಲುವಳಿ ವಿಚಾರವಾಗಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನೀಡುವ ಯಾವುದೇ ನೋಟಿಸ್ಗಳನ್ನು ಪರಿಗಣಿಸುವುದಿಲ್ಲ ಮತ್ತು ಅವುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ಎರಡೂ ಸದನಗಳಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಮೂಲಕ ನ್ಯಾಯಾಂಗದ ಅಧಿಕಾರದ ಗಡಿಯನ್ನು ಮಹಾರಾಷ್ಟ್ರ ಪ್ರಶ್ನಿಸಿದೆ.
ಅಂತಹ ನೋಟಿಸ್ಗಳಿಗೆ ಪ್ರತಿಕ್ರಿಯೆ ನೀಡುವುದು ಶಾಸಕಾಂಗದ ಒಳಗೆ ನ್ಯಾಯಾಂಗವು ನಿಗಾವಹಿಸಬಹುದು ಎಂಬುದನ್ನು ಒಪ್ಪಿಕೊಂಡಂತೆ ಆಗುತ್ತದೆ. ಅಲ್ಲದೆ ಇದು ಸಂವಿಧಾನದ ಮೂಲ ರಚನೆಯ ಉದ್ದೇಶವನ್ನು ಸಡಿಲಗೊಳಿಸುತ್ತದೆ ಎಂದು ಮಂಗಳವಾರ ಅಂತ್ಯಗೊಂಡ ಎರಡು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿದೆ.
ಮೋದಿಯನ್ನು ಹಣಿಯಲು ಸಂಚುಗಾರ ಆಗಬೇಕು, ಮಹಾತ್ಮನಲ್ಲ: ಅರ್ನಬ್ ಹೇಳಿದ್ದ ಮಾತು
ಈ ಪ್ರಸ್ತಾವನೆಯನ್ನು ರಾಜ್ಯ ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಯಿತು ಎಂದು ಸ್ಪೀಕರ್ ನಾನಾ ಪಟೋಲೆ ಘೋಷಿಸಿದರು. ಸುಪ್ರೀಂಕೋರ್ಟ್ ಕಳುಹಿಸಿದ ಯಾವುದೇ ನೋಟಿಸ್ ಅಥವಾ ಸಮನ್ಸ್ಗೆ ಸ್ಪೀಕರ್ ನಾನಾ ಪಟೋಲೆ ಅಥವಾ ಉಪ ಸ್ಪೀಕರ್ ನರಹರಿ ಜಿರ್ವಾಲ್ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಲಾಗಿದೆ. ಮುಂದೆ ಓದಿ.
ನೋಟಿಸ್ ಬಂದರೆ ಪರಿಗಣಿಸುವುದಿಲ್ಲ
ವಿಧಾನಪರಿಷತ್ನಲ್ಲಿ ಕೂಡ ಪ್ರಸ್ತಾವನೆಯನ್ನು ಅವಿರೋಧವಾಗಿ ಅಂಗೀಕರಿಸಲಾಯಿತು ಎಂದು ಅಧ್ಯಕ್ಷ ರಾಮರಾಜೆ ನಾಯಕ್ ನಿಂಬಾಳ್ಕರ್ ತಿಳಿಸಿದರು. ಅರ್ನಬ್ ಗೋಸ್ವಾಮಿ ವಿರುದ್ಧದ ಹಕ್ಕುಚ್ಯುತಿ ನಿಲುವಳಿ ವಿಚಾರವಾಗಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ನಿಂದ ಯಾವುದೇ ಸಮನ್ಸ್ ಅಥವಾ ನೋಟಿಸ್ ಬಂದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತೀರ್ಮಾನಿಸಲಾಯಿತು.
ಪರಸ್ಪರ ಗೌರವಿಸಬೇಕು
'ಸರ್ಕಾರದ ಮೂರು ಅಂಗಗಳ ನಡುವಿನ ಗಡಿಯನ್ನು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳು ತಮ್ಮ ಗಡಿಗಳನ್ನು ಗೌರವಿಸಬೇಕು. ಇನ್ನೊಬ್ಬರ ಗಡಿಯೊಳಗೆ ಯಾರೂ ಅತಿಕ್ರಮಣ ಮಾಡುವಂತಿಲ್ಲ' ಎಂದು ಸ್ಪೀಕರ್ ಪಟೋಲೆ ಹೇಳಿದರು.
ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
ಸದಾ ಹಸ್ತಕ್ಷೇಪ ಮಾಡಬಹುದು ಎಂದಲ್ಲ
'ಸಾರ್ವಜನಿಕವಾಗಿ ಶಾಸಕರು, ಕಾರ್ಯಾಲಯಗಳು, ಅದರ ಕಾರ್ಯದರ್ಶಿಗಳು ಮತ್ತು ಇತರೆ ಅಧಿಕಾರಿಗಳು ಕೋರ್ಟ್ ನೋಟಿಸ್ಗಳಿಗೆ ಹಾಗೂ ಇತರೆ ವಿಚಾರಗಳಿಗೆ ಪ್ರತಿಕ್ರಿಯಿಸುತ್ತಾರೆ. ಅದನ್ನು ಒಪ್ಪಿಕೊಳ್ಳುವ ಮಾತ್ರಕ್ಕೆ ಶಾಸಕಾಂಗದಲ್ಲಿ ನ್ಯಾಯಾಂಗ ಸದಾ ಮೂಗುತೂರಿಸಬಹುದು ಎಂದಲ್ಲ. ಅದು ಸಂವಿಧಾನದ ಮೂಲ ರಚನೆಯನ್ನು ಅಸ್ಥಿರಗೊಳಿಸುತ್ತದೆ' ಎಂದು ಅಧ್ಯಕ್ಷ ನಿಂಬಾಳ್ಕರ್ ತಿಳಿಸಿದರು.
ಪ್ರತಾಪ್ ಸರ್ನಾಯಕ್ ಆರೋಪ
ಅರ್ನಬ್ ಗೋಸ್ವಾಮಿ ವಿರುದ್ಧ ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಅವರು ಸೆ. 8ರಂದು ಹಕ್ಕುಚ್ಯುತಿ ಉಲ್ಲಂಘನೆ ಸೂಚನೆ ಮಂಡಿಸಿದ್ದರು. ಟಿವಿ ಚರ್ಚೆಗಳಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ಅವಹೇಳನಾಕಾರಿ ಹಾಗೂ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಸದರು ಮತ್ತು ಶಾಸಕರನ್ನು ಕೂಡ ಅವಮಾನಿಸಲಾಗುತ್ತಿದೆ ಎಂದು ಅರ್ನಬ್ ವಿರುದ್ಧ ಆರೋಪಿಸಿದ್ದರು.
ಅರ್ನಬ್ಗೆ ಬೆದರಿಕೆ: ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ಸಮನ್ಸ್
ನೋಟಿಸ್ ನೀಡಿದ್ದ ಸುಪ್ರೀಂಕೋರ್ಟ್
ಹಕ್ಕುಚ್ಯುತಿ ನಿಲುವಳಿಯನ್ನು ಪ್ರಶ್ನಿಸಿ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್ 6ರಂದು ವಿಚಾರಣೆಗೆ ಒಳಪಡಿಸಿದ್ದ ಸುಪ್ರೀಂಕೋರ್ಟ್, ವಿಧಾನಸಭೆ ಕಾರ್ಯದರ್ಶಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು. ಹಕ್ಕುಚ್ಯುತಿ ಪ್ರಕ್ರಿಯೆ ನೋಟಿಸ್ಅನ್ನು ಗೋಪ್ಯವಾಗಿರಿಸದೆ ಸುಪ್ರೀಂಕೋರ್ಟ್ಗೆ ಹೋಗಿದ್ದಕ್ಕಾಗಿ ಅರ್ನಬ್ ಅವರಿಗೆ ಪತ್ರ ಬರೆದಿದ್ದ ಕಾರಣ ಸುಪ್ರೀಂಕೋರ್ಟ್ ಈ ನೋಟಿಸ್ ಜಾರಿ ಮಾಡಿತ್ತು.