ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆರಿಗೆ ಕೊರೊನಾ ಪಾಸಿಟಿವ್
ಮುಂಬೈ, ಫೆಬ್ರವರಿ.18: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರೋಗ್ಯ ಸಚಿವ ರಾಜೇಶ್ ತೊಪೆ ಅವರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲೇ 5427 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 20,81,520ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ 38 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 51669ಕ್ಕೆ ಏರಿಕೆಯಾಗಿದೆ.
ಕೊರೊನಾ ಭೀತಿ: ಮುಂಬೈ ಮಹಾನಗರ ಪಾಲಿಕೆಯ ಹೊಸ ಮಾರ್ಗಸೂಚಿ
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಮುಂಬೈನಲ್ಲಿ ಹೊಸ ಕೊವಿಡ್-19 ನಿಯಮ ಮತ್ತು ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ಸಭೆ:
ಗುರುವಾರ ಕೊವಿಡ್-19 ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸುವುದಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಿದರು. ಈ ಸಭೆಯಲ್ಲಿ ಅಮರಾವತಿ, ಯವತ್ಮಲ್ ಮತ್ತು ಅಕೋಲಾ ಜಿಲ್ಲೆಗಳ ಮೇಲೆ ವಿಶೇಷ ಗಮನ ಹರಿಸಲಾಗಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಯಿತು. ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಆರೋಗ್ಯ ಸಚಿವ ರಾಜೇಶ್ ತೊಪೆ, ಸಹ ಹಾಜರಾಗಿದ್ದರು.
ಅಮರಾವತಿ ಜಿಲ್ಲೆಯಲ್ಲಿ ವಾರಾಂತ್ಯದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಫೆಬ್ರವರಿ.20ರ ರಾತ್ರಿ 8 ಗಂಟೆಯಿಂದ ಫೆಬ್ರವರಿ.22ರ ಬೆಳಗ್ಗೆ 7 ಗಂಟೆವರೆಗೂ ನಿಷೇಧಾಾಜ್ಞೆ ಜಾರಿಯಲ್ಲಿರುತ್ತದೆ. ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಎಲ್ಲ ಮಾರುಕಟ್ಟೆಗಳು ಬಂದ್ ಆಗಲಿವೆ ಎಂದು ಅಮರಾವತಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ದಿಲೀಪ್ ರಾನ್ಮೇಲೆ ತಿಳಿಸಿದರು.
ಮುಂಬೈನಲ್ಲಿ ಹೊಸ ಮಾರ್ಗಸೂಚಿ ಮತ್ತು ನಿಯಮ:
ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡದಿದ್ದರೆ ದಂಡ ವಿಧಿಸುವಂತೆ ಸೂಚಿಸಲಾಗಿದೆ. ಹೊಸ ಮಾರ್ಗಸೂಚಿ ಮತ್ತು ನಿಯಮಗಳಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.
ಮುಂಬೈ ಮಹಾನಗರ ಪಾಲಿಕೆಯ ಹೊಸ ಮಾರ್ಗಸೂಚಿ:
- ಒಂದು ಕಟ್ಟಡದಲ್ಲಿ 5ಕ್ಕಿಂತ ಹೆಚ್ಚು ಕೊವಿಡ್-19 ಸೋಂಕಿತರು ಕಂಡು ಬಂದಲ್ಲಿ ಕಟ್ಟಡವನ್ನು ಸೀಲ್ ಮಾಡುವುದು
- ಗೃಹ ದಿಗ್ಬಂಧನದಲ್ಲಿ ಇರುವ ಕೊರೊನಾವೈರಸ್ ಸೋಂಕಿತರ ಕೈಗಳಿಗೆ ಸ್ಟ್ಯಾಂಪ್ ಹಚ್ಚುವುದು
- ಸ್ಥಳೀಯ ರೈಲುಗಳಲ್ಲಿ ಮಾಸ್ಕ್ಲ ಧರಿಸದೇ ಸಂಚರಿಸುವವರ ಮೇಲೆ ನಿಗಾ ವಹಿಸಲು 300 ಮಾರ್ಷಲ್ ಗಳನ್ನು ನೇಮಿಸಿಕೊಳ್ಳುವುದು
- ಮುಂಬೈನಲ್ಲಿ ನಿಯಮ ಉಲ್ಲಂಘಿಸುವವರ ಮೇಲೆ ಲಕ್ಷ್ಯ ವಹಿಸಲು ಹೆಚ್ಚುವರಿ ಮಾರ್ಷಲ್ ನೇಮಕ
- ಕೊವಿಡ್-19 ನಿಯಮ ಉಲ್ಲಂಘಿಸುವ ಮದುವೆ ಸಭಾ ಭವನ, ಕ್ಲಬ್, ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡುವುದು
- ಬ್ರೆಜಿಲ್ ನಿಂದ ಆಗಮಿಸಿದ ಪ್ರಯಾಣಿಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರಿಸುವುದು
- ಹೆಚ್ಚು ಹೆಚ್ಚು ಸೋಂಕಿತರು ಕಂಡು ಬರುವ ಪ್ರದೇಶದಲ್ಲಿ ಕೊರೊನಾವೈರಸ್ ತಪಾಸಣೆಯನ್ನು ಹೆಚ್ಚಿಸುವುದು