ವಿದೇಶಗಳಿಂದ ಕೊರೊನಾ ಲಸಿಕೆ ಆಮದಿಗೆ 'ಮಹಾ' ಸರ್ಕಾರದ ಚಿಂತನೆ
ಮುಂಬೈ, ಮೇ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ನೇರವಾಗಿ ಸಾರ್ವಜನಿಕರ ಬಳಕೆಗಾಗಿ ಕೊವಿಡ್-19 ಲಸಿಕೆಯನ್ನು ಆಮದು ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.
ಕೊವಿಡ್-19 ಲಸಿಕೆ ಆಮದು ಮಾಡಿಕೊಳ್ಳುವುದು ಸಾಧ್ಯವಾದಲ್ಲಿ ಮೂರು ವಾರಗಳಲ್ಲಿ ವಿತರಣೆಯ ಮಾರ್ಗಸೂಚಿ ರಚಿಸಲಾಗುತ್ತದೆ. ಕೊರೊನಾ ಲಸಿಕೆ ಮೇಲಿನ ವೆಚ್ಚವು ಒಂದು ಅಂಶವೇ ಅಲ್ಲ, ಸರ್ಕಾರ ಈಗ ಸಾಧ್ಯವಾದಷ್ಟು ಬೇಗ ಲಸಿಕೆಯನ್ನು ಸಂಗ್ರಹಿಸಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.
ಆಕ್ಸಿಜನ್ ಪೂರೈಕೆ; ಕರ್ನಾಟಕಕ್ಕೆ ಕೊಡುಗೆ ಕೊಟ್ಟ ಕೇಂದ್ರ
ಮಹಾರಾಷ್ಟ್ರದ ಕೂಡ ಇತರೆ ರಾಜ್ಯಗಳಂತೆ ಕೊರೊನಾವೈರಸ್ ಲಸಿಕೆ ಕೊರತೆಯನ್ನು ಎದುರಿಸುತ್ತಿದೆ. ಹಾಗಾಗಿ ಜಾಗತಿಕ ಮಟ್ಟದಿಂದ ಲಸಿಕೆಯನ್ನು ಹೇಗೆ ಸಂಗ್ರಹಿಸಬಹುದು ಎನ್ನುವ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಒಂದು ವೇಳೆ ಅದನ್ನು ಮಾಡಲು ಸಾಧ್ಯವಾದರೆ, ಮೂರು ವಾರಗಳಲ್ಲಿ ಮುಂಬೈನಲ್ಲಿ ಲಸಿಕೆ ವಿತರಣೆ ಮಾಡುವುದು ಹೇಗೆ ಎಂಬ ಬಗ್ಗೆ ಮಾರ್ಗಸೂಚಿ ರಚಿಸಲಾಗುವುದು ಎಂದು ಸಚಿವ ಆದಿತ್ಯ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ಕೊವಿಡ್-19 ಲಸಿಕೆ ಪಡೆಯಲು ಜನರ ಉತ್ಸಾಹ:
ಮೊದಲಿನ ಸನ್ನಿವೇಶವನ್ನು ಗಮನಿಸಿದರೆ ಪ್ರಸ್ತುತ ಸ್ಥಿತಿಯಲ್ಲಿ ಜನರು ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಳ್ಳುವಲ್ಲಿ ಯಾವುದೇ ರೀತಿ ಹಿಂಜರಿಕೆಯನ್ನು ತೋರಿಸುತ್ತಿಲ್ಲ. ಬದಲಿಗೆ ಎರಡು ಡೋಸ್ ಲಸಿಕೆಯನ್ನು ಪಡೆದು ಕೊವಿಡ್-19 ನಂತರದ ಬದುಕು ಕಟ್ಟಿಕೊಳ್ಳುವುದಕ್ಕೆ ಸಿದ್ಧರಾಗುತ್ತಿದ್ದಾರೆ. ಈ ಹಂತದಲ್ಲಿ ಲಸಿಕೆಯನ್ನು ಒದಗಿಸುವುದು ಬಹುಮುಖ್ಯವಾಗಿರುತ್ತದೆ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಮುಂಬೈನಲ್ಲಿ ತಗ್ಗಿದ ಕೊರೊನಾವೈರಸ್ ಪ್ರಕರಣ:
ಕಳೆದ ಏಪ್ರಿಲ್ 14ರ ವೇಳೆಗೆ ಪ್ರತಿನಿತ್ಯ 11,000ಕ್ಕೂ ಹೆಚ್ಚು ಕೊವಿಡ್-19 ಪ್ರಕರಣಗಳನ್ನು ದಾಖಲಿಸುತ್ತಿದ್ದ ಮುಂಬೈನಲ್ಲಿ ಚಿತ್ರಣ ಬದಲಾಗಿದೆ. ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ ಕೇವಲ 1794 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಭಾರತದಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವ ಹೊರತಾಗಿ ಭಾರತೀಯರೆಲ್ಲ ಸುರಕ್ಷಿತರು ಅಂತಾ ಹೇಳಲು ಆಗುವುದಿಲ್ಲ ಎಂದು ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.