ಧೂಮಪಾನ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಹೊಸ ನಿಯಮ
ಮುಂಬೈ, ಮೇ 30: ಕೊರೊನಾ ವೈರಸ್ ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ವೈರಸ್ ಹಬ್ಬುವಿಕೆಯನ್ನು ಕಡಿಮೆ ಮಾಡಲು, ಅಲ್ಲಿನ ಸರ್ಕಾರ ಹೊಸ ಹೊಸ ನಿಯಮಗಳನ್ನು ತರುತ್ತಿದೆ. ಸದ್ಯ, ಮತ್ತೊಂದು ನಿಯಮದ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಹಾಗೂ ಗುಟ್ಕಾ ಉಗಿಯುವುದಕ್ಕೆ ನಿಯಂತ್ರಣ ತಂದಿದೆ.
ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುವುದು ಹಾಗೂ ಗುಟ್ಕಾ ಉಗಿಯುವುದು ಮಾಡುವವರಿಗೆ, ಶಿಕ್ಷಾರ್ಹ ಅಪರಾಧ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಈ ನಿಯಮವನ್ನು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.
ಕೋವಿಡ್-19: ಧೂಮಪಾನಿಗಳಿಗೆ ಹೆಚ್ಚು ಅಪಾಯ-ಡಾ. ವಿಶಾಲ್ ರಾವ್
ಈ ನಿಯಮವನ್ನು ಮೊದಲ ಬಾರಿಗೆ ಉಲ್ಲಂಘಿಸಿದವರು 1,000 ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ ಮತ್ತು ಒಂದು ದಿನ ಸಾರ್ವಜನಿಕ ಸೇವೆಯನ್ನು ಮಾಡಬೇಕಾಗುತ್ತದೆ ಎಂದು ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.
ಎರಡನೇ ಬಾರಿಗೆ 3,000 ರೂಪಾಯಿಗಳ ದಂಡವನ್ನು ಕಟ್ಟಬೇಕು ಮತ್ತು ಮೂರು ದಿನಗಳವರೆಗೆ ಸಾರ್ವಜನಿಕ ಸೇವೆಯನ್ನು ಮಾಡಬೇಕಾಗುತ್ತದೆ. ಆ ನಂತರ ಶಿಕ್ಷೆ 5000 ರೂಪಾಯಿ ದಂಡ ಮತ್ತು ಐದು ದಿನಗಳ ಸಾರ್ವಜನಿಕ ಸೇವೆಯನ್ನು ಮಾಡಬೇಕಾಗುತ್ತದೆ.
ಇದಲ್ಲದೆ, ಬಾಂಬೆ ಪೊಲೀಸ್ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಪ್ರಕಾರ, ಶಿಕ್ಷೆ ಆರು ತಿಂಗಳಿಂದ ಎರಡು ವರ್ಷಗಳ ಜೈಲು ಅಥವಾ ದಂಡ ಇರುತ್ತದೆ ಎಂದು ರಾಜೇಶ್ ತೋಪೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶುಕ್ರವಾರ ರಾತ್ರಿಯವರೆಗೆ 62228 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. 2,098 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.