ಕೊವಿಡ್-19 ನಿಯಂತ್ರಣಕ್ಕೆ 'ನನ್ನ ಕುಟುಂಬ, ನನ್ನ ಜವಾಬ್ದಾರಿ' ಅಭಿಯಾನ
ಮುಂಬೈ, ಸಪ್ಟೆಂಬರ್.13: ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ದಾಖಲೆ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ವಿಶ್ವದಲ್ಲೇ 10ಕ್ಕಿಂತ ಹೆಚ್ಚು ಕೊವಿಡ್-19 ಪ್ರಕರಣಗಳಿರುವ ರಾಜ್ಯ ಎಂದು ಮಹಾರಾಷ್ಟ್ರ ಗುರುತಿಸಿಕೊಂಡಿದ್ದು, ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರವು ಹೊಸ ಅಭಿಯಾನ ಶುರು ಮಾಡಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ನಾವು ನನ್ನ ಕುಟುಂಬ, ನನ್ನ ಜವಾಬ್ದಾರಿ(My Family, My Responsibility) ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
'ಕೊರೊನಾ ಅಂತ್ಯವಾಗಿದೆ' ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ
ಕೊರೊನಾವೈರಸ್ ಸೋಂಕು ಹರಡುವಿಕೆ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಮಹಾಮಾರಿಯೇ ಹೊರಟು ಹೋಗಿದೆ ಎಂಬ ಭಾವನೆಯನ್ನು ಹುಟ್ಟು ಹಾಕುವುದಕ್ಕೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ನಾನು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ, ಆದರೆ ಇದರ ಹಿಂದೆ ಮಹಾರಾಷ್ಟ್ರವನ್ನು ಅಪಖ್ಯಾತಿಗೆ ಗುರಿಪಡಿಸುವ ಪಿತೂರಿಯಿದೆ ಎಂದು ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ನನ್ನ ಮೌನಕ್ಕೆ ಬೇರೆ ಅರ್ಥವಿಲ್ಲ ಎಂದ ಸಿಎಂ:
ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ರಾಜಕಾರಣಕ್ಕಾಗಿ ಮಹಾಮಾರಿಯೇ ಸುಳ್ಳು ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ. ಇದರ ಬಗ್ಗೆ ನಾನು ಮೌನವಾಗಿದ್ದೀನಿ ಎಂದರೆ ಅದರ ಅರ್ಥ ನನಗೆ ಉತ್ತರ ಗೊತ್ತಿಲ್ಲ ಎಂಬುದಲ್ಲ ಎಂದು ಉದ್ಧವ್ ಠಾಕ್ರೆ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 10,37,765ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ 29115 ಜನರು ಪ್ರಾಣ ಬಿಟ್ಟಿದ್ದಾರೆ. 7,28,512 ಸೋಂಕಿತರು ಗುಣಮುಖರಾಗಿದ್ದರೆ, ಒಟ್ಟು 2,79,768 ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.